ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆಹಾರ ಉತ್ಪಾದನೆಯಲ್ಲಿ ಭಾರತ ಈಗ ಶಕ್ತಿಶಾಲಿಯಾಗಿದೆಯೆಂದರೆ ಅದಕ್ಕೆ ಡಾ.ಬಾಬು ಜಗಜೀವನರಾಂರವರು ಕಾರಣ ಎಂದು ಕರ್ನಾಟಕ ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್ಪಾಷ ಪ್ರಶಂಶಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬುಜಗಜೀವನರಾಂರವರ ೧೧೯ ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ದವಸ ಧಾನ್ಯಗಳ ಕೊರತೆಯಿಂದ ದೇಶ ಸಮಸ್ಯೆ ಎದುರಿಸುತ್ತಿದ್ದಾಗ ಹೆಚ್ಚು ಆಹಾರ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಿ ಹಸಿರು ಕ್ರಾಂತಿಯ ಹರಿಕಾರ ಎನ್ನುವ ಹೆಸರು ಪಡೆದುಕೊಂಡ ಡಾ.ಬಾಬು ಜಗಜೀವನರಾಂರವರು ಕಾಂಗ್ರೆಸ್ನಿಂದ ಸ್ವಲ್ಪ ದಿನಗಳ ಕಾಲ ದೂರವಾಗಿದ್ದರು. ಆಗ ಅವರಿಗೆ ಬಿಜೆಪಿ. ಜನತಾ ಪರಿವಾರದವರು ದೇಶದ ಪ್ರಧಾನಿಯನ್ನಾಗಿ ಮಾಡಲಿಲ್ಲ. ಮನಸ್ಸಿಗೆ ನೊಂದುಕೊಂಡು ಮತ್ತೆ ಕಾಂಗ್ರೆಸ್ಗೆ ಮರಳಿ ಜೀವಿತದ ಕೊನೆಯವರೆಗೂ ಪಕ್ಷದಲ್ಲಿಯೇ ಉಳಿದುಕೊಂಡಿದ್ದರು. ಅಂತಹವರ ಆದರ್ಶಗಳನ್ನು ಕಾಂಗ್ರೆಸ್ನವರು ಪಾಲಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ಎಐಸಿಸಿ. ಅಧ್ಯಕ್ಷರಾಗಿದ್ದ ಡಾ.ಬಾಬು ಜಗಜೀವನರಾಂರವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡಿದ್ದರು. ನೆಹರು, ಇಂದಿರಾಗಾಂಧಿ, ಲಾಲ್ಬಹದ್ದೂರ್ಶಾಸ್ತ್ರಿ ಇವರುಗಳು ದೇಶದ ಪ್ರಧಾನಿಯಾಗಿದ್ದಾಗ ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಪಾಕಿಸ್ತಾನ, ಚೀನಾ ನಮ್ಮ ದೇಶದ ಮೇಲೆ ಯುದ್ದಕ್ಕೆ ಬಂದಾಗ ಭಾರತವನ್ನು ವಿಜಯಶಾಲಿಯನ್ನಾಗಿಸಿದ ಕೀರ್ತಿ ಡಾ.ಬಾಬು ಜಗಜೀವನರಾಂರವರಿಗೆ ಸಲ್ಲಬೇಕೆಂದರು.
ಕಾರ್ಮಿಕ ಸಚಿವರಾಗಿದ್ದ ಅವರು ಕಾರ್ಮಿಕರು ದಿನಕ್ಕೆ ಎಂಟು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕೆಂಬ ಕಾಯಿದೆ ಜಾರಿಗೆ ತಂದರು. ಕೃಷಿ ಮಂತ್ರಿಯಾಗಿದ್ದಾಗ ರೈತರನ್ನು ಉತ್ತೇಜಿಸಿ ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡರು. ಕಾಂಗ್ರೆಸ್ನಲ್ಲಿ ಅಪಾರ ಗೌರವ ಸಂಪಾದಿಸಿದ್ದರು. ಅಂತಹ ಮಹಾನ್ ಪುರುಷರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ ಮಾತನಾಡುತ್ತ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂರವರು ದೇಶಕ್ಕೆ ಮತ್ತು ಪಕ್ಷಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ೧೧೯ ಹುಟ್ಟುಹಬ್ಬದಂದು ಅವರ ಸಾಧನೆಗಳನ್ನು ನೆನಪು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯ. ಭಾರತ ಆಹಾರವನ್ನು ಬೇರೆ ದೇಶಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಅದರ ಹಿಂದೆ ಜಗಜೀವನರಾಂರವರ ಪರಿಶ್ರಮವಿದೆ ಎಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಹಕ್ಕು ವಿಭಾಗದ ಅಧ್ಯಕ್ಷ ಡಿ.ಎಸ್.ಸುದರ್ಶನ್ ಮಾತನಾಡಿ ಶಾಲಾ ದಿನಗಳಲ್ಲಿ ಬಾಲಕನಾಗಿದ್ದಾಗಲೆ ಡಾ.ಬಾಬುಜಗಜೀವನರಾಂರವರು ಅಸ್ಪೃಶ್ಯತೆ ವಿರುದ್ದ ಸಿಡಿದೆದ್ದವರು. ನೆಹರು ಪ್ರಧಾನ ಮಂತ್ರಿಯಾಗಿದ್ದಾಗ ಕಾನೂನು ಸಚಿವರಾಗಿ ಕಾರ್ಮಿಕರ ಹಿತಕ್ಕಾಗಿ ಕಾನೂನುಗಳನ್ನು ಜಾರಿಗೊಳಿಸಿದರು. ಕೃಷಿ, ರಕ್ಷಣಾ, ರೈಲ್ವೆ ಖಾತೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅವರ ಪುತ್ರಿ ಮೀರಾಕುಮಾರ್ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದವರು. ಹಸಿರು ಕ್ರಾಂತಿಯ ಹರಿಕಾರ ಜಗಜೀವನರಾಂರವರ ಸಿದ್ದಾಂತಗಳನ್ನು ಪಕ್ಷದ ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ಕುಮಾರ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಾಪಯ್ಯ
ಚಿದಾನಂದಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಸುರೇಶ್ ಈಚಲನಾಗೇನಹಳ್ಳಿ, ಸೈಯದ್ ಸೈಫುಲ್ಲಾ, ಸೈಯದ್ ಅಕ್ಬರ್ ಇನ್ನು ಅನೇಕರು ಜಯಂತಿಯಲ್ಲಿ ಭಾಗವಹಿಸಿದ್ದರು.

