ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಶಯ ಕಥೆ ಭಾಗ-5 ಕುಮಾರ್ ಬಡಪ್ಪ
ಅದ್ಯಾಕೋ ಏನೋ ಮೊನ್ನೆಯಿಂದ ಈ ಎರಡು ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅಂದೊಂದು ದಿನ ಪಾಲವ್ವ ತಂಬಿಗೆ ತಗೊಂಡು ನೀರ್ಕಡೆ ಹೋಗಿದ್ದಾಗ,ಜೊತೆ ಬಂದ ಹೆಂಗಸರು ಬಾಯಲ್ಲಿ ಗುನುಗಿಕೊಂಡಿದ್ದು,ಇವಳ ಗಂಡ ಮತ್ತು ಓಬವ್ವನ ಸುದ್ದಿನೇ.
ಆರು ವರ್ಷ ಆತು ಮದುವೆಯಾಗಿ,ಆದ್ರೂ ಮಕ್ಕಳಾಗಲಿಲ್ಲ ತಿಪ್ಪಯ್ಯನಿಗೇನೋ ಗಂಡಸ್ತನ ಕಡಿಮೆ ಅಂತ, ಓಬಿ ಗಾದ್ರಯ್ಯನ ಹಿಂದೆ ಬಿದ್ದಿದಾಳಂತೆ, ಇತ್ತೀಚೆಗೆ ಅವಳು ಹಳ್ಳಿಯಾಗೆ ಯಾವ ಹೆಂಗಸರತ್ರಾನೂ ಸೇರ್ತಿಲ್ವಂತೆ, ಗಾದ್ರಪ್ಪನಿಗೂ ಅವಳ ಮ್ಯಾಲೆ ಬೋ ಇಷ್ಟುವಂತೆ, ಸಂಜೆ ತಿಪ್ಪಯ್ಯನ ಜೊತೆ ಮನೆಗೆ ಬಂದ್ರೆ,ಮೊದಲು ಓಬವ್ವನ್ನ ನೋಡ್ಕಂಡು ಟೀ ಕುಡಿದೇ ಪಾಲವ್ವನ ಕಡೆ ಬರೋದಂತೆ. ಅವರಲ್ಲೊಬ್ಬಳು ಇನ್ನೊಬ್ಬರ ಮನೆ ಸುದ್ದಿ ನಮಗ್ಯಾಕೆ ನಡಿರೇ,ನಮ್ಗಂಡ್ರೂ ಒಳ್ಳೇರಲ್ಲ.
ಅಲ್ಲೊ ಇಲ್ಲೋ ಮೊಳಕೆಯಾಗಿ ಉಸಿರಾಡಿಕೊಂಡಿದ್ದ ಸುದ್ದಿ, ಕಿವಿಯಿಂದ ಕಿವಿಗೆ ಬಿದ್ದು ಗುಸು ಗುಸು ಎದ್ದಿತ್ತು.ಮಕ್ಕಳಿಲ್ಲದ ಓಬವ್ವನ ಜೊತೆ ಸ್ನೇಹದಿಂದಿದ್ದ ಪಾಲವ್ವ, ಈ ಸುದ್ದಿಯನ್ನ ಯಥಾವತ್ತಾಗಿ ನಂಬಿ ಸ್ನೇಹಕ್ಕೆ ಸಂಚಕಾರ ತಂದ್ಕೊಂಡಿದ್ಲು. ಆಗಿಂದ್ಲೇ ಗಂಡ ಹೆಂಡ್ತಿಯ ಮಧ್ಯೆ ಪ್ರತಿ ರಾತ್ರಿಯೂ ಬಡಿದಾಟವೇ. ಇದನ್ನ ಬಯಲಿಗಾಕದೆ ಗಾದ್ರಯ್ಯ ಕುಡ್ತ ಜಾಸ್ತಿ ಮಾಡಿ ಪಾಲವ್ವನಿಗೆ ಹೊಡೆಯೋದನ್ನ ಮುಂದು ಮಾಡಿದ್ದ. ಈ ಸುದ್ದಿ ಹೊಗೆಯಾಡೋಕೆ ಶುರುವಾದಂದಿನಿಂದ, ತಿಪ್ಪಯ್ಯನ ಸಹವಾಸವನ್ನೂ ಕಡಿಮೆ ಮಾಡಿದ್ದ. ಓಬವ್ವೆಯನ್ನಂತೂ ವಾರದ ಹಿಂದೆಯೇ ನೋಡಿದ್ದು ಮತ್ತೇ ನೋಡಿಯೇ ಇರಲಿಲ್ಲ. ಬಸಕ್ಕನ ಅಂಗಡಿಗೆ ಹೋಗುತ್ತಿದ್ದ ಬೋಸನಿಗೆ ಹಳ್ಳಿ ಜನ ಕೀಟ್ಲೆ ಮಾಡ್ತಿದ್ದುದೇ ಬೇರೆ ರೀತಿ. ಏನೂ ಗೊತ್ತಿರದ ಹುಡ್ಗ, ಸಣ್ಣವ್ವನ್ನ ಮಾತಾಡ್ಸಕಂಡು ಬಂದೇನೋ ಅಂದ್ರೆ, ಹೂಂ ಕಣಣ್ಣೋ ಸಣ್ಣವ್ವನೇ ದುಡ್ಡು ಕೊಟ್ಟಿದ್ದು,ಕಾರ ಮುಂಡಕ್ಕಿ ತಕ್ಕ ಅಂತ.
ಹೌದೌದು ನಿನ್ನ ಸುಖ ಯಾರಿಗೈತೇಳು,ಒಬ್ಬ ಅಪ್ಪ ಇಬ್ರೂ ಅವ್ವಗಳು,ಜನ ಮಾತಾಡ್ತಾ ನಗುತ್ತಿದ್ರೆ ಬೋಸನು ನಕ್ಕಬಿಡ್ತಿದ್ದ,ಅಂಗಡಿ ಬಸಕ್ಕನೇ ಬೈದು ಜನ್ರನ್ನ ಸುಮ್ನೆ ಮಾಡಿ ಇವನ್ನ ಮನೆಗೆ ಕಳಸ್ತಿದ್ಲು.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ…….

