ಅಂತರಗಳು ಕಥೆ ಭಾಗ-2: ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
    ಮ್ಯಾರೇಜ್ ಬ್ರೋಕರ್ ಶ್ರೀನಿವಾಸ್ ತಂದಿದ್ದ ಫೋಟೋಗಳು, ವೇಣು ಮುಂದಿರುವ ಟೀಪೈ ಮೇಲೆ  ವಿವರಣೆಯೊಂದಿಗೆ ಚಂದದ ಹೂವುಗಳ ತರಹ ಹರಡಿಕೊಂಡಿದ್ದವು. ವೀರೇಶ್ ನಂತಹ ಬ್ಯೂಟಿಫುಲ್ ಹೀರೋಗೆ ಒಂದು ಮುದ್ದಾದ ಹೂವು ಹುಡ್ಕೋದು ಯಾವ ಕೆಲಸ ರೀ.

ಚಿಟಿಕೆ ಹೊಡೆಯೋದ್ರಲ್ಲಿ ಒಪ್ಪಿದ ಹೀರೋಯಿನ್ ತಂದು ನಿಲ್ಲುಸ್ತೀನಿ,ಡೋರಿ ಬಗ್ಗೆ ತಿಳಿಸಿದ್ರೂ ಕೊಡಿಸೋ ಪ್ರಯತ್ನವೂ ಆಗುತ್ತೆ. ಮೊದಲು  ಸೆಲೆಕ್ಟ್ ಮಾಡಿ ಮುಂದಿನದನ್ನ ಆಮೇಲೆ ಮಾತಾಡೋಣ. ಶ್ರೀನಿವಾಸ್ ಫೋಟೋಗಳನ್ನು ಬಿಡಿಬಿಡಿಯಾಗಿ ತೋರಿಸುತ್ತಲೇ ಮಾತಿಗೆ ಮುಂದಾಗಿದ್ದ.

- Advertisement - 

ಆದ್ರೆ ವೇಣುವಿನ ಬಲಗೈ ಒಂದು ಫೋಟೋ ಹಿಡ್ಕೊಂಡು ಬೇರೆ ಫೋಟೋಗಳತ್ತ ಎಡಗೈ ಕೆದ್ರಿ ಕೆದ್ರಿ ಪಕ್ಕಕ್ಕೆ ತಳ್ಳುತ್ತಿತ್ತು, ಅಂತೂ ನೋಡುವ ಕಾರ್ಯ ಮುಗಿದು ಕೊನೆಗೆ ದೃಷ್ಟಿ ನೆಟ್ಟಿದ್ದು ಬಲಗೈಯಲ್ಲಿದ್ದ ಆ ಫೋಟೋ ಮೇಲೆಯೇ. ಶ್ರೀನಿವಾಸ್ ಈ ಹುಡುಗಿ ಯಾರು? ವೇಣುವಿನಿಂದ ಫೋಟೋ ಪಡೆದ ಶ್ರೀನಿವಾಸ್, ಹಿಂಬದಿಯಲ್ಲಿದ್ದ ಅಡ್ರೆಸ್ಸನ್ನ ಓದತೊಡಗಿದ.

ಲಲಿತ D/O ಮಂಜುನಾಥ್  ಚಿತ್ರದುರ್ಗದ ಶ್ಯಾಮರಾವ್ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸ. RMC ಮಳಿಗೆಯೊಂದರಲ್ಲಿ  ಅಕೌಂಟ್ ಬರೀತಿರೋರ ಮಗಳು ತಾಯಿ ಇಲ್ಲ, ಹಿಂದೆನೇ ತೀರ್ಕೊಂಡಿದಾರೆ. ತಕ್ಕಮಟ್ಟಿಗೆ ವಿದ್ಯಾಭ್ಯಾಸವಿದೆ, ಇವಳೇ ದೊಡ್ಡ ಮಗಳು, ಇನ್ನೂ ಇಬ್ಬರು ಹೆಣ್ಣು ಮಕ್ಕಳಿವೆ.

- Advertisement - 

ದಿನದ ಊಟಕ್ಕೂ ಪರದಾಡ್ತಿರೋ ತಂದೆ ಮಕ್ಕಳನ್ನ ನೋಡಿದ್ರೆ ಕನಿಕರಿಸುತ್ತೆ, ಇಲ್ಲಿರೋ ಫೋಟೋಗಳಲ್ಲಿ ಅವಳಂತ ರೂಪವಂತೆ ಯಾರು ಇಲ್ಲ, ಆದ್ರೇ ಮದ್ವೆ ಮಾಡಿಕೊಡುವಷ್ಟು ಸ್ಥಿತಿವಂತರಲ್ಲ, ಹೀಗಂತ ನನ್ನ ಅನುಭವ ಹೇಳುತ್ತೆ.

ಯಾರಾದ್ರೂ ಒಪ್ಪಿದ್ರೆ ಯಾವುದಾದ್ರೂ ಮಠದಲ್ಲಿ ತಾಳಿ ಕಟ್ಟಿಸಿ ಪುಣ್ಯ ಕಟ್ಕೊಳಿ ಅಂತ ನನಗೆ ದುಂಬಾಲು ಬಿದ್ದು ಈ ಫೋಟೋ ಕೊಟ್ಟಿದಾರೆ. ಮ್ಯಾರೇಜ್ ಬ್ರೋಕರ್ ಅಂದ್ಮೇಲೆ ಎಲ್ಲಾ ತರದ ಫೋಟೋಗಳು ನನ್ನಲ್ಲಿರ್ತವೆ. ಇದು ಬಿಡ್ರೀ,ಇಲ್ಲಿರೋ ಬೇರೆ ಯಾವುದಾದ್ರೂ ಸೆಲೆಕ್ಟ್ ಮಾಡಿ,ಲಕ್ಷ ಲಕ್ಷ ತಂದು ಸುರಿಯೋ ಲಕ್ಷ್ಮಿ ಫೋಟೋಗಳೇ ಇದಾವಲ್ಲಾ.

ಮಾತಾಡುತ್ತಾ ಶ್ರೀನಿವಾಸ, ಅಲ್ಲಿದ್ದ ಬೇರೆ ಫೋಟೋಗಳನ್ನ ಮುಂದೆ ಸರಿಸೋ ಪ್ರಯತ್ನ ಮಾಡಿದ. ವೇಣು ಮಾತ್ರ ಭಾಗಶಃ ಲಲಿತೆಯನ್ನೇ ಒಪ್ಪಿಯಾಗಿತ್ತು. ಜೇಬಿನಿಂದ ಒಂದಿಷ್ಟು ಹಣ ತೆಗೆದವರೇ ಶ್ರೀನಿವಾಸನ ಜೇಬಿಗೆರಿಸಿ ಅವನನ್ನೇ ದಿಟ್ಟಿಸಿದರು.

ಇದಕ್ಕೇನು ಅವಸರ, ಮೊದಲು ಕೆಲಸ ಹೇಳ್ರಿ ಕಾಸಿನ ವಿಚಾರ ಆಮೇಲೆ ನೋಡ್ಕೊಂಡ್ರಾಯ್ತು. ವೇಣು ಮಾತಾಡಲು ಮುಂದಾದ್ರು. ನೋಡು ಹಣ ಎಷ್ಟು ಬೇಕಾದ್ರೂ ತಗೋ , ನನ್ನ ಮಾತನ್ನ ಒಂದಿಷ್ಟು ಕೇಳಬೇಕು.

ಹೆಂಡ್ತಿ ಸತ್ತಮೇಲೆ ನನ್ನ ವಿಚಾರಿಸೋರು ಈ ಮನೆಯಲ್ಲಿ ಯಾರು ಇಲ್ಲ, ಇನ್ನೂ ಮಗನ ಮದುವೆ ಮಾಡಿ ಮುಗಿಸಿದ್ರೆ,ಬಂದ ಸೊಸೆ ಯಾವ ರೀತಿ ನಡ್ಕೊಂತಾಳೋ ಏನೋ?

ಅದಕ್ಕೇನಂತೆ ಹೇಳ್ರೀ. ಏನಿಲ್ಲ ನೀನು ಮಂಜುನಾಥ್ ಅವ್ರನ್ನ ನನಗೆ ಭೇಟಿ ಮಾಡ್ಸಬೇಕು , ಅದಕ್ಕೂ ಮೊದಲು ಅವ್ರಿಗೆ ಸತ್ಯಾಂಶ ಹೇಳು, ಅವ್ರಿಗೆ ಎಷ್ಟು ಬೇಕೋ ಹಣದ ವ್ಯವಸ್ಥೆ ಮಾಡಿ,ಸ್ವಂತ ಖರ್ಚಿಟ್ಟು ಮದ್ವೆ ಮಾಡ್ಕೊಂತೀನಿ.
ಮತ್ತೆ ನಿನಗೂ ನೆನಪಿರಲಿ, ಮದುವೆ ಗಂಡು ಮಗ ಅಲ್ಲ ನಾನು. ಶ್ರೀನಿವಾಸ ಕ್ಷಣಕಾಲ ವಿಚಲಿತವಾಗಿ ಸಾವರಿಸಿಕೊಂಡು ಉಸುರಿದ.

ಏನು ಹೇಳ್ತಿದ್ದೀರಾ ವೇಣು ಅವ್ರೇ ! ಗಾಬರಿಯಾಗ್ಬೇಡ ನಾನು ಹೇಳ್ತಿರೋದು ಸತ್ಯವೇ  ಈಗ್ಲೇ ಹುಡುಗಿಗೇ ಯಾವ್ದೂ ಗೊತ್ತಾಗೋದು ಬೇಡ, ಮಂಜುನಾಥ್ ಗೆ ನೀನು ಒಪ್ಪಿಸು, ಅವರಿಗೆ ನನ್ನಂತವರ ಅವಶ್ಯಕತೆಯಿದೆ,ಹಣ ಕೊಡ್ತೀವಿ ಅಂದ್ರೆ ಒಪ್ಕೊಂಡೇ ಒಪ್ಕೋತಾರೆ, ಮುಂದೆ ಮಗಳಿಗೆ ಅವರು ಒಪ್ಪಿಸಿ ಕರ್ಕೊಂಡು ಬರಲಿ. ಶ್ರೀನಿವಾಸನಿಗೆ ಮಾತುಗಳೇ ನಿಂತು ಹೋದಂತಾದ್ವು, ಹತ್ತು ಮದುವೆಗೂ ಸಿಗದಷ್ಟು ನೋಟುಗಳು ಜೇಬಿನಲ್ಲಿ ಮಡಚಿಕೊಂಡಿದ್ವು.

ಕಂಡವನೇ ನೋಟುಗಳನ್ನೊಮ್ಮೆ ವೇಣು ಅವರನ್ನೊಮ್ಮೆ ನೋಡಿದ, ಸರಿ ತಪ್ಪುಗಳ ಕಡೆ ಮಾತೇ ಬರಲಿಲ್ಲ, ಒಪ್ಪಿಗೆಯಂತೆ ಸೂಚಿಸಿ ಉಳಿದ ಫೋಟೋಗಳೊಂದಿಗೆ ಹೊರ ನಡೆದ.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ.    ನಾಳೆಗೆ……

 

Share This Article
error: Content is protected !!
";