ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾತಾವರಣದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರೋಗ್ಯ ಕಾಳಜಿ ವಹಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ಹೇಳಿದರು.
ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸೋಮವಾರದಂದು “ಬಿಸಿಲ ಬೇಗೆಗೆ ದೇಹದ ಬಗೆಗಿರಲಿ ವಿಶೇಷ ಕಾಳಜಿ” ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಷ್ಣದ ಅಲೆ ದಿನದಿಂದ ದಿನಕ್ಕೆ ಏರುತ್ತಿದೆ ಸಾರ್ವಜನಿಕರು ಆರೋಗ್ಯ ಇಲಾಖೆಯು ನೀಡುವ ಮಾಹಿತಿಯನ್ನು ತಪ್ಪದೇ ಪಾಲಿಸಬೇಕು, ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ಆದಷ್ಟು ತಪ್ಪಿಸಬೇಕು, ಅಲ್ಲದೆ ಮಧ್ಯಾಹ್ನದ ವೇಳೆ ಅಡುಗೆ ಮಾಡುವುದನ್ನು ಆದಷ್ಟು ಕೈಬಿಡಬೇಕು. ಮದ್ಯಪಾನ, ಚಹಾ, ಕಾಫಿ, ಕಾರ್ಬೋನೇಟ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶ ಇರುವ ಪಾನೀಯಗಳನ್ನು ಸೇವಿಸಬಾರದು ಎಂದರು
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಬೇಸಿಗೆಯಲ್ಲಿ ಬಸವಳಿದ ದೇಹಕ್ಕೆ ವಿಶ್ರಾಂತಿ ಅವಶ್ಯಕತೆ ಇರುತ್ತದೆ. ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ ಬಾಯಾರಿಕೆ ಇಲ್ಲದಿದ್ದರೂ ನೀರನ್ನು ಕುಡಿಯುತ್ತಿರುವುದು ಒಳ್ಳೆಯದು. ಪ್ರಯಾಣಿಸುವಾಗ ನೀರಿನ ಬಾಟಲಿ ಜೊತೆಗಿರಲಿ. ಅಡುಗೆ ಸಿದ್ದಪಡಿಸುವ ಪ್ರದೇಶದಲ್ಲಿ ಕಿಟಿಕಿ ಹಾಗೂ ಬಾಗಿಲು ತೆರೆದಿಡಬೇಕು. ಹಗುರ ಮತ್ತು ಸಡಿಲವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಹೆಚ್ಚು ನೀರಿನ ಅಂಶವಿರುವ ಹಣ್ಣು ತರಕಾರಿಗಳನ್ನು ಸೇವಿಸಬೇಕು. ಬಿಸಿಲಿನಲ್ಲಿ ಹೊರಗಡೆ ಹೋಗುವುದು ಅನಿವಾರ್ಯವಾದರೆ, ಟೋಪಿ, ಕೊಡೆಯಿಂದ ರಕ್ಷಣೆ ಪಡೆದು ಬಿಸಿಲಿನಿಂದ ರಕ್ಷಿಸಿಕೊಳ್ಳಬೇಕು. ನಿಲ್ಲಿಸಿದ ವಾಹನಗಳ ಒಳಗೆ ಮಕ್ಕಳನ್ನು ಬಿಡಬಾರದು. ಎಳನೀರು, ಮಜ್ಜಿಗೆ, ಬೇಲದ ಹಣ್ಣಿನ ಪಾನಕ, ನಿಂಬೆಹಣ್ಣಿನ ಪಾಲಕ, ಹಸಿ ಸವತೆಕಾಯಿ ಹೆಚ್ಚು ಉಪಯೋಗಿಸಬೇಕು. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ. ತುಳಸಿ ರಂಗನಾಥ್, ವೈದ್ಯಾಧಿಕಾರಿ ಡಾ. ಶಿಲ್ಪ, ದಂತ ವೈದ್ಯ ಡಾ. ಬಿಂದ್ಯಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ, ಜಾನಕಿ. ಬಿ. ಮೂಗಪ್ಪ. ಫಾರ್ಮಸಿ ಅಧಿಕಾರಿ ಮೋಹನ್, ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮದ ಕನ್ಸಲ್ಟೆಂಟ್ ಕಾವ್ಯ ಮಧುಸೂದನ, ಮಂಜುಳಾ ಪ್ರದೀಪ್, ಸಾರ್ವಜನಿಕರು ಉಪಸಿತರಿದ್ದರು.