ಸನ್ಮಾನಿತರಾದ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಳೆ ಕಾಲದಲ್ಲಿ ಕೆರೆ
, ಬಾವಿ, ಹೊಂಡದ ನೀರುಗಳನ್ನು ಕುಡಿದು ಜನ ಆರೋಗ್ಯವಾಗಿರುತ್ತಿದ್ದರು. ಈಗ ಎಲ್ಲರೂ ಒತ್ತಡದ ಜೀವನ ಸಾಗಿಸುತ್ತಿರುವುದರಿಂದ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ತಿಳಿಸಿದರು.

ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಇವರುಗಳ ಸಹಯೋಗದೊಂದಿಗೆ ವಕೀಲರ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹೃದಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

- Advertisement - 

ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರವಾಗಲಿದೆ. ಜೀವನ ಶೈಲಿ ಹಾಗೂ ಬದಲಾದ ಆಹಾರ ಪದ್ದತಿಯಿಂದ ಹೃದಯಾಘಾತಗಳು ಜಾಸ್ತಿಯಾಗುತ್ತಿವೆ. ಹಾಗಾಗಿ ಮದ್ಯಪಾನ, ಧೂಮಪಾನ ಸೇರಿದಂತೆ ದುಶ್ಚಟಗಳಿಂದ ದೂರವಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹೇಳಿದರು.

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಮಾತನಾಡಿ ಮೂವತ್ತು ವರ್ಷ ದಾಟಿದವರಿಗೆ ಮಧುಮೇಹ, ರಕ್ತದೊತ್ತಡ ಶೇ.೩೦ ರಷ್ಟಿರುತ್ತದೆ. ಅತಿಯಾದ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದಲೂ ಹೃದಯಾಘಾತ ಸಂಭವಿಸುವ ಸಾಧ್ಯತೆಗಳಿರುತ್ತವೆ. ನಿರ್ಲಕ್ಷೆ ಮಾಡಬಾರದು. ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ವಕೀಲರುಗಳಿಗೆ ಸಲಹೆ ನೀಡಿದರು.

- Advertisement - 

ಆಗಿಂದಾಗ್ಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಚೆಕ್ ಮಾಡಿಸಿಕೊಳ್ಳುತ್ತಿರಬೇಕು. ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳು ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದು. ಬೊಜ್ಜು, ಏರ್ ಪಲುಷನ್ ಇವುಗಳಿಂದಲೂ ಹೃದಯಾಘಾತವಾಗುವ ಸಾಧ್ಯತೆಗಳಿವೆ. ಕೊಬ್ಬಿನಾಂಶ ಅತಿಯಾಗದಂತ ಆಹಾರಗಳನ್ನು ಸೇವಿಸಬೇಕು. ಮದ್ಯಪಾನ, ಧೂಮಪಾನದಿಂದ ದೂರವಿದ್ದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ಎದೆ ಉರಿಯಾಗುವುದನ್ನು ಗ್ಯಾಸ್ಟ್ರಿಕ್ ಎಂದು ತಿಳಿದು ಉದಾಸೀನ ಮಾಡುವುದುಂಟು. ನೋವು ಕಾಣಿಸಿಕೊಂಡಾಗ ಕೂಡಲೆ ವೈದ್ಯರನ್ನು ಸಂಪರ್ಕಿಸಿ. ಉತ್ತಮ ಜೀವನ ಶೈಲಿ, ಆರೋಗ್ಯ ಪದ್ದತಿಯಿಂದ ಹೃದಯಾಘಾತವನ್ನು ತಡೆಗಟ್ಟಬಹುದು ಎಂದು ಹೇಳಿದರು.

ನಿರ್ದೇಶಕರು ಮತ್ತು ಡೀನ್ ಚಿತ್ರದುರ್ಗದ ಡಾ.ಬಿ.ವೈ.ಯುವರಾಜ್ ಮಾತನಾಡಿ ನೀರು ದೇಹಕ್ಕೆ ಅತಿ ಮುಖ್ಯ. ಬೆಳಿಗ್ಗೆ ಎದ್ದ ಕೂಡಲೆ ಎಲ್ಲರೂ ನೀರು ಕುಡಿಯುವುದು ಸಹಜ. ಆದರೆ ಬಾಟಲ್ ನೀರು ಆರೋಗ್ಯಕ್ಕೆ ಹಾನಿಯಾಗಬಹುದು. ಕ್ಯಾನ್ಸರ್ ಬರುವ ಲಕ್ಷಣಗಳಿರುತ್ತವೆ. ಜೀವಕ್ಕೆ ಬೇಕಾದ ನೀರನ್ನು ಯಾರು ಕುಡಿಯುತ್ತಿಲ್ಲ. ಎಲ್ಲರೂ ಫಿಲ್ಟರ್ ನೀರಿಗೆ ಮಾರು ಹೋಗಿದ್ದಾರೆ. ಅಸಿಡಿಟಿ ಜಾಸ್ತಿಯಾದಾಗ ದೇಹದಲ್ಲಿ ಬೇರೆ ಬೇರೆ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆಲ್ಲಾ ಕಾಯಿಲೆಗಳು ಜಾಸ್ತಿಯಾಗುತ್ತಿವೆ. ತಾಂತ್ರಿಕ ಯುಗದಲ್ಲಿ ಬದಲಾದ ಜೀವನ ಶೈಲಿ, ಫಾಸ್ಟ್ ಫುಡ್‌ಗಳಿಂದಲೂ ಹೃದಯಾಘಾತ ಸಂಭವಿಸಬಹುದು. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಹಾಗಾಗಿ ಪ್ರಾಣ ಉಳಿಸುವ ವೈದ್ಯರುಗಳನ್ನು ದೇವರಂತೆ ಕಾಣುತ್ತೇವೆಂದು ನುಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಡಾ.ಮೇಘ ಜಿ.ಹೆಚ್. ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಇವರುಗಳು ವೇದಿಕೆಯಲ್ಲಿದ್ದರು. ನ್ಯಾಯಾಧೀಶರುಗಳು ಹಾಗೂ ವಕೀಲರುಗಳು ಹೃದಯ ಆರೋಗ್ಯ ತಪಾಸಣಾ ಶಿಬಿರದಲ್ಲಿದ್ದರು.

Share This Article
error: Content is protected !!
";