ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ತಾಲೂಕಿನ ಕುಡುತಿನಿ ಪೊಲೀಸ್ ಠಾಣಾ ಸರಹದ್ದಿನ ಹಳೇ ಮಾದಾಪುರ ಗ್ರಾಮದ, ಗಾದಿ ಲಿಂಗಪ್ಪನ ಹೊಲದ ಕಾಲುವೆಯಲ್ಲಿ ಹೆಚ್.ಗೋಪಾಲ್ (42) ಎಂಬುವವರ ತಲೆಗೆ ಬಲವಾಗಿ ಹೊಡೆದು ಮಾ.1 ರಂದು ಕೊಲೆಮಾಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ. ಕೊಲೆ ಪ್ರಕರಣವನ್ನು ತ್ವರಿತವಾಗಿ ಪತ್ತೆ ಹಚ್ಚುವಂತೆ ಎಸ್ಪಿ ಡಾ.ಸುಮನ್ ಡಿ.ಪಿ ಅವರು ಕುರುಗೋಡು ಠಾಣೆಯ ತನಿಖಾಧಿಕಾರಿ ಬಾಳನಗೌಡ ಮಾನ ಶೆಟ್ಟರ್ ಅವರಿಗೆ ಸೂಚಿಸಿದ್ದರು.
ಈ ಪ್ರಕರಣದಲ್ಲಿ ಸಂಡೂರು ತಾಲೂಕಿನ ಹಳೇ ಮಾದಾಪುರ ಗ್ರಾಮದ ಗೋವಿಂದ(50) ಈತನ ಪತ್ನಿ ಅಂಬಮ್ಮ(40), ಮಕ್ಕಳಾದ ಪ್ರಜ್ವಲ್(20, ರಮೇಶ್(22) ಬಂಧಿಸಲಾಗಿದೆ.
ಆರೋಪಿಗಳು ವಿಚಾರಣೆ ಸಮಯದಲ್ಲಿ ಫೆ.28 ರಂದು ರಾತ್ರಿ ಕೊಲೆಯಾದ ಹೆಚ್.ಗೋಪಾಲನು ಆರೋಪಿತರ ಮನೆ ಹತ್ತಿರ ಬಂದು, ಆರೋಪಿತರ ಮನೆಯ ಬಾಗಿಲು ಬಡಿದು ಅಂಬಮ್ಮಳನ್ನು ತನ್ನೊಂದಿಗೆ ಪೋನ್ನಲ್ಲಿ ಮಾತನಾಡಲು ಹೇಳುವಂತೆ ಹಾಗೂ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.
ಆಗ ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿಯ ನಡುವೆ ಜಗಳ ನಡೆದಿರುತ್ತದೆ. ಈ ವೇಳೆ ಗೋವಿಂದನು, ಗೋಪಾಲನಿಗೆ ಮಚ್ಚಿನಿಂದ ತೆಲೆಗೆ ಹೊಡೆದಿದ್ದು, ಇದರಿಂದ ಗೋಪಾಲನು ಮೃತಪಟ್ಟಿರುತ್ತಾನೆ. ನಂತರ ಆರೋಪಿಗಳು ಮೃತ ಗೋಪಾಲನ ಶವವನ್ನು ಗಾದಿ ಲಿಂಗಪ್ಪನ ಹೊಲದ ಕಾಲುವೆಯಲ್ಲಿ ಬಿಸಾಡಿ ಪರಾರಿಯಾಗಿರುವುದಾಗಿ ಹೇಳಿದ್ದಾರೆಂದು ಎಸ್ಪಿ ಕಚೇರಿ ಪ್ರಕಟಣೆ ತಿಳಿಸಿದೆ.

