ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಹಾಗೂ ದೇಶದ ಹಿತದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಅನ್ನು ಕೇಂದ್ರ ಮಂಡಿಸಿದೆ. ದೂರದೃಷ್ಟಿ ಇಲ್ಲದ ಬಜೆಟ್. ಮೋದಿ ಸರ್ಕಾರ ಕರ್ನಾಟಕಕ್ಕೆ ಚೆಂಬು ಕೊಡುವುದನ್ನು ಎಂದಿನಂತೆ ಕೇಂದ್ರ ಸರ್ಕಾರ ಮುಂದುವರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಜೆಟ್ ಪೂರ್ವಭಾವಿ ಚರ್ಚೆ ವೇಳೆ ಕರ್ನಾಟಕ ಅನೇಕ ಬೇಡಿಕೆಗಳನ್ನು ಇಟ್ಟಿತ್ತು. ಅವು ಬೇಡಿಕೆಗಳಾಗಿಯೇ ಉಳಿದಿವೆ. ಪ್ರಸಕ್ತ ಸಾಲಿನ ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಆಗಿದ್ದು, ಇದರಲ್ಲಿ ಸಾಲದ ಮೊತ್ತ 15.68 ಲಕ್ಷ ಕೋಟಿ ಹಾಗೂ ಬಡ್ಡಿ ಪಾವತಿಗೆ 12.70 ಲಕ್ಷ ಕೋಟಿ ನೀಡುತ್ತಿದೆ. ಈ ದೇಶದ ಮೇಲೆ ಸರ್ಕಾರ 202 ಲಕ್ಷ- 205 ಲಕ್ಷ ಕೋಟಿ ಸಾಲ ಹೊರಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ತೆರಿಗೆ ಪಾವತಿಯಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ ರಾಜಕೀಯ ಕಾರಣಗಳಿಗೆ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ಹೆಚ್ಚಿನ ಪಾಲು ನೀಡಲಾಗಿದೆ. ಇದೊಂದು ರೀತಿ ಬಿಹಾರ ಮತ್ತು ಆಂಧ್ರದ ಬಜೆಟ್ ಇದ್ದಂತಿದೆ. ರಾಜ್ಯದ ಯೋಜನೆ ಗಳಾದ ಮೇಕೆದಾಟು, ಮಹದಾಯಿ, ಕೃಷ್ಣಾ, ಭದ್ರಾ ಈ ಯಾವ ಯೋಜನೆಗಳಿಗೂ ಅನುದಾನ ನೀಡಿಲ್ಲ ಎಂದು ಸಿಎಂ ದೂರಿದರು. 2023-24ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಈವರೆಗೆ ಒಂದು ರೂಪಾಯಿ ನೀಡಿಲ್ಲ. ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುವಾಗ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದಿದ್ದರು. ಬಜೆಟ್ ನಲ್ಲಿ ಆ ಪ್ರಸ್ತಾವ ಇಲ್ಲ. ನೀರಾವರಿ ಯೋಜನೆಗೆ ಬಿಡಿಗಾಸು ಕೊಡುವುದಿರಲಿ, ಯೋಜನೆಗಳ ಪ್ರಸ್ತಾವವನ್ನೇ ಮಾಡಿಲ್ಲ ಎಂದು ಸಿದ್ದರಾಮಯ್ಯ ದೂರಿದರು. ಕೇಂದ್ರ ಸಚಿವ ಜೆ.ಪಿ. ನಡ್ಡಾ ಭರವಸೆ ನೀಡಿದ್ದ ಭರವಸೆಯಂತೆ ರಾಯಚೂರಿನಲ್ಲಿ ಏಮ್ಸ್ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಅದರ ಪ್ರಸ್ತಾವವೂ ಇಲ್ಲ. ಕುಡಿಯುವ ನೀರು, ಹೆದ್ದಾರಿಗೆ ಹಣ ಒದಗಿಸಲು ಕೇಳಿದ್ದೆವು. ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅವರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮೂಲ ಸೌಕರ್ಯ, ರಾಜಕಾಲುವೆ ನಿರ್ವಹಣೆ, ಬಿಜಿನೆಸ್ ಕಾರಿಡಾರ್ ಗೆ ಹಣ ಕೇಳಿದ್ದೆವು. ಆದರೆ ಖಾಲಿ ಚೆಂಬು ನೀಡಿದ್ದಾರೆ. ಅಂಗನವಾಡಿ ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಿಸಿಲ್ಲ. ವಸತಿ ಯೋಜನೆಯ ಸಹಾಯಧನ 1.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಸಲು ಕೋರಿದ್ದೆವು. ಗ್ರಾಮೀಣ ಭಾಗದಲ್ಲಿ 3 ಲಕ್ಷಕ್ಕೆ ಏರಿಸುವಂತೆ ಕೋರಿದ್ದೆವು. ಯಾವುದನ್ನೂ ಹೆಚ್ಚಿಸಿಲ್ಲ ಎಂದು ಅವರು ಟೀಕಿಸಿದರು.
ಅನುದಾನ ಇಳಿಕೆ-
ನರೇಗಾಕ್ಕೆ ಕಳೆದ ಬಜೆಟ್ ನಲ್ಲಿ 89.154 ಕೋಟಿ ನೀಡಿದ್ದರೆ, ಈ ವರ್ಷ 86 ಸಾವಿರ ಕೋಟಿಗೆ ಇಳಿಸಿದ್ದಾರೆ. ಕೃಷಿ ಸಿಂಚಾಯ್ ಯೋಜನೆ ಅನುದಾನ 8250 ರಿಂದ 8260 ಕೋಟಿಗಷ್ಟೇ ಏರಿಕೆ ಆಗಿದೆ. ಎಸ್ ಸಿ/ ಎಸ್ ಟಿ ವಿದ್ಯಾರ್ಥಿವೇತನ ಏರಿಸಿಲ್ಲ. ಬೆಳೆ ವಿಮೆಗೆ ಕಳೆದ ವರ್ಷ 15,864 ಕೋಟಿ ಇದ್ದು, ಈ ವರ್ಷ 12,242 ಕೋಟಿಗೆ ಇಳಿಸಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸಬ್ ಕಾ ಸಾಥ್ ಘೋಷಣೆ ಯಥೇಚ್ಛವಾಗಿ ಬಳಸಿದ್ದಾರೆ. ಆದರೆ ಈ ಬಜೆಟ್ ನಲ್ಲಿ ಮೇಕ್ ಇನ್ ಇಂಡಿಯಾಗೆ ಕೊಟ್ಟಿರುವುದು ಕೇವಲ 100 ಕೋಟಿ. ಇದೊಂದು ಬಾಯಿ ಮಾತಿನ ಬಜೆಟ್ ಎಂದು ಸಿಎಂ ಟೀಕಿಸಿದರು.
ಕೃಷಿ ಕ್ಷೇತ್ರದ ಅನುದಾನ ಕಡಿಮೆ ಆಗಿದೆ. ಆಹಾರ ಖಾತ್ರಿಗೆ ಕಳೆದ ಬಜೆಟ್ ನಲ್ಲಿ 2.06 ಲಕ್ಷ ಕೋಟಿ ಇದ್ದರೆ, 2.03 ಲಕ್ಷ ಕೋಟಿಗೆ ಈ ಬಜೆಟ್ ನಲ್ಲಿ ಇಳಿಸಲಾಗಿದೆ. ಯುವಜನರು, ಮಹಿಳೆಯರ ಬದಲಿಗೆ ಕಾರ್ಪೋರೇಟ್ ಗೆ ಹೆಚ್ಚು ಅನುದಾನ ದೊರೆತಿದೆ. ಟೆಲಿಕಾಂ ಕ್ಷೇತ್ರದ ಮೂಲ ಸೌಕರ್ಯಕ್ಕೆ 28 ಸಾವಿರ ಕೋಟಿ ಕೊಡಲಾಗಿದೆ ಎಂದರು.
ಬಿಹಾರ ರಾಜ್ಯದ ಚುನಾವಣೆ ಇರುವ ಕಾರಣ 3-4 ಬಾರಿ ಪ್ರಸ್ತಾಪ ಆಗಿದೆ. ಆದರೆ ಮುಂದಿನ ದಿನಗಳಲ್ಲಿ ಬಿಹಾರಕ್ಕೂ ಚೆಂಬು ನಿಶ್ಚಿತ ಎಂದು ಭವಿಷ್ಯ ನುಡಿದರು.
ಬಿಜೆಪಿ ನಾಯಕರಿಗೆ ಧೈರ್ಯವಿಲ್ಲ- ಕರ್ನಾಟಕ ಬಿಜೆಪಿ ನಾಯಕರು ಕೇಂದ್ರಕ್ಕೆ ಮನವಿ ಸಲ್ಲಿಸಿಲ್ಲ. ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಪ್ರಶ್ನಿಸಿಲ್ಲ. ಅವರಿಗೆ ಆ ಧೈರ್ಯ ಇಲ್ಲ. ಅವರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜರ, ಸೋಮಣ್ಣ ಯಾರಿಗೂ ಮೋದಿ ಮುಂದೆ ಮಾತನಾಡುವ ಧೈರ್ಯ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಎಂಎಸ್ ಪಿಗೆ ಕಾನೂನು ತರುವಂತೆ ರೈತರು ದೀರ್ಘ ಕಾಲ ಹೋರಾಟ ಮಾಡಿದ್ದರೂ ತಂದಿಲ್ಲ. ಆದಾಯ ತೆರಿಗೆ ಮಿತಿ ಇಳಿಕೆಯಿಂದ ಬಡವರು, ಕಾರ್ಮಿಕರಿಗೆ ಉಪಯೋಗ ಇಲ್ಲ ಎಂದು ಹೇಳಿದರು.
ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅದಕ್ಕೆ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಮನುಸ್ಮೃತಿ ವಿರುದ್ಧ ಮಾತನಾಡುವ ಎಲ್ಲ ರಾಜ್ಯಗಳಿಗೂ ಅನ್ಯಾಯ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

