ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಮಾನಸ ಟ್ರಸ್ಟ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ, ಕಾಲೇಜಿನ ಸಮಾಜ ಕಾರ್ಯ ವಿಭಾಗ, ಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯೂಎಸಿ ವಿಭಾಗದ ಸಹಯೋಗದಲ್ಲಿ ಮಹಿಳೆಯರಿಗಾಗಿ “ಸಖಿ-ಆರೋಗ್ಯ”-ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಒಂದು ದಿನದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅದರಲ್ಲಿಯೂ ಋತು ಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಾಗ ಬಹುಪಾಲು ಮಹಿಳೆಯರು ಯಾರೊಂದಿಗೂ ಇದರ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ.
ನಾವು ನಮ್ಮ ದೇಹವನ್ನು ಗೌರವಿಸಬೇಕು. ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ಏಕೆ ಸಂಭವಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತಿಳುವಳಿಕೆಯ ಕೊರತೆಯಿದ್ದರೆ ಕೆಲವು ಅಭ್ಯಾಸಗಳನ್ನು ಕುರುಡಾಗಿ ಅನುಸರಿಸುತ್ತೇವೆ ಮತ್ತು ಆ ತಪ್ಪು ಕಲ್ಪನೆಗಳನ್ನು ನಂಬುತ್ತೇವೆ.
ಯುವತಿಯರಿಗೆ ಮುಟ್ಟಿನ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜ್ಞಾನವು ಅತ್ಯಂತ ಅವಶ್ಯಕವಾಗಿದೆ. ಇದು ಅವರ ಆರೋಗ್ಯವನ್ನು ಕಾಪಾಡಲು, ಆತ್ಮವಿಶ್ವಾಸ ಹೆಚ್ಚಿಸಲು ಮತ್ತು ಶಿಕ್ಷಣದಲ್ಲಿ ನಿರಂತರತೆ ಸಾಧಿಸಲು ಸಹಾಯ ಮಾಡುತ್ತದೆ. ಸರಿಯಾದ ಮಾಹಿತಿ ಮತ್ತು ಸಂಪನ್ಮೂಲಗಳ ಮೂಲಕ ಅವರು ತಮ್ಮ ದೇಹವನ್ನು ಗೌರವದಿಂದ ನಿರ್ವಹಿಸಬಹುದು. ಯುವ ಮನಸ್ಸುಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾದ ಖ್ಯಾತ ವೈದ್ಯರು, ಪ್ರಸೂತಿ ತಜ್ಞರಾದ ಡಾ. ರಕ್ಷಾ ರಾವ್ ಹೆಣ್ಣು ಮಕ್ಕಳ ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ ಮುಟ್ಟಿನ ನೈರ್ಮಲ್ಯ, ಮುಟ್ಟಿನ ಚಕ್ರ ಮತ್ತು ಅದರ ಪ್ರಕ್ರಿಯೆ, ಮುಟ್ಟಿನ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು, ಮುಟ್ಟಿನ ಕಿಟ್ ಬ್ಯಾಗ್ನಲ್ಲಿ ಇಡಬೇಕಾದ ಅಗತ್ಯ ವಸ್ತುಗಳು, ಆರೋಗ್ಯಕರವಾಗಿ ಮುಟ್ಟಿನ ಚಕ್ರವನ್ನು ನಿರ್ವಹಿಸುವ ವಿಧಾನಗಳು. PCOD ಸಮಸ್ಯೆ, ಗರ್ಭಕೋಶದ ಕ್ಯಾನ್ಸರ್, ದೇಹದ ಬೊಜ್ಜು ಮತ್ತು ಮಹಿಳೆಯರು ತಮ್ಮನ್ನು ತಾವು ಆರೋಗ್ಯವಾಗಿಡಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಇತ್ಯಾದಿಗಳನ್ನು ವಿವರಿಸಿದರು.
ಇಂದು ಆರೋಗ್ಯದಲ್ಲಿ ಕಾಣುಸುತ್ತಿರುವ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ತಪ್ಪು ಜೀವನ ಶೈಲಿ ಹಾಗು ಒತ್ತಡ. ನಾವು ವ್ಯಾಯಾಮ, ಆಹಾರ ಇವುಗಳ ಕುರಿತು ಸರಿಯಾದ ಕ್ರಮ ಅನುಸರಿಸಲೇಬೇಕು. ದೈಹಿಕ ಶ್ರಮ ಅಥವಾ ವ್ಯಾಯಾಮ ಬಹಳ ಅಗತ್ಯ. ಹಾಗೆಯೇ ಪೌಷ್ಟಿಕ ಆಹಾರ ಸೇವನೆ, ಜಂಕ್ ಆಹಾರಗಳಿಂದ ಆದಷ್ಟು ದೂರವಿರುವುದು, ಸಾಕಷ್ಟು ನೀರು ಕುಡಿಯುವುದು ಹೆಣ್ಣು ಮಕ್ಕಳ ಆರೋಗ್ಯಕ್ಕೆ ಅನುಸರಿಸಬೇಕಾದ ತತ್ವಗಳಿದ್ದಂತೆ ಎಂದು ಅವರು ತಿಳಿಸಿದರು.
ಅತಿ ಮುಖ್ಯವಾಗಿ ಹೆಣ್ಣು ಮಕ್ಕಳು ಎಲ್ಲ ವಿಚಾರಗಳಲ್ಲೂ ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಾ.ರಕ್ಷಾ ರಾವ್ ತಿಳಿಸಿದರು.
FPAI ಅಧ್ಯಕ್ಷರಾದ ಡಾ.ಆರ್.ಪಿ ಸಾತ್ವಿಕ್ ಮಾತನಾಡಿ ಮಹಿಳೆಯರ ಆರೋಗ್ಯದ ಮಹತ್ವವನ್ನು ಮತ್ತು ಅವರು ತಮ್ಮ ಸಂಸ್ಥೆಯಾದ FPAI ಬಗ್ಗೆ ಮಾತನಾಡಿ, ಸಂಸ್ಥೆಯ ಕಾರ್ಯಗಳನ್ನು ವಿವರಿಸಿದರು.
ವಿಶೇಷ ಉಪನ್ಯಾಸ ನೀಡಿದ ಪ್ರಾಂಶುಪಾಲೆ ಡಾ. ಸಂಧ್ಯಾ ಕಾವೇರಿ ಸಂಸ್ಥೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಮಹತ್ವದ ಬಗ್ಗೆ ಮಾತನಾಡಿದರು. ಈ ರೀತಿಯ ಕಾರ್ಯಕ್ರಮವು ನಮಗೆ ಜ್ಞಾನವನ್ನು ನೀಡುತ್ತದೆ ಮತ್ತು ಅನಾರೋಗ್ಯಕರ ಅಭ್ಯಾಸಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
ಕಾರ್ಯಕ್ರಮ ಸಂಯೋಜಕ ಸತೀಶ್, ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ನಾನ್ಸಿ ಲವೀನಾ ಪಿಂಟೋ ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಶ್ಮೀರ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಗೆ ಬಲಿಯಾದ ಭಾರತೀಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕು. ಜ್ಯೋತಿ ಸ್ವಾಗತಿಸಿದರು. ಕು. ಪೂರ್ಣಿಮಾಶ್ರೀ ವಂದಿಸಿದರು. ಕು ಮಂಜುಳ ನಿರೂಪಣೆ ಮಾಡಿದರು.