ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಉತ್ತಮ ಗೆಳೆತನ ಎನ್ನುವುದು ನಮ್ಮ ಅತ್ಯಮೂಲ್ಯ ಆಸ್ತಿಯಾಗಿದ್ದು ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಬಹಳ ಮುಖ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯಪಟ್ಟರು.
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಭಜನೆ ನಡೆಸಿಕೊಟ್ಟು ಅವರು “ನೀವು ಮತ್ತು ನಿಮ್ಮ ಗೆಳೆತನ” ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಗೆಳೆತನವು ನಾಗರಿಕ ವ್ಯಕ್ತಿಯ ಮೂಲಭೂತ ಮೌಲ್ಯಗಳಲ್ಲೊಂದು. ಅದು ಮಾನವನ ಜೀವನವನ್ನು ಸುಂದರಗೊಳಿಸಿ ಸಾರ್ಥಕಗೊಳಿಸುವುದು.ಗೆಳೆಯರ ನಡುವೆ ಮುಕ್ತ,ತೆರೆದ ಮನಸ್ಸಿನ ಮಾತುಕತೆಯನ್ನು, ಸಂಪರ್ಕವನ್ನೂ ಸ್ನೇಹವು ಅಪೇಕ್ಷಿಸುತ್ತದೆ ಎಂದರು.
ಶಿಬಿರದ ಆರಂಭದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ ಮತ್ತು ಚೈತನ್ಯದಾಯಕ ನುಡಿಗಳು ಮತ್ತು ಅಮ್ಮ ಶಾರದಾಮಾತೆ ಪಠಣ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ವಿವಿಧ ಆಟಗಳನ್ನು ಸಂತೋಷ್ ಕುಮಾರ್ ಅವರು ಆಡಿಸಿದರು. ತರಗತಿಯಲ್ಲಿ ಡಾ.ಭೂಮಿಕಾ, ಸುಧಾಮಣಿ, ಹರ್ಷಿತಾ, ಯಶಸ್ವಿ, ವೈಷ್ಣವಿ, ಚರಣ್ಯ,ಚಿರಣ್ಯ, ದವನ್, ಯಶಸ್ಸು, ಶ್ರೇಯಸ್, ವಿಷ್ಣು,ವಿವಿಕ್ತ, ಜಾಹ್ನವಿ,ಸಹನಾ, ಲಕ್ಷ್ಮೀ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

