ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕ ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ 15,000ಕ್ಕೂ ಹೆಚ್ಚು ಗ್ರಾಹಕರಿಗೆ 100 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಕೋ-ಆಪರೇಟಿವ್ ಸೊಸೈಟಿಯೊಂದರ ಮೇಲೆ ಜಾರಿ ನಿರ್ದೇಶಾನಾಲಯ ದಾಳಿ ಮಾಡಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಬೆಂಗಳೂರು ನಗರದ ವಿಜಯನಗರ, ಜಾಲಹಳ್ಳಿ, ಆರ್ಪಿಸಿ ಲೇಔಟ್ ಶಾಖೆಗಳು ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ವಿಲ್ಸನ್ ಗಾರ್ಡನ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೋ-ಆಪರೇಟಿವ್ ಸೊಸೈಟಿ ವಂಚನೆಗೆ ಸಂಬಂಧಿಸಿದಂತೆ ಜಾಲಹಳ್ಳಿ, ವಿಲ್ಸನ್ ಗಾರ್ಡನ್, ಯಲಹಂಕ, ಪೀಣ್ಯ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೊಸೈಟಿ ಅಧ್ಯಕ್ಷರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಸಿಸಿಬಿಗೆ ವರ್ಗಾವಣೆಗೆ ಆಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು 2022ರಲ್ಲಿ ಬಂಧಿಸಲಾಗಿತ್ತು.
1998ರಲ್ಲಿ ಕೋ ಆಪರೇಟಿವ್ ಬ್ಯಾಂಕ್ ಬೆಂಗಳೂರಿನ ಪೀಣ್ಯಾದಲ್ಲಿ ಶುರುವಾಗಿ ನಂತರ ನಗರದ ಹಲವು ಕಡೆ ಬ್ರಾಂಚ್ ಓಪನ್ ಮಾಡಿತ್ತು. ಹೂಡಿಕೆ ಮಾಡುವ ಹಣಕ್ಕೆ ಇತರ ಬ್ಯಾಂಕ್ಗಳಿಗಿಂತ ಹೆಚ್ಚಿನ ರಿಟರ್ನ್ಸ್ ಕೊಡುವುದಾಗಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಗ್ರಾಹಕರ ಕೋಟ್ಯಂತರ ರೂಪಾಯಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದ್ದ ಆರೋಪವಿತ್ತು.
ಖಾತೆದಾರರು ಹೂಡಿಕೆ ಮಾಡಿದ್ದ ಅಸಲಿ ಹಣ ಹಾಗೂ ಬಡ್ಡಿಯನ್ನು ಕೊಡದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಹಲವೆಡೆ ದಾಖಲಾಗಿದ್ದ ಕೇಸ್ಗಳು ಸಿಸಿಬಿಗೆ ವರ್ಗಾವಣೆಯಾಗಿತ್ತು. ತನಿಖೆ ನಡೆಸಿ ಐವರನ್ನು ಬಂಧಿಸಿದ್ದ ಸಿಸಿಬಿ, ಪ್ರಕರಣ ಸಂಬಂಧ ಐಟಿ ಹಾಗೂ ಇಡಿಗೆ ಮಾಹಿತಿ ನೀಡಿತ್ತು. 2023ರಲ್ಲಿ ಆರ್ಬಿಐ ಕೋ-ಆಪರೇಟಿವ್ ಬ್ಯಾಂಕ್ ಲೈಸೆನ್ಸ್ ರದ್ದು ಪಡಿಸಿತ್ತು.