ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ದಂತ ವೈದ್ಯಕೀಯ ಸ್ನಾತಕೋತ್ತರ (MDS) ಪದವಿ ಪರೀಕ್ಷೆಯಲ್ಲಿ ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (CMCRI) ಹಿರಿಯ ನಿವಾಸಿ ವೈದ್ಯೆ ಡಾ. ಸಾಧನಾ ಎಸ್. ಎಂ. ಅವರು ರಾಜ್ಯಕ್ಕೆ 5ನೇ ರ್ಯಾಂಕ್ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ನಗರದ ಮೈರಾಡ್ ಸಂಸ್ಥೆಯ ಉದ್ಯೋಗಿ ವೇದಮೂರ್ತಿ ಎಂ.ಎಸ್ ಮತ್ತು ಮಂಗಳಾ ಎಂ. ಅವರ ದ್ವಿತೀಯ ಪುತ್ರಿ ಡಾ. ಸಾಧನಾ ಅವರು ಚಿತ್ರದುರ್ಗದ ಪ್ರಸಿದ್ಧ ಎಸ್ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಡಿಎಸ್ (MDS) ವ್ಯಾಸಂಗ ಮಾಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ (BDS) ಪದವಿ ಪೂರೈಸಿದ್ದು, ಅಲ್ಲಿಯೂ ಸಹ ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದ್ದರು.
ಈ ಅತ್ಯುತ್ತಮ ಸಾಧನೆ ತೋರಿದ ಡಾ.ಸಾಧನ ಅವರಿಗೆ ಸಿಎಂಸಿಆರ್ ಐ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಬಿ.ವೈ. ಯುವರಾಜ್, ಅಕಾಡೆಮಿಕ್ ರಿಜಿಸ್ಟ್ರಾರ್ ಡಾ. ಚಂದ್ರಿಕಾ ಎನ್., ಡಾ. ಜಿ.ಹೆಚ್. ಮೇಘಾ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಡಾ. ಸಾಧನಾ ಅವರ ಈ ಸಾಧನೆಯು ಸಂಸ್ಥೆಗೆ ಸಂದ ಗೌರವವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

