ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡದ ಮೊದಲ ದೊರೆ ಮಯೂರ ವರ್ಮನ ಪ್ರತಿಮೆ, ಸಾವಲಂಬಿ ರೈತ ಮಹಿಳೆ ಹಾಗೂ ರೈತನ ಪುತ್ಥಳಿ, ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ಬಿಂಬಿಸಲು ಮಹಿಳೆಯ ಬೃಹತ್ ಮುಖದ ಆಕೃತಿ ಮತ್ತು ವಾಣಿವಿಲಾಸ ಸಾಗರದ ಮಾದರಿಗಳ ಕಲಾಕೃತಿಗಳನ್ನು ನೋಡಿ ನನಗೆ ಸಾಕಷ್ಟು ಸಂತೋಷ ಮತ್ತು ಸಾರ್ಥಕ ಫಲಪುಷ್ಪ ಪ್ರದರ್ಶನ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಬಣ್ಣಿಸಿದರು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಫಲ-ಪುಷ್ಪ ಪ್ರದರ್ಶನಕ್ಕೆ ಆಗಮಿಸಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.
೩೨ ನೇ ವರ್ಷದ ಫಲಪುಷ್ಪ ಪ್ರದರ್ಶನ ಸಾಕಷ್ಟು ಅರ್ಥಪೂರ್ಣ ಮತ್ತು ಉಪಯುಕ್ತ ಸಾಕಷ್ಟು ಮಾಹಿತಿಯನ್ನ ಒಳಗೊಂಡಿದೆ. ವಿಶೇಷವಾಗಿ ಕಡಿಮೆ ಜಮೀನುಗಳನ್ನು ಹೊಂದಿರುವಂತಹ ರೈತರು ನಮ್ಮ ಜಿಲ್ಲೆಯಲ್ಲಿದ್ದು ಅವರಿಗೆ ಸಹಕಾರಿಯಾಗುವಂತಹ ಮಾಹಿತಿಯುಳ್ಳ ಸ್ವಾವಲಂಬಿ ರೈತನಾಗಲು ಅಗತ್ಯ ಮಾಹಿತಿ ಇಷ್ಟವಾಯಿತು.
ನಾನಾ ಜಾತಿಯ ಹೂಗಳು, ಹಣ್ಣುಗಳು ಮತ್ತು ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಮಳಿಗೆ, ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸುವ ಮೂಲಕ ಜಿಲ್ಲಾ ಸಣ್ಣ ವ್ಯಾಪರಿಗಳಿಗೂ ತಮ್ಮ ಬ್ರಾಂಡ್ ಪ್ರಚಾರಕ್ಕೂ ಸಹ ಸಹಕಾರಿಯಾಗಿದೆ ಎಂದು ರಘುಮೂರ್ತಿ ತಿಳಿಸಿದರು.
ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರ ನಿಂತಿಲ್ಲ ಎಂಬುದನ್ನು ಬಿಂಬಿಸಲು ಮಹಿಳೆಯ ಬೃಹತ್ ಮುಖದ ಆಕೃತಿ ಜತೆಗೆ ನಾನಾ ಕ್ಷೇತ್ರಗಳಲ್ಲಿ ಸಾಧಕಿಯರ ಭಾವಚಿತ್ರ ಇರಿಸಲಾಗಿದ್ದು ಮಹಿಳೆ ಮನಸ್ಸು ಮಾಡಿದರೆ ಯಾವ ಸಾಧನೆಗೂ ಸೈ ಎಂಬಂತೆ ಮಹಿಳೆಯರಿದ್ದಾರೆ. ಸಮಾಜದಲ್ಲಿನ ಸಾಧಕಿಯರ ಫೋಟೋ ಪ್ರದರ್ಶನದಿಂದ ಸಾವಿರಾರು ಮಹಿಳೆಯರ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ ದೇವರಾಜ್, ವಿರೂಪಾಕ್ಷಪ್ಪ ಮತ್ತು ಅಧಿಕಾರಿಗಳು ಇದ್ದರು.
ಬಾಕ್ಸ್-
ರೈತರು ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನಗಳಿಗೆ ಭಾಗವಹಿಸಿದರೆ ತಮ್ಮ ಶಕ್ತಿ ಹೆಚ್ಚುತ್ತದೆ. ಅನೇಕ ಯೋಜನೆಗಳ ಮಾಹಿತಿ ದೊರೆಯುತ್ತದೆ. ಸರ್ಕಾರದ ಯೋಜನೆಯನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ಫಲಪುಷ್ಪ ಪ್ರದರ್ಶನದಲ್ಲಿರುವ ಕಾಲಕೃತಿ, ರೇಖಾಚಿತ್ರಗಳು, ಪುಷ್ಪಗಳಲ್ಲಿ ದೊರೆಯುತ್ತದೆ. ಸ್ವಾವಲಂಬಿ ರೈತರಾಗಲು ಇಲಾಖೆ ಕಾರ್ಯಕ್ರಮಗಳ ಉಪಯೋಗ ಪಡೆದುಕೊಂಡು ರೈತರು ಸಹ ಸದೃಢ ಬದುಕು ಕಟ್ಟಿಕೊಳ್ಳಬೇಕು. ಟಿ.ರಘುಮೂರ್ತಿ, ಶಾಸಕರು ಚಳ್ಳಕೆರೆ ಮತ್ತು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು.