ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ತುಂಗಭದ್ರಾ ಜಲಾಶಯದ 6 ಕ್ರಸ್ಟ್ ಗೇಟ್ಗಳಲ್ಲಿ ಕಾಣಿಸಿರುವ ದೋಷ ರೈತರನ್ನು ಮತ್ತೆ ಆತಂಕಕ್ಕೆ ದೂಡಿದ್ದು ಕೂಡಲೇ ತುಂಗಭದ್ರಾ ಡ್ಯಾಂ ಉಳಿಸಿ ಎಂದು ಜೆಡಿಎಸ್ ಆಗ್ರಹಪಡಿಸಿದೆ.
ಡ್ಯಾಂನ 11, 18, 20, 24, 27 ಮತ್ತು 28ನೇ ಕ್ರಸ್ಟ್ ಗೇಟುಗಳು ಬಾಗಿದ್ದು, 130 ಟಿಎಂಸಿ ನೀರು ವ್ಯರ್ಥವಾಗಿ ನದಿ ಪಾಲಾಗಿದೆ. ಈ ಸಲವೂ ರೈತರ ಒಂದು ಬೆಳೆಗೆ ಮಾತ್ರ ನೀರು ಸಿಗಲಿದೆ ಎಂದು ಜೆಡಿಎಸ್ ಬೇಸರ ವ್ಯಕ್ತಪಡಿಸಿದೆ.
ಕಳೆದ ಬೇಸಿಗೆಯಲ್ಲಿಯೇ ಸರ್ಕಾರ ಗೇಟ್ ಬದಲಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗ 6 ಗೇಟುಗಳು ಬಾಗಿರುವುದರಿಂದ ತುಂಡಾಗುವ ಅಪಾಯದ ಜೊತೆಗೆ ಜಲಾಶಯಕ್ಕೆ ಆಪತ್ತು ಎದುರಾಗಿದೆ. ಅಂದು ಜಲಾಶಯಕ್ಕೆ ಬಾಗಿನ ಅರ್ಪಿಸಿ, ಎಲ್ಲಾ ಗೇಟ್‘ಗಳನ್ನು ಬದಲಿಸುವುದಾಗಿ ಬುರುಡೆ ಭಾಷಣ ಮಾಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರೇ ಇದೇನಾ ನಿಮ್ಮ ಸರ್ಕಾರದ ರೈತ ಪರ ಕಾಳಜಿ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ವರ್ಷದ ಹಿಂದೆ 19ನೇ ಕ್ರಸ್ಟ್ಗೇಟ್ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಆಗ ‘ಜಲಾಶಯದ ಎಲ್ಲಾ ಗೇಟ್ಗಳನ್ನು ಬದಲಿಸಬೇಕಿದೆ‘ ಎಂದು ಸುರಕ್ಷತಾ ತಜ್ಞರು ವರದಿ ನೀಡಿದ್ದರು. ಆದನ್ನು ನಿರ್ಲಕ್ಷಿಸಿರುವ ದಪ್ಪ ಚರ್ಮದ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇನ್ನೂ ಕುಂಭಕರ್ಣ ನಿದ್ದೆಯಲ್ಲೇ ಕಾಲಹರಣ ಮಾಡದೆ ತುಂಗಭದ್ರಾ ಉಳಿಸಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.

