ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪತ್ನಿ ಡಾ.ಪ್ರಿಯಾ ಅವರಿಗೆ ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 14 ಲಕ್ಷ ರೂ ಹಣ ದೋಚಿರುವ ವಂಚಕರ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಆ.26ರಂದೇ ಪಶ್ಚಿಮ ಸೈಬರ್ ಠಾಣೆಗೆ ಡಾ.ಪ್ರಿಯಾ ದೂರು ನೀಡಿದ್ದರು.
ಡಾ.ಪ್ರಿಯಾ ಅವರು ಗೋಲ್ಡನ್ ಅವರ್ನಲ್ಲಿ ದೂರುನೀಡಿದ್ದರಿಂದ ಕಳೆದುಕೊಂಡಿದ್ದ 14 ಲಕ್ಷ ರೂ ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್ ವಂಚಕರ ಜಾಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಏನಿದು ಪ್ರಕರಣ-
ಆಗಸ್ಟ್ 26ರಂದು ಸೈಬರ್ ವಂಚಕರು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪತ್ನಿ ಡಾ.ಪ್ರಿಯಾ ಅವರಿಗೆ ಆಗಸ್ಟ್ 26ರಂದು ಫೋನ್ ಮಾಡಿದ್ದಾರೆ. ನಾವು ಮುಂಬೈ ಸೈಬರ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಎಂದು ಹೇಳಿಕೊಂಡು ವಂಚಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ನಿಮ್ಮ ದಾಖಲೆಗಳನ್ನು ಬಳಸಿಕೊಂಡಿದ್ದಾರೆ.
ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾನೆ ಎಂದು ಸೈಬರ್ ವಂಚಕರು ಕಥೆ ಕಟ್ಟಿದ್ದಾರೆ ಎನ್ನಲಾಗುತ್ತಿದೆ.
ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ನಲ್ಲಿ ಡಾ. ಪ್ರಿಯಾ ದೂರು ದಾಖಲಿಸಿದ್ದರು.
ಇದರಿಂದ ತಕ್ಷಣ ಹಣ ವರ್ಗಾವಣೆಯಾಗಿದ್ದ ಅಕೌಂಟ್ ಫ್ರೀಜ್ ಆಗಿದೆ. ಬಳಿಕ ಹಣ ವಾಪಸ್ಗೆ ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು.
ಸೆ.3ರಂದು ಹಣ ವಾಪಸ್ ಮಾಡಲು ಸಂಬಂಧಪಟ್ಟ ಬ್ಯಾಂಕ್ಗೆ ಕೋರ್ಟ್ ಆದೇಶಿಸಿದೆ. ಇದರಿಂದ ಸಂಪೂರ್ಣ 14 ಲಕ್ಷ ರೂ. ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್ ವಂಚಕರ ಜಾಲ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

