ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿರ್ಮಾಣದ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡುತ್ತಿರುವುದನ್ನು ಕೂಡಲೇ ನೆಲಸಮ ಮಾಡುವಂತೆ ಶ್ರೀರಾಮ ಸೇನೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಚಿತ್ರದುರ್ಗ ನಗರದ 35ನೇ ವಾರ್ಡ್ ಸಾದಿಕ್ ನಗರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸರ್ಕಾರದ ಕಟ್ಟಡ ಪರವಾನಗಿ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ.
ಈಗಾಗಲೇ ತಾವುಗಳು ಅಂಥಹ ಕಟ್ಟಡ ನಿರ್ಮಾಣ ಸ್ಥಗಿತ ಮಾಡುವಂತೆ ಸೂಚನೆ ನೀಡಿದ್ದರೂ ಜಿಲ್ಲಾಧಿಕಾರಿಗಳ ಸೂಚನೆಗೆ ಕಿಮ್ಮತ್ತು ನೀಡದೇ ಮಸೀದಿ ನಿರ್ಮಿಸಲಾಗುತ್ತಿದೆ. ಇದರಿಂದ ಆ ಪ್ರದೇಶದಲ್ಲಿ ಸಂಘರ್ಷ ಆಗುವ ಸಾಧ್ಯತೆ ಇದ್ದು ಕೂಡಲೇ ಮಸೀದಿ ನೆಲಸಮ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಆ ಪ್ರದೇಶದಲ್ಲಿ ಈಗಾಗಲೇ ಎರಡು ಮಸೀದಿಗಳಿವೆ. ಈಗ ಅಕ್ರಮವಾಗಿ ನಿರ್ಮಿಸುತ್ತಿರುವುದು 3ನೇ ಮಸೀದಿ. ಕೂಡಲೇ ಸ್ಥಗಿತ ಮಾಡಬೇಕು. ಶ್ರೀಕೃಷ್ಣ ನಗರ ಎಂದಿದ್ದ ಪ್ರದೇಶವನ್ನು ಅಕ್ರಮವಾಗಿ ಸಾದಿಕ್ ನಗರ ಎಂದು ನಾಮಕರಣ ಮಾಡಲಾಗಿದೆ. ಕೂಡಲೇ ಸಾದಿಕ್ ನಗರ ಬದಲಾಯಿಸಿ ಶ್ರೀಕೃಷ್ಣ ನಗರ ಎಂದು ನಾಮಕರಣ ಮಾಡಿ ನಾಮಫಲಕ ಅಳಡಿಸಬೇಕು ಎಂದು ಮುತಾಲಿಕ್ ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದರು.
ಸಾದಿಕ್ ನಗರದಲ್ಲಿ ಮಹಿಳೆಯರು ಮುಕ್ತವಾಗಿ ಓಡಾಡುವಂತಿಲ್ಲ. ಗೂಂಡಾಗಿರಿ ಮಿತಿಮೀರಿದೆ. ಅವರಿಗೆ ಸೊಕ್ಕು ಜಾಸ್ತಿ ಇದ್ದು ದಾದಾಗಿರಿ ಮಾಡುತ್ತಿದ್ದು ಅಂಥಹ ದುರ್ವತನೆಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಮಸೀದಿ ನಿರ್ಮಾಣ ಕಾರ್ಯ ಸ್ಥಗಿತ ಮಾಡುವಂತೆ ಸೂಚನೆ ನೀಡಲಾಗಿದೆ. ನಗರಸಭೆ ಪೌರಾಯುಕ್ತರಿಂದ ಸಮಗ್ರ ವರದಿ ಪಡೆದು ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಶ್ರೀರಾಮ ಸೇನೆ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಡಿ.ಎಸ್.ಸುರೇಶ್ ಬಾಬು (ಸೈಟ್ ಬಾಬಣ್ಣ), ದಕ್ಷಿಣ ಪ್ರಾಂತ ರಾಜ್ಯ ಕಾರ್ಯಾಧ್ಯಕ್ಷ ಸುಂದ್ರೇಶ್ ನರ್ಗಲ್, ಜಿಲ್ಲಾಧ್ಯಕ್ಷ ಟಿ.ಎನ್ ಹರೀಶ್, ಹಿಂದೂ ಮುಖಂಡ ಕುಮಾರಸ್ವಾಮಿ(ಗರುಡ ಕೇಸರಿ) ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

