ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಓಬವ್ವಗೆ ನನ್ನ ಮ್ಯಾಲೆ ಪಿರೂತಿ ಇದ್ದಿದ್ರೇ ಕೇಳಿಬಿಡಬೇಕಾಗಿತ್ತು. ಯಾಕ ನನ್ನೊಳಗೇ ಬಂದು ಕಾಡ್ತಾಳವ್ಳು. ಬಿರುಸಿನ ಕಾವಲ್ಲೂ ತೆಳುಗಾಳಿ ಸುಳಿದಂತಾಗಿ ಮೆದುವಾಗಿ ಹೋಗಿದ್ದ, ಎಂಥ ಕಾಡುವಿಕೆ ಅವಳದ್ದು ಕೂಡಿದ್ರೆ ಅಂಥವಳ ಜೊತೆ ಕೂಡಲೇಬೇಕು ಒಮ್ಮೆ…..
ಥೂ ಲಜ್ಜೆಗೆಟ್ಟ ನಾಯಿ ನಾಚಿಕೆ ಆಗ್ಲಿಲ್ವೇನೋ ನಿಂಗೆ, ನಿಶೆಯ ಅಮಲಿನಲ್ಲಿ ಎತ್ತಲೋ ಹರಿದಾಡುತ್ತಿದ್ದ ಅವನ ಒಳ ಮನಸ್ಸು, ಅರವಿನಾಳಕ್ಕಿಳಿದು ಜಾಡಿಸಿದಂತಿತ್ತು.
ಗೆಣೆಕಾರನ ಹೆಂಡ್ತಿ ಅವ್ಳು ತಾಯಿಯೂ ಹೌದು, ತಂಗಿಯೂ ಹೌದು, ಮಗಳೂ ಅಲ್ವೇನೋ ಕಾಮಪಿಶಾಚಿ, ಥೂ ನಿನ್ನ ಜನ್ಮಕ್ಕೆ….
ಮೋಹದಾಸೆಯ ಅನಂತಗಳಲಿ ತೆಲುತ್ತಿದ್ದವನಿಗೆ, ಯಾಕೋ ! ಏನೋ ? ಮನೆ ಮುರಿಯೋ ಮಾತುಗಳ ಜತೆ ಸೇರಿ ಕಟ್ಕೊಂಡಿದ್ದ ಗೋಪುರವೇ ಕಳಚಿದಂತಾಗಿ ಒಳಗೊಳಗೇ ಕಸಿವಿಸಿಯಾದ.
ಅಕ್ಕ ಪಕ್ಕ ಗಮನಿಸಿದ ಎಲ್ರೂ ಅವರವರ ನಶೆಯಲ್ಲೇ, ಆದ್ರೂ ಗಾದ್ರಯ್ಯನಿಗೆ ಮುಖ ಎತ್ತೋಕಾಗ್ಲಿಲ್ಲ, ಬಯಸಬಾರದಾಗಿತ್ತು ಅಸಹ್ಯ, ತೆಪ್ಪು ಮಾಡ್ತಿದೀನಿ ನಶೆಯಲ್ಲೂ ಚಡಪಡಿಸಿದ, ಹೌದು ಅವ್ಳು ಎಂದಾದ್ರೂ ಆ ತರ ನಡ್ಕಂಡವ್ಳ ನನ್ನ ಜತೆ, ತಿಪ್ಗಾ ನನ್ನ ಬಾಲ್ಯದ ಜತೆಗಾರ, ಓಬವ್ವ ಅವನ ಸಂಸಾರ, ಅದನ್ನೇ ಮರೆತ ನಾನು ಹಳ್ಳಿ ಮಂದಿ ಮಾತಿಗೆ ಜೋತುಬಿದ್ದದ್ದು ತಪ್ಪಲ್ವೇ.
ಬಾಯಿ ತುಂಬಾ ಅಣ್ಣಾ ಅಂದಾಗಲೆಲ್ಲಾ ನನಗೊಬ್ಬಳು ತಂಗಿ ಅದಾಳಲ್ಲ ಅಂತ ಭಾವಿಸಿಕೊಳ್ತಿದ್ದೆ, ನನ್ನ ಚಿತ್ತ ಎತ್ತ ಹೋಗಿತ್ತೋ ದ್ಯಾವ್ರೇ ಗರತಿ ಮ್ಯಾಲ ಮನಸ್ಸು ಮಡಗಿದ್ರೆ ಮಸಣ ಹತ್ರವಂತೆ.

ತಪ್ಪಿನ ಅರಿವಾಗಿ ತಳಮಳಿಸಿ ಕೈ ಕೈ ಹಿಸುಕಿಕೊಂಡ, ಹೋಗಿ ಯಾರು ಇಲ್ದಾಗ ಅವಳ ಕಾಲು ಹಿಡಿದು ಬಿಡಬೇಕು ಅನ್ನಿಸ್ತು.
ಪಾಲಿ, ಮಂದಿ ಮಾತ್ಕೇಳಿ ಬೀದಿರಂಪ ಮಾಡಿದ್ಲು,ನಾನು ಕೂಡ ಹೊಡ್ದು ಬಡ್ದೂ ವಿಷ್ಯಾನ ಮತ್ತಷ್ಟು ಗಟ್ಟಿ ಮಾಡ್ಬಿಟ್ಟೆ, ಅವಳಿಗೂ ಹೇಳ್ಕೊಂಡು ನನ್ನ ಸಂಸಾರನ ಸರಿ ಮಾಡ್ಕಬೇಕು, ಅಷ್ಟು ಕುಡಿದಿದ್ರೂ ನಶೆಯೇ ಏರುವಲ್ದು, ವಿಕಾರಗಳು ವಿಚಾರವಾಗಿ ತಲೆಗತ್ತಿದ್ದೇ ತಡ,ಮತ್ತಷ್ಟು ಸಾರಾಯಿ ಬೇಕೆನಿಸಿತ್ತು ಮನಸಿಗೆ , ಮುಗಿಸ್ಕೊಂಡವರು ಅಮಲಿನ ಹರಟೆಯಲ್ಲಿ ಮನೆದಾರಿ ಹಿಡಿದಿದ್ರು, ಗಾದ್ರಯ್ಯ ನಿಂತಲ್ಲಿಯೇ ನಿಂತಿದ್ದ,ಬಲು ಭಾರಹೊತ್ತು ಬಳಲಿದವನಂತೆ.
ಬೋಸ ದೂರದ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದನಾದ್ರೂ ಕೂಗಿ ಕರೆಯುತ್ತಿದ್ದದು ಮಾತ್ರ ಸಣ್ಣದನಿಯಲ್ಲಿ ಕೇಳುತ್ತಿತ್ತು. ಅಪ್ಪಯ್ಯ ಅಪ್ಪಯ್ಯಾ.. ಬಾ ಅಪ್ಪಯ್ಯಾ ಮನಿಗೋಗಾನ ಅಂತ ಅಪ್ಪನನ್ನ ಎಚ್ಚರಿಸುತ್ತಲೇ ಇದ್ದ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ……

