ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಲೂ ಹೆದರುವಂತಾಗಿದೆ ಎಂದು ಬಿಜೆಪಿ ನಾಯಕ, ವಿಪ ಶಾಸಕ ಸಿ.ಟಿ.ರವಿ ಟೀಕಿಸಿದರು.
ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಿಗೆ ಹೋದರೂ ಜೀವರಕ್ಷಕ ಔಷಧಿಗಳ ಕೊರತೆ ಇದೆ. ಜೀವ ಉಳಿಸಲು ಬೇಕಾದ ತುರ್ತು ಔಷಧಿಗಳನ್ನೂ ಹೊರಗಿನಿಂದ ತರುವ ಪರಿಸ್ಥಿತಿಗೆ ರೋಗಿಗಳು ತಲುಪಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಐವಿ ದ್ರಾವಣಗಳು, ಆ್ಯಂಟಿ ಬಯಾಟಿಕ್ ಔಷಧಗಳ ಕೊರತೆಯಿಂದಾಗಿ ರೋಗಿಗಳು ಪರದಾಡುತ್ತಿದ್ದಾರೆ. ಸ್ವತಃ ಸರ್ಕಾರಿ ವೈದ್ಯರ ಸಂಘದ ಪದಾಧಿಕಾರಿಗಳೇ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದು ಸಿದ್ದರಾಮಯ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.
ಸರ್ಕಾರದ ನಿರ್ಲಜ್ಜೆಯಿಂದ ರೈತರು ಬೀದಿಗೆ ಬಂದಾಯಿತು, ಗುತ್ತಿಗೆದಾರರು ಸಾಕ್ಷಿ ಸಮೇತ ಕಮಿಷನ್ ಆರೋಪ ಮಾಡಿಯಾಯಿತು, ಈಗ ರೋಗಿಗಳೂ ಈ ಅಸಮರ್ಥ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ. ಸರ್ಕಾರಕ್ಕೆ ಸ್ವಲ್ಪವಾದರೂ ಮಾನವೀಯತೆ ಇದ್ದರೆ, ತಕ್ಷಣವೇ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆ ಸರಿಯಾಗುವಂತೆ ಮಾಡಬೇಕು ಎಂದು ಸಿ.ಟಿ ರವಿ ಆಗ್ರಹ ಮಾಡಿದ್ದಾರೆ.

