ಒಳ ಮೀಸಲಾತಿ ಜಾರಿಗೊಳಿಸಿದ ನಂತರವೇ ಹುದ್ದೆ ಭರ್ತಿ ಮಾಡಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರೋಸ್ಟರ್ ಬಿಂದುಗಳನ್ನು ಮೊದಲು ಸರಿಪಡಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಿದ ನಂತರವೇ ೫೬
,೪೩೨ ಹುದ್ದೆಗಳನ್ನು ನೇಮಕ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿಗೆ ಶೇ.೧೫ ರಿಂದ ೧೭ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.೩ ರಿಂದ ೭ ಪರ್ಸೆಂಟ್ ಮೀಸಲಾತಿಯನ್ನು ತರಾತುರಿಯಲ್ಲಿ ಹೆಚ್ಚಿಸಿ ಶೇ.೨೪ ರಷ್ಟು ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿಕೊಂಡರೆ ವಿನಃ ರಾಜ್ಯದಿಂದ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಹೆಚ್ಚುವರಿ ಮೀಸಲಾತಿಯನ್ನು ಷೆಡ್ಯೂಲ್-೯ ಕ್ಕೆ ಸೇರಿಸಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಮೇಲೆ ಬಿಜೆಪಿ. ಗೂಬೆ ಕೂರಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement - 

ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ, ಮಾಜಿ ಸಂಸದ ಎ.ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ಬಸವರಾಜ್ ಬೊಮ್ಮಾಯಿ ಇವರುಗಳು ಒಳ ಮೀಸಲಾತಿ ಜಾರಿಗಾಗಿ ಚಿತ್ರದುರ್ಗದಿಂದ ಪಾದಯಾತ್ರೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದು, ಕೇವಲ ಭರವಸೆಯಾಗಿ ಉಳಿದಿದೆ ಎಂದು ಟೀಕಿಸಿದರು.

೨೪ ಪರ್ಸೆಂಟ್ ಮೀಸಲಾತಿ ನೀಡಿದ್ದೇವೆಂದು ಬಿಜೆಪಿ. ಆತುರಾತುರವಾಗಿ ಘೋಷಿಸಿತು. ಈಗಿನ ರಾಜ್ಯ ಸರ್ಕಾರ ಒಳ ಮೀಸಲಾತಿ ನಿಯಮವಿಲ್ಲದೆ ೫೬,೪೩೨ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿರುವುದು ಅತ್ಯಂತ ಖಂಡನೀಯ. ರೋಸ್ಟರ್ ಬಿಂದು ನಿಗಧಿಪಡಿಸುವಾಗ ೧೦೧ ಪರಿಶಿಷ್ಟ ಜಾತಿಗಳಿಗೂ ಅವರವರ ಜನಸಂಖ್ಯೆಗಳನ್ನು ನಿಗಧಿಪಡಿಸಿ ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಎಂ.ಗುರುಮೂರ್ತಿ ಆಗ್ರಹಿಸಿದರು.

- Advertisement - 

ಡಾ.ಬಿ.ಆರ್.ಅಂಬೇಡ್ಕರ್ ಒಕ್ಕೂಟದ ಅಧ್ಯಕ್ಷ ಶ್ರೀಧರ ಕಲಿವೀರ ಮಾತನಾಡಿ ಒಳ ಮೀಸಲಾತಿಯಿಲ್ಲದೆ ೫೬,೪೩೨ ಹುದ್ದೆಗಳನ್ನು ತುಂಬುತ್ತೇವೆನ್ನುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕ. ಛಲವಾದಿ ಜಾತಿಗಳು ತಕರಾರು ಎತ್ತಿರುವುದರಿಂದ ರೋಸ್ಟರ್ ಬಿಂದುಗಳಲ್ಲಿನ ದೋಷವನ್ನು ಸರಿಪಡಿಸಿ ಸುಪ್ರೀಂಕೋರ್ಟ್ ತೀರ್ಪಿಗೆ ಬದ್ದರಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಸಂವಿಧಾನ ವಿರೋಧಿಯಾಗುತ್ತಾರೆ. ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರಿಗೆ ಒಳ ಮೀಸಲಾತಿ ಜಾರಿಗೊಳಿಸುವ ಇಚ್ಚಾಶಕ್ತಿ ಬೇಕು.

ಒಳ ಮೀಸಲಾತಿ ಜಾರಿಗೊಳಿಸಲ್ಲ ಎಂದು ಹೇಳುವುದು ಸಂವಿಧಾನಕ್ಕೆ ವಿರುದ್ದವಾಗಿ ನಡೆದುಕೊಂಡಂತೆ. ಎಸ್ಸಿ.ಎಸ್ಟಿ.ಗಳ ಮೇಲೆ ಬೇರೆ ಜಾತಿಯವರಿಗೆ ಸಿಟ್ಟು ಬರುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಯ ವಂಚಕತನ ನೀತಿ ಅನುಸರಿಸುತ್ತಿದ್ದಾರೆ. ಶೇ.೫೬ ಮೀಸಲಾತಿಯನ್ನು ಸಂವಿಧಾನದ ೯ ನೇ ಷೆಡ್ಯುಲ್‌ಗೆ ಸೇರಿಸುವುದರಿಂದ ಎಲ್ಲವೂ ಸರಿ ಹೋಗುತ್ತದೆ. ನಾಗಮೋಹನ್‌ದಾಸ್ ವರದಿಯನ್ನು ಮುಖ್ಯಮಂತ್ರಿ ತಿರಸ್ಕರಿಸಿದ್ದಾರೆ. ರೋಸ್ಟರ್ ಬಿಂದು ಸರಿಪಡಿಸಿ ೫೦ ಪರ್ಸೆಂಟ್ ಮೀಸಲಾತಿ ಕೊಡಿ ಎಂದು ಮನವಿ ಮಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಪ್ಪ, ಗದಗ ಜಿಲ್ಲಾ ಸಂಚಾಲಕ ದುರುಗೇಶ್, ಸುಂದರಮೂರ್ತಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

Share This Article
error: Content is protected !!
";