ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಮಾಸಿಕ ಪತ್ರಿಕೆಯ ಇಬ್ಬರು ಪತ್ರಕರ್ತರ ವಿರುದ್ಧ ಸುಲಿಗೆ ಹಾಗೂ ಬೆದರಿಕೆ ಆರೋಪದ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಲೇಔಟ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಿ ಎನ್ ಅಶೋಕ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಆರೋಪಿತರಾಗಿರುವ ಶರತ್ ಬಾಬು ಮತ್ತು ಗುರುಮೂರ್ತಿ ಎಂಬುವರು ಕನ್ನಡ ಮಾಸಿಕ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು, ನಾನು ಮತ್ತು ನನ್ನ ಅಧೀನದಲ್ಲಿ ಕೆಲಸ ಮಾಡುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಅಶೋಕ್ ಭಾಗಿ, ವರುಣ್, ಪರಶುರಾಮ್ ಬಿ ಎಚ್ ಮತ್ತು ಜಯದೀಪ್ ಎಚ್ ಪಿ ಅವರು ಲಂಚ ಸ್ವೀಕರಿಸಿ, ಕಳಪೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಅಶೋಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 2024ರಲ್ಲಿ ಇಬ್ಬರು ಆರೋಪಿತ ಪತ್ರಕರ್ತರು ಅಶೋಕ್ ಅವರಿಂದ 27 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದು ಒಂದು ವೇಳೆ ಹಣ ನೀಡಲು ವಿಫಲವಾದರೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ ಇಬ್ಬರು ತಮ್ಮ ಕಚೇರಿಗೆ ಭೇಟಿ ನೀಡಿ, ಹಣ ಕೊಡಲು ಸಾಧ್ಯವಾಗದಿದ್ದರೇ ಪರ್ಯಾಯ ಆಯ್ಕೆಯಾಗಿ ರಾಮನಗರದಲ್ಲಿ ಶೆಡ್ ನಿರ್ಮಿಸಿ ಕೊಡುವಂತೆ ಒತ್ತಾಯಿಸಿದ್ದರು ಎಂದು ಇಂಜಿನಿಯರ್ ಅಶೋಕ್ ದೂರಿನಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ದೂರು ಸಲ್ಲಿಸುವುದಾಗಿ 2024ರ ಡಿಸೆಂಬರ್ 10 ರಂದು ವಾಟ್ಸಾಪ್ ಸಂದೇಶ ಕಳುಹಿಸಿದರು. ಅದರಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಮತ್ತು ಇನ್ನೊಬ್ಬ ನಿವೃತ್ತ ಎಂಜಿನಿಯರ್ಗಳ ಹೆಸರುಗಳು ಸೇರಿದ್ದವು. ನಂತರ, ಮಾರ್ಚ್ 25 ರಂದು, ಅವರು ಅಶೋಕ್ ಅವರ ಹೆಸರನ್ನು ದೂರಿನಲ್ಲಿ ಸೇರಿಸುವುದಾಗಿ ಎಚ್ಚರಿಸುವ ಮತ್ತೊಂದು ಸಂದೇಶವನ್ನು ಕಳುಹಿಸಿದ್ದನು ಎಂದು ಹೇಳಿದ್ದಾರೆ.
ಅಶೋಕ್ ತಮ್ಮ ಬೇಡಿಕೆಗಳನ್ನು ಈಡೇರಿಸದ ಕಾರಣ, ಯೋಜನೆಯ ವಿವರಗಳನ್ನು ಪಡೆಯಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಆರ್ಟಿಐ ಬಳಸುವುದಾಗಿ ಬಾಬು ಎಚ್ಚರಿಸಿದ್ದ ಎಂದು ಅಶೋಕ್ ತಿಳಿಸಿದ್ದಾರೆ.
ಬಾಬು ಮತ್ತು ಗುರುಮೂರ್ತಿ ಸಂಬಂಧವಿಲ್ಲದ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಹಣ ನೀಡುವಂತೆ ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡಲು ಆರ್ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಶೋಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈಗ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರ ವಿರುದ್ಧ ದೂರು ದಾಖಲಾಗಿದೆ.