ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸ್ ಸಮವಸ್ತ್ರದಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್ಐ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಬೆಂಗಳೂರು ನಗರದ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದು ನಕಲಿ ಪೊಲೀಸರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ನಕಲಿ ಪಿಎಸ್ಐ ಮಲ್ಲಿಕಾರ್ಜುನ್, ಪ್ರಮೋದ್, ವಿನಯ್ ಮತ್ತು ಋತ್ವಿಕ್ ಬಂಧಿತರು. ಆರೋಪಿಗಳಿಂದ 45 ಸಾವಿರ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ. ಐಷಾರಾಮಿ ಜೀವನ ನಡೆಸಬೇಕೆಂದು ಇಚ್ಚಿಸಿದ್ದ ಮಲ್ಲಿಕಾರ್ಜುನ್ಗೆ ಇತರೆ ಆರೋಪಿಗಳು ಸಾಥ್ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
ಏನಿದು ಘಟನೆ:
ದೂರುದಾರ ನವೀನ್ ಎಂಬವರನ್ನು ಹತ್ತಿರದಿಂದ ಗಮನಿಸಿದ್ದ ಹೃತ್ವಿಕ್, ಆತನ ಮನೆಗೆ ನುಗ್ಗಿದರೆ ಹಣ, ಚಿನ್ನಾಭರಣ ಸಿಗಲಿದೆ ಎಂದು ಮಲ್ಲಿಕಾರ್ಜುನ್ನಿಗೆ ತಿಳಿಸಿದ್ದ. ಅದರಂತೆ ಡಿಸೆಂಬರ್-7ರಂದು ನವೀನ್ ಮನೆಗೆ ಕಾರಿನಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಆರೋಪಿಗಳು ಧಾವಿಸಿ ಬೆದರಿಕೆ ಹಾಕಿದ್ದರು.
ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ, ಮನೆ ಶೋಧ ನಡೆಸಬೇಕು ಎಂದು ಬೆದರಿಸಿ ನವೀನ್ ಅವರ ಮೇಲೆ ಲಾಠಿ, ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದರು. ಬಂಧನ ಮಾಡಬಾರದೆಂದರೆ ಹಣ ಕೊಡಬೇಕು ಎಂದು ಖಾತೆಯಲ್ಲಿದ್ದ 87 ಸಾವಿರ ರೂ., ಬೀರುವನಲ್ಲಿದ್ದ 53 ಸಾವಿರ ರೂ. ಹಾಗೂ ಪರ್ಸ್ನಲ್ಲಿದ್ದ 2 ಸಾವಿರ ರೂ. ಪಡೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನವೀನ್ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ವಿದ್ಯಾರಣ್ಯಪುರಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ 45 ಸಾವಿರ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿದ್ದಾರೆ.
ನಕಲಿ ಪಿಎಸ್ಐ-
ಮಲ್ಲಿಕಾರ್ಜುನ್ ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದರೂ ಉತ್ತೀರ್ಣನಾಗಿರಲಿಲ್ಲ. ಆದರೂ ಸಹ ತಾನು ಉತ್ತೀರ್ಣನಾಗಿ ಪಿಎಸ್ಐ ಆಗಿದ್ದೇನೆ ಎಂದು ಊರಿನವರ ಮುಂದೆ ಬಿಂಬಿಸಿಕೊಂಡಿದ್ದ. ಪೊಲೀಸ್ ಸಮವಸ್ತ್ರ, ಲಾಠಿ, ಟೋಪಿ ಹಾಗೂ ಶೂ ಧರಿಸಿ ಫೋಟೋ ಶೂಟ್ ಮಾಡಿಸಿದ್ದ. ಸ್ವಗ್ರಾಮ ಸಿರಗುಪ್ಪದಲ್ಲಿ ತಾನೂ ಬೆಂಗಳೂರಲ್ಲಿ ಪಿಎಸ್ಐ ಆಗಿದ್ದೇನೆ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.

