ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇಶದ ಹೆಸರಾಂತ ವೈದ್ಯಕೀಯ ಮಹಾ ಸಂಶೋಧನಾ ಸಂಸ್ಥೆ ಬೆಂಗಳೂರಿನ ಬಿಎಂಸಿಯ ಪ್ರಭಾರಿ ಡೀನ್ ಹಾಗೂ ಡೈರೆಕ್ಟರ್ ಆಗಿ ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪನವರ ಪತ್ನಿ ಡಾ.ಕಾವ್ಯ ಎಸ್.ಟಿ ಇವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಮೂರುವ ವರ್ಷಗಳಿಂದಲೂ ಹೆಚ್ಚು ಕಾಲ ಈ ಹುದ್ದೆಯಲ್ಲಿದ್ದ ಡಾ.ರಮೇಶ್ ಕೃಷ್ಣರವರ ಮೇಲೆ ಅನೇಕ ಅಕ್ರಮಗಳ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಐದಕ್ಕೂ ಹೆಚ್ಚು ಪ್ರಮುಖ ಹಾಗೂ ಪ್ರತ್ಯೇಕ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಔಷಧಗಳ ಪೂರೈಕೆ, ಚಿಕಿತ್ಸೆ ಮತ್ತು ನೇಮಕಾತಿ ಸೇರಿದಂತೆ ಅನೇಕ ಅಕ್ರಮಗಳು ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ಕೆಲವು ವೈದ್ಯಾಧಿಕಾರಿಗಳು ರಾಜ್ಯ ಹೈಕೋರ್ಟ್ನಲ್ಲಿ ಹೋರಾಟ ಆರಂಭಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಕಾಲೇಜಿನ ಕೆಲವು ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳನ್ನು ಪರಿಶೀಲಿಸಿದಾಗ ಅನೇಕ ರೀತಿಯ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದ ಕಾರಣ ಬಿ.ಎಂ.ಸಿ.ಯ ವೈದ್ಯಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ಕಾವ್ಯ ಅವರನ್ನು ಪ್ರಭಾರಿ ಡೀನ್ ಆಗಿ ನೇಮಕ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

