ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಂಧೂ ನದಿ ನೀರು ಹರಿಯುವುದನ್ನು ನಿಲ್ಲಿಸಿದರೆ ಭಾರತದಲ್ಲಿ ರಕ್ತದ ನದಿ ಹರಿಸುತ್ತೇವೆ ಎಂದು ಹೇಳಿದ್ದ ಪಾಕಿಸ್ತಾನಕ್ಕೆ, ನೀರು ಹರಿಸುವ ಮೂಲಕವೇ ಭಾರತ ತಿರುಗೇಟು ನೀಡಿದೆ.
ಭಾರತವು ಝೀಲಂ ನದಿಗೆ ನೀರು ಹರಿಬಿಟ್ಟ ಪರಿಣಾಮ ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಭಾರತವು ಝೀಲಂ ನದಿಗೆ ನೀರು ಹರಿಸಿದ ಪರಿಣಾಮ ಮುಜಾಫರಾಬಾದ್ ಬಳಿ ನೀರಿನ ಮಟ್ಟ ಹೆಚ್ಚಾಗಿದ್ದು, ಅಲ್ಲಿನ ಸ್ಥಳೀಯ ಆಡಳಿತವು ಹಟ್ಟಿಯನ್ ಬಾಲಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಮಸೀದಿಗಳಲ್ಲಿ ಈ ಬಗ್ಗೆ ಪ್ರಕಟಣೆ ಹೊರಡಿಸಿ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಅಲ್ಲದೆ ನದಿ ತೀರದ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಭಾರತವು ಇಂಡಸ್ವಾಟರ್ಟ್ರೀಟಿ (IWT) ಒಪ್ಪಂದವನ್ನು ರದ್ದುಗೊಳಿಸುವ ಬೆದರಿಕೆ ಹಾಕಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ ಎನ್ನಲಾಗಿದೆ.
ಭಾರತವು ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಈ ಕ್ರಮವು ಅಂತರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಿದೆ ಎಂದು ಪಾಕಿಸ್ತಾನ ದೂರಿದೆ.
ಯಾವುದೇ ಪೂರ್ವಸೂಚನೆ ನೀಡದೇ ಭಾರತ ಏಕಾಏಕಿ ನದಿಗೆ ನೀರನ್ನು ಹರಿಸಿದೆ ಎಂದು ಪಾಕ್ಮಾಧ್ಯಮಗಳು ಭಾರತದ ವಿರುದ್ಧ ಆರೋಪ ಮಾಡಿವೆ. ಭಾರತವು ಉದ್ದೇಶಪೂರ್ವಕ ‘ಜಲ ಭಯೋತ್ಪಾದನೆಯಲ್ಲಿ’ ತೊಡಗಿದೆ ಎಂದು ಪಿಒಕೆ ಸರ್ಕಾರ ಆರೋಪಿಸಿದೆ.
ಹಟ್ಟಿಯನ್ ಬಾಲಾದಲ್ಲಿ ಆಡಳಿತವು ತಾತ್ಕಾಲಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ಆದರೆ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ.
ಪಾಕಿಸ್ತಾನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಭಾರತ ಸರಕಾರ ಇಂಡಸ್ ಜಲ ಒಪ್ಪಂದವನ್ನು ಅಮಾನತುಪಡಿಸಿದೆ. ಅಟಾರಿ ಗಡಿಯಲ್ಲಿರುವ ಚೆಕ್ ಪೋಸ್ಟ್ ಮುಚ್ಚಲು ಮತ್ತು ಹೈಕಮಿಷನ್ಗಳ ಒಟ್ಟಾರೆ ಬಲವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಅಧಿಕೃತ ದಾಖಲೆಗಳೊಂದಿಗೆ ಈ ಗಡಿ ಮಾರ್ಗವಾಗಿ ಭಾರತ ಪ್ರವೇಶಿಸಿದವರು 2025ರ ಮೇ 1ರೊಳಗೆ ವಾಪಸ್ ಹೋಗುವಂತೆ ಸೂಚಿಸಿದೆ. ಎಸ್ಪಿಇಎಸ್ ವೀಸಾದಡಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳು 48 ತಾಸುಗಳೊಳಗೆ ಭಾರತ ತೊರೆಯಬೇಕು ಎಂದು ಭಾರತ ಸೂಚಿಸಿದೆ.