ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಹಾಲು ಉತ್ಪಾದಕ ರೈತರಿಂದ ಖರೀದಿ ಮಾಡುವ ಪ್ರತಿ ಕೆಜಿ ಹಾಲಿಗೆ 2 ರೂ ಹೆಚ್ಚಳ ಮಾಡಲಾಗಿದ್ದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ (ಶಿಮೂಲ್)ದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಶಿಮೂಲ್ ತೀರ್ಮಾನದಿಂದಾಗಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಜಿಲ್ಲೆಗಳ ವ್ಯಾಪ್ತಿಯ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ.
ಬೇಸಿಗೆ ಹಂಗಾಮಿನಲ್ಲಿ ಹೈನು ರಾಸುಗಳ ನಿರ್ವಹಣಾ ವೆಚ್ಚ ಅಧಿಕವಾಗುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಿ ಲಾಭಾಂಶ ಕಡಿಮೆ ಆಗುವುದರಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಸಲುವಾಗಿ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರೈತರಿಂದ ಖರೀದಿಸುವ ಹಾಲು ಖರೀದಿ ದರವನ್ನು ಪ್ರತಿ ಕೆಜಿಗೆ 2 ರೂ. ಹೆಚ್ಚಿಸಿ ಪರಿಷ್ಕರಿಸಲು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ ಅವರ ಅಧ್ಯಕ್ಷತೆಯಲ್ಲಿ ಜ.31 ರಂದು ನಡೆದ ಒಕ್ಕೂಟದ 453ನೇ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ.
ಪ್ರಸ್ತುತ ಹಾಲಿನ ದರ-
ಒಕ್ಕೂಟದಿಂದ ಸಂಘಗಳಿಗೆ ಪ್ರಸ್ತುತ ಎಫ್ಎಟಿ 4.0%, ಎಸ್ಎನ್ಎಫ್ 8.50% ಇರುವ ಪ್ರತಿ ಕೆ.ಜಿ ಹಾಲಿಗೆ 32.09 ರೂ. ಪರಿಷ್ಕೃತ ದರ 34.18 ರೂ. ಸಂಘದಿಂದ ಉತ್ಪಾದಕರಿಗೆ ಪ್ರಸ್ತುತ ಎಫ್ಎಟಿ 4.0%, ಎಸ್ಎನ್ಎಫ್ 8.50% ಇರುವ ಪ್ರತಿ ಲೀ. ಹಾಲಿಗೆ 30.13 ರೂ. ಪರಿಷ್ಕೃತ ದರ 32.22 ರೂ. ಪರಿಷ್ಕೃತ ದರ ದಿ : 01/02/2025 ರಿಂದ ದಿ: 31/03/2025 ರವರೆಗೆ ಜಾರಿಯಲ್ಲಿರುತ್ತದೆ.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಹೆಚ್. ಎನ್ ವಿದ್ಯಾಧರ, ಉಪಾಧ್ಯಕ್ಷ ಚೇತನ್ ಎಸ್ ನಾಡಿಗರ, ನಿರ್ದೇಶಕರುಗಳಾದ ಆರ್. ಎಂ ಮಂಜುನಾಥ ಗೌಡ, ಡಿ. ಆನಂದ, ಜಗದೀಶಪ್ಪ ಬಣಕಾರ್, ಟಿ. ಶಿವಶಂಕರಪ್ಪ, ಜಿ. ಪಿ ರೇವಣಸಿದ್ದಪ್ಪ, ಹೆಚ್. ಕೆ ಬಸಪ್ಪ, ಹೆಚ್. ಬಿ ದಿನೇಶ್, ಬಿ. ಜಿ ಬಸವರಾಜಪ್ಪ, ಬಿ. ಆರ್ ರವಿಕುಮಾರ್, ಬಿ. ಸಿ ಸಂಜೀವ ಮೂರ್ತಿ, ಟಿ. ಎಸ್ ದಯಾನಂದ ಗೌಡ, ಜಿ. ಬಿ ಶೇಖರಪ್ಪ, ಎಸ್. ಕುಮಾರ್, ನಾಗಭೂಷಣ, ರಾಜಶೇಖರ ಮೂರ್ತಿ. ಎಂ ನಿರ್ದೇಶಕರು (ಗುಣಭರವಸೆ) ಕ.ಹಾ.ಮ, ಡಾ.ಬಾಬುರತ್ನ ಉಪ ನಿರ್ದೇಶಕರು, ಡಾ.ವಿನಯ್ಕುಮಾರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್. ಜಿ ಶೇಖರ್ ಇವರು ಉಪಸ್ಥಿತರಿದ್ದರು ಎಂದು ತನ್ನಪ್ರಕಟಣೆಯಲ್ಲಿ ತಿಳಿಸಿದೆ.

