ಕರಗ ಮಹೋತ್ಸವದ ಪ್ರಯುಕ್ತ ಅನ್ನ ದಾಸೋಹಕ್ಕೆ ಚಾಲನೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೂಕಿನ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವದ ಅಂಗವಾಗಿ ಖಾಸಗಿ ಬಸ್ಸುಗಳ ಮಾಲೀಕರು ಹಾಗೂ  ಕಾರ್ಮಿಕರ ಸಂಘದ ವತಿಯಿಂದ  ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

  ಕಳೆದ 25 ವರ್ಷಗಳಿಂದ  ಕರಗ ಮಹೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ  ಉಚಿತ ಆಹಾರ ವಿತರಣೆ ಮಾಡುವ ಕಾರ್ಯವನ್ನು  ಖಾಸಗಿ ಬಸ್ಸುಗಳ ಮಾಲೀಕರು ಹಾಗೂ ಕಾರ್ಮಿಕ ಸಂಘದ ವತಿಯಿಂದ  ಆಯೋಜನೆ ಮಾಡಲಾಗುತ್ತಿದ್ದು, ಈ ಬಾರಿಯ ಕಾರ್ಯಕ್ರಮಕ್ಕೆ  ನಗರಸಭೆ ಪೌರಾಯುಕ್ತ  ಕಾರ್ತಿಕೇಶ್ವರ್ , ನಗರಸಭೆ ಉಪಾಧ್ಯಕ್ಷ  ಎಂ ಮಲ್ಲೇಶ್ , ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಹಲವು ಗಣ್ಯರು  ಚಾಲನೆ ನೀಡಿದರು.

 ಈ ಕುರಿತು ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಮಾತನಾಡಿ ನಗರಸಭೆ ವತಿಯಿಂದ   ನೀರಿನ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ಸ್ವಚ್ಛತಾ ಕಾರ್ಯಕ್ಕೆ  ವಿಶೇಷವಾಗಿ ಸಿಬ್ಬಂದಿಯನ್ನು ನೇಮಿಸಲಾಗಿದೆ, ನಗರಸಭಾ ವ್ಯಾಪ್ತಿಯಲ್ಲಿ  ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಗಳು  ಮತ್ತಷ್ಟು ಹೆಚ್ಚಾಗಲಿ ಎಂದರು 

 ಸಂಘದ ಪ್ರಧಾನ ಕಾರ್ಯದರ್ಶಿ ಆರ್, ಚನ್ನವೀರಪ್ಪ ಮಾತನಾಡಿ ಕಳೆದ 25 ವರ್ಷಗಳಿಂದ ನಿರಂತರವಾಗಿ  ಪ್ರತಿ ಕರಗ ಮಹೋತ್ಸವಕ್ಕೂ  ಅನ್ನ ಸಂಪರ್ಪಣೆ ಕಾರ್ಯಕ್ರಮವನ್ನು  ನಮ್ಮ ಸಂಘದ ವತಿಯಿಂದ ಸ್ಥಳೀಯ ವರ್ತಕರು ಏಜೆಂಟರು ಹಾಗೂ ಕಾರ್ಮಿಕರ ಸಹಕಾರದೊಂದಿಗೆ  ಸುಗಮವಾಗಿ ನಡೆಸಿಕೊಂಡು ಬರುತ್ತಿದ್ದೇವೆ, ಅಂತೆಯೇ ಈ ವರ್ಷವೂ ವಿಶೇಷವಾಗಿ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

  ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ ಹಲವು ಬಗೆಯ ಉಪಹಾರಗಳನ್ನು ಕರಗ ಮಹೋತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ  ವಿತರಣೆ ಮಾಡಲಾಗುತ್ತದೆ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈ ಅನ್ನದಾಸೋಹ ಕಾರ್ಯಕ್ರಮವು ಅನುಕೂಲವಾಗಲಿದೆ, ಇಂದು ಮಧ್ಯಾಹ್ನ 12 ಗಂಟೆ ಪ್ರಾರಂಭವಾಗುವ ಅನ್ನದಾಸೋಹ ಕಾರ್ಯಕ್ರಮವು  ರಾತ್ರಿಯಿಡಿ ನಿಲ್ಲದೆ ನಾಳೆಯೂ ಸಹ ನಡೆಯಲಿದೆ, ಸುಮಾರು 50 ಸಾವಿರಕ್ಕೂ ಅಧಿಕ ಸಾರ್ವಜನಿಕರಿಗೆ  ಆಹಾರ ವಿತರಣೆ ಮಾಡಲಾಗುತ್ತದೆ , ಈ ಬಾರಿಯ ಅನ್ನಸಂತರ್ಪಣೆಗೆ  25 ಕ್ವಿಂಟಲ್  ದವಸ ಧಾನ್ಯಗಳನ್ನು ಬಳಕೆ ಮಾಡುವ ಅಂದಾಜು ಮಾಡಲಾಗಿದೆ ಎಂದರು.

 ಕಾರ್ಯಕ್ರಮದ ಪ್ರಮುಖರಾದ  ಪ್ರಶಾಂತ್ ಕುಮಾರ್ ಮಾತನಾಡಿ  ಸ್ಥಳೀಯವಾಗಿ ಬಸ್ ಮಾಲೀಕರು ಹಾಗೂ ವರ್ತಕರಿಂದ ವಿಶೇಷ ಕಾರ್ಯಕ್ರಮವನ್ನು ರೂಪಿಸುವ ಆಲೋಚನೆ ಮಾಡಿದಾಗ ಕರಗ ಮಹೋತ್ಸವದ ಸಂದರ್ಭದಲ್ಲಿ  ಅನ್ನ ದಾಸೋಹ  ಮಾಡುವುದು  ಉತ್ತಮ ಎಂಬ ನಿರ್ಧಾರದೊಂದಿಗೆ  2000 ಇಸವಿಯಿಂದ  ಇಲ್ಲಿಯವರೆಗೂ  ಪ್ರತಿವರ್ಷ ಕರಗ ಮಹೋತ್ಸವದಂದು  ಅನ್ನದಾಸೋಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ, ರಾತ್ರಿಯ ಸಮಯದಲ್ಲಿ  ಕರಗ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗೆ ಇದು ಅತ್ಯಂತ ಅನುಕೂಲವಾಗಿದೆ ಎಂದರು.

 ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಚಂದ್ರಶೇಖರ್,ಬಸ್ ಏಜೆಂಟ್ ಬಾಬು, ಡಿ.ಎನ್ ಹನುಮಂತಪ್ಪ, ರಾಜ್ ಶೇಖರ್, ಬಸವರಾಜು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

Share This Article
error: Content is protected !!
";