ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಅತಿಯಾದ ಬಳಕೆ, ಮಾಲಿನ್ಯ ಯಿಂದಾಗಿ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ ಮತ್ತು ಅದನ್ನು ಸಂರಕ್ಷಿಸುವ ವಿಧಾನಗಳಾದ ಮಳೆನೀರು ಕೊಯ್ಲು, ಚೆಕ್ ಡ್ಯಾಮ್ಗಳು, ಇಂಗು ಬಾವಿಗಳು ನಿರ್ಮಾಣ, ಕೃಷಿಯಲ್ಲಿ ಹನಿ ನೀರಾವರಿ ಅಳವಡಿಕೆ ಕೆರೆ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಪ್ರಾಣಿ ಹಾಗೂ ಸಸ್ಯ ಸಂಕುಲಕ್ಕೆ ಜಲಮೂಲ ಅತೀ ಅಮೂಲ್ಯವಾದದ್ದು. ಅದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕ ಉಮಾರಬ್ಬ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ರಾಜಘಟ್ಟ ಗ್ರಾಮದ ನಂದಿಕುಂಟೆ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ದಿನೇ ದಿನೇ ಜಲ ಮೂಲಗಳು ಸಂಪೂರ್ಣ ಕಣ್ಮರೆಯಾಗುತ್ತಿವೆ.
ಅನ್ನದಾತ ರೈತರಿಗೆ ಆಧಾರವಾದ ವ್ಯವಸಾಯಕ್ಕೆ ನೀರನ್ನು ಒದಗಿಸುವ ಕೆರೆಗಳು ಸಂಪೂರ್ಣ ನೆಲಕಚ್ಚಿವೆ. ರೈತರ ಉಳಿವಿಗಾಗಿ ಜನರ ಸಮೃದ್ಧ ಜೀವವಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರೀ ವೀರೇಂದ್ರ ಹೆಗ್ಗಡೆ ಯವರ ನೇತೃತ್ವದಲ್ಲಿ ಕೆರೆ ಹೂಳೆತ್ತುವ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವು ಗ್ರಾಮೀಣ ಭಾಗದ ಜನರಲ್ಲಿ ಹೊಸ ಚೇತನ ಮೂಡಿಸಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮುನಿರಾಜು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಣ್ಣ, ತಾಲೂಕು ಯೋಜನಾಧಿಕಾರಿಗಳ ದಿನೇಶ್ ಕೆರೆ ಸಮಿತಿ ಕಾರ್ಯದರ್ಶಿ ಗಣೇಶ್, ಮಹೇಶ್ ಸದಸ್ಯರಾದ ಬೈರೆಗೌಡ,ಶಿವಣ್ಣ,ಶಿವಕುಮಾರ್,ಶೇಖರ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್, ಒಕ್ಕೂಟದ ಅಧ್ಯಕ್ಷ ಭಾರತಿ,ವಿಜಯಮ್ಮ ಹಾಗೂ ಕೆರೆ ನೋಡೆಲ್ ಅಧಿಕಾರಿ ಹಾಗೂ ತಾಲೂಕು ಕೃಷಿ ಮೇಲ್ವಿಚಾರಕ ಲೋಹಿತ್ ಗೌಡ ,ವಲಯ ಮೇಲ್ವಿಚಾರಕ ರಘು ಉಪಸ್ಥಿತರಿದ್ದರು.

