ಪದವಿ ಜೊತೆ ಕೌಶಲ್ಯ ಶಿಕ್ಷಣ ಅಗತ್ಯ- ಡಾ.ಬಸವಕುಮಾರ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪದವಿ ಜೊತೆ ಕೌಶಲ್ಯ ಶಿಕ್ಷಣವಿದ್ದಾಗ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಾತ್ಮಕ ಕಮಿಟಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ವಾಣಿಗೋತ್ರ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಬ್ರೈಟ್ ಮೈಂಡ್ಸ್ ಅಕಾಡೆಮಿ ಇನ್ಸ್‌ಟಿಟ್ಯುಟ್ ಆಫ್ ಟೆಕ್ನಾಲಜಿ ಅಂಡ್ ಎಜುಕೇಷನ್ ಕೇಂದ್ರ ಉದ್ಗಾಟಿಸಿ ಮಾತನಾಡಿದರು.

ಕೌಶಲ್ಯವಿಲ್ಲದಿದ್ದರೆ ಅಂಕ ಗಳಿಸಿ ಪ್ರಯೋಜನವಿಲ್ಲ. ಪದವಿಯ ಜೊತೆ ಇಂತಹ ಕೋರ್ಸ್‌ಗಳನ್ನು ಮಾಡಿ ಸರ್ಟಿಫಿಕೇಟ್‌ಗಳನ್ನಿಟ್ಟುಕೊಂಡರೆ ಬೆಂಗಳೂರಿನ ಮೆಟ್ರೋದಂತ ಕಡೆ ಕೆಲಸಗಳಿಗೆ ಅವಕಾಶವಿರುತ್ತದೆ. ಅಧ್ಯಯನಕ್ಕಿಂತ ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದು ತಿಳಿಸಿದರು.

ಯಾವುದೇ ಒಂದು ಸಂಸ್ಥೆ ಆರಂಭಿಸಲಿ ಲಾಭಕ್ಕಿಂತ ಉಪಯುಕ್ತ ಕೆಲಸಕ್ಕೆ ಪ್ರಾಶಸ್ತ್ಯ ಕೊಡಬೇಕು. ಇಂಜಿನಿಯರಿಂಗ್ ಇನ್ನಿತರೆ ಉನ್ನತ ಶಿಕ್ಷಣ ಪಡೆದವರೆಲ್ಲಾ ಬೆಂಗಳೂರು, ಮಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ. ಹಾಗಾಗಿ ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗದಲ್ಲಿ ಇಂತಹ ಕೌಶಲ್ಯಯುಕ್ತ ತರಬೇತಿಯ ಅವಶ್ಯಕತೆಯಿದೆ ಎಂದರು.

ಅನೇಕ ಪದವೀಧರರಿಗೆ ಕೌಶಲ್ಯವಿರುವುದಿಲ್ಲ. ಇದ್ದರೂ ಕೆಲವರಿಗೆ ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನವಿರುವುದಿಲ್ಲ. ವೃತ್ತಿಗಿಂತ ಕರ್ತವ್ಯಕ್ಕೆ ಪ್ರಾಧಾನ್ಯತೆ ಕೊಡಬೇಕು. ಇಲ್ಲಿ ತರಬೇತಿ ಪಡೆಯುವ ಮಕ್ಕಳ ಭವಿಷ್ಯ ಬ್ರೈಟಾಗಿರಲಿ ಎಂದು ಹಾರೈಸಿದರು.

ಮರ್ಚೆಂಟ್ ಸೌಹಾರ್ಧ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಪಿ.ಎಸ್.ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ, ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಆಯೋಗದ ಸದಸ್ಯ ನೂರುಲ್ ಅಮೀದ್ ಇವರುಗಳು ವೇದಿಕೆಯಲ್ಲಿದ್ದರು.

ಬ್ರೈಟ್ ಮೈಂಡ್ಸ್ ಅಕಾಡೆಮಿ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಎಜುಕೇಷನ್ ಕೇಂದ್ರ ಸಂಸ್ಥಾಪಕರುಗಳಾದ ರಾಘವೇಂದ್ರ ಎನ್. ಜಾಕೀರ್ ಉಸ್ಮಾನಿ, ಶಂಕರ್, ಅಮೂಲ್ಯ ಎಸ್. ಇವರುಗಳು ಈ ಸಂದರ್ಭದಲ್ಲಿದ್ದರು.

 

 

Share This Article
error: Content is protected !!
";