ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ರೈತರೆಂದರೆ ಕಾಂಗ್ರೆಸ್ ಸರ್ಕಾರಕ್ಕೆ ಅಸಡ್ಡೆ” ಎಂದು ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಸರ್ಕಾರಿ ಕಚೇರಿಗಳಿಗೆ ನಿತ್ಯವೂ ಅಲೆದು ತಮ್ಮ ಕೆಲಸಗಳಾಗದೇ ಮನನೊಂದು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿ ಸಾವಿಗೀಡಾಗಿರುವ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ರೈತ ಮಂಜೇಗೌಡ ಅವರ ಸಾವು ಆಘಾತ ತರಿಸಿದೆ.
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ಬೆಳೆ ಹಾನಿ ಪರಿಹಾರ ಸಿಗದಿದ್ದಕ್ಕೆ ರೈತ ಸಿದ್ದನಗೌಡ ಹಿರೇಗೌಡ್ರ ಅವರು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿರುವುದು ದುರ್ದೈವದ ಸಂಗತಿ.
ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೂ ರೈತಪರವಾದ ಒಂದೇ ಒಂದು ಯೋಜನೆ ರೂಪಿಸಲಿಲ್ಲ, ನೆರೆ ಸಂಕಷ್ಟಿತರಿಗೆ ಪರಿಹಾರ ನೀಡಲಿಲ್ಲ, ಕನಿಷ್ಠಪಕ್ಷ ರೈತರ ಕಷ್ಟ ಸಂಕಷ್ಟಗಳನ್ನೂ ಆಲಿಸಲಿಲ್ಲ, ರೈತರೆಂದರೆ ವಿಪರೀತ ತಾತ್ಸಾರದಿಂದ ಕಾಣುತ್ತಿದೆ.
ಕಾಂಗ್ರೆಸ್ ಸರ್ಕಾರ ರೈತರನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿರುವ ಧೋರಣೆಯಿಂದಾಗಿ ರೈತ ಸಮುದಾಯ ಹತಾಶೆಯ ಹಂಚಿಕೆ ತಲುಪಿದೆ. ರೈತರ ಬದುಕನ್ನು ಹಸನು ಮಾಡುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ತಮ್ಮ ಕುರ್ಚಿ ಕಿತ್ತಾಟದಲ್ಲಿ ಮುಳುಗಿ ಆಡಳಿತ ವ್ಯವಸ್ಥೆಯನ್ನು ತುಕ್ಕು ಹಿಡಿಸಿ, ಭ್ರಷ್ಟಾಚಾರದ ಕೂಪವಾಗಿಸಿದ ಪರಿಣಾಮ ರೈತರು ಕಚೇರಿಗಳಿಗೆ ನಿತ್ಯವೂ ಅಲೆಯುವ ದುಸ್ಥಿತಿ ಬಂದೊದಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ನಮ್ಮ ಕರ್ನಾಟಕ ಬಿಜೆಪಿ ಸರ್ಕಾರ ಜಾರಿಗೆ ತಂದಿದ ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ, ಕಿಸಾನ್ ಸಮ್ಮಾನ್ ನಿಧಿಯನ್ನು ನಿಲ್ಲಿಸಿದೆ. 25 ಸಾವಿರಕ್ಕೆ ಸಿಗುತ್ತಿದ್ದ ಟಿಸಿ ಸಂಪರ್ಕ ಇಂದು ಕನಿಷ್ಠ 3 ಲಕ್ಷ ಬೇಕಾಗಿದೆ, ಇದಕ್ಕಾಗಿ ರೈತರು ಸಾಲ ಮಾಡಬೇಕಾದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದೊಡ್ಡಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ಈ ಕೂಡಲೇ ಆತ್ಮಹತ್ಯೆಗೀಡಾದ ರೈತ ಮಂಜೇಗೌಡ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಹಾಗೂ ಗದಗ ಜಿಲ್ಲೆಯ ರೈತ ಸಿದ್ದನಗೌಡ ಹಿರೇಗೌಡ್ರ ಅವರ ಬೆಳೆ ಪರಿಹಾರ ಕಲ್ಪಿಸಿ, ಅವರ ಚಿಕಿತ್ಸೆಗೆ ಸೂಕ್ತ ನೆರವು ಕಲ್ಪಿಸಲಿ. ಮತ್ತೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿ ವರ್ಗಕ್ಕೆ ಸರ್ಕಾರ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಲಿ ಎಂದು ಜೆಡಿಎಸ್ ತಾಕೀತು ಮಾಡಿದೆ.

