ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಕ್ಕಲಿಗ ಸೇರಿದಂತೆ ಇತರೆ ಸಮಾಜದ ಪ್ರಭಾವಕ್ಕೆ ಒಳಗಾಗಿರುವ ಕುಂಚಿಟಿಗ ಜಾತಿಯ ಕೆಲವರು ಸೇರಿದಂತೆ ಒಕ್ಕಲಿಗ ಮಠಾಧೀಶರು ಕುಂಚಿಟಿಗ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷ ಜಿ.ಚಂದ್ರಯ್ಯ ಕಿಡಿಕಾರಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಸೆ.22ರ ಸೋಮವಾರದಿಂದ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುತ್ತಿದೆ. ಕೇವಲ 15 ದಿನಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಎರಡು ಮೂರು ತಿಂಗಳುಗಳ ಕಾಲ ಸಮೀಕ್ಷೆ ಮಾಡಿ ಸಮಗ್ರವಾದ ವರದಿ ನೀಡಬೇಕು ಎಂದು ಅವರು ಆಗ್ರಹ ಮಾಡಿದರು.
ಕುಂಚಿಟಿರ ಸಮಾಜವನ್ನು ದಾರಿ ತಪ್ಪಿಸುತ್ತಿರುವವರ ವಿರುದ್ಧ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.
ಧರ್ಮದಿಂದ ಧರ್ಮಕ್ಕೆ ಮತಾಂತರ ಮಾಡುವ ಅವಕಾಶವನ್ನು ಸಂವಿಧಾನ ನೀಡಿದೆ. ಆದರೆ ಹುಟ್ಟಿದ ಜಾತಿಯಿಂದ ಬೇರೆ ಜಾತಿಗೆ ಬದಲಾಗುವಂತ ಅವಕಾಶವನ್ನು ಸಂವಿಧಾನ ನೀಡಿಲ್ಲ, ಹಾಗಾಗಿ ಯಾವೊಬ್ಬ ಕುಂಚಿಟಿಗ ಜಾತಿಯವರು ಒಕ್ಕಲಿಗ ಎಂದು ಬರೆಸಬಾರದು ಚಂದ್ರಯ್ಯ ಅವರು ತಿಳಿಸಿದರು.
ಜಿಲ್ಲಾ ಕುಂಚಿಟಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಹೆಂಜಾರಪ್ಪ ಮಾತನಾಡಿ, ಕುಂಚಿಟಿಗರು ಒಕ್ಕಲಿಗ ಅಥವಾ ಲಿಂಗಾಯತರಲ್ಲ. ಬದಲಿಗೆ ಕುಂಚಿಟಿಗ ಪ್ರತ್ಯೇಕ ಜಾತಿ. ಕುಂಚಿಟಿಗರು ಒಕ್ಕಲಿಗ ಜಾತಿಗೆ ಸೇರ್ಪಡೆ ಆಗುವುದಾದರೆ ಮುಂದೆ ಉದ್ಯೋಗಕ್ಕೆ ಸೇರಿಕೊಳ್ಳುವ ಸಂದರ್ಭದಲ್ಲಿ ಸಿಂಧುತ್ವ ಸಮಸ್ಯೆ ಎದುರಾಗಲಿದ್ದು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ, ಅತಿ ಮುಖ್ಯವಾಗಿ ಸರ್ಕಾರ ಕುಂಚಿಟಿಗ ಜಾತಿಗೆ ಒಕ್ಕಲಿಗ ಜಾತಿ ಪ್ರಮಾಣ ಪತ್ರ ನೀಡುವುದಿಲ್ಲ ಎನ್ನುವ ಸತ್ಯ ಅರಿಯಬೇಕು ಎಂದು ಅವರು ಎಚ್ಚರಿಸಿದರು.
ಒಕ್ಕಲಿಗ ಅಥವಾ ಲಿಂಗಾಯತ ಜಾತಿಗೆ ಕುಂಚಿಟಿಗ ಜಾತಿಯನ್ನು ಸೇರಿಸಿಕೊಳ್ಳುವಂತವರು ಆಯಾಯ ಜಿಲ್ಲೆಗಳ ಜಿಲ್ಲಾಡಳಿತದಿಂದ ಕುಂಚಿಟಿಗ ಜಾತಿಗೆ ಒಕ್ಕಲಿಗ ಜಾತಿ ಪ್ರಮಾಣ ಪತ್ರ ಕೊಡಿಸಬೇಕು, ಪ್ರಭಾವಿ ಜಾತಿಗಳು ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ತರಾತುರಿಯಲ್ಲಿ ಕುಂಚಿಟಿಗ ಜಾತಿಗೆ ವಿಷ ಹಾಕುವುದು ಬೇಡ ಎಂದು ಹೆಂಜಾರಪ್ಪ ಅವರು ಮನವಿ ಮಾಡಿದರು.
ಜಾತಿಗಣತಿ ಸಂದರ್ಭದಲ್ಲಿ ಗೊಂದಲಗಳಿಗೆ ಒಳಗಾಗದೇ ಜಾತಿ ಕಾಲಂನಲ್ಲಿ ಕುಂಚಿಟಿಗ, ಉಪಜಾತಿ ಕಾಲಂನಲ್ಲೂ ಕುಂಚಿಟಿಗ ಎಂದು ನಮೂದಿಸಲು ಅವರು ಮನವಿ ಮಾಡಿದ್ದಾರೆ.

