ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಿದ್ದರಾಮಯ್ಯನವರು ಮಂಡಿಸಿದ ಆಯವ್ಯಯವು ರಾಜ್ಯವನ್ನು ಸಾಲದ ಕೂಪಕ್ಕೆ ದೂಡುವ ದಿವಾಳಿ ಬಜೆಟ್ ಆಗಿದೆ. ಯಾವುದೇ ಹೊಸ ಕೈಗಾರಿಕೆಗಳ ಸ್ಥಾಪನೆ ವಿಚಾರವಿಲ್ಲ, ರೈತರಿಗೆ ನೆರವಿನ ಸಹಾಯಹಸ್ತವಿಲ್ಲದ ಇದೊಂದು ಕೇವಲ ಅಂಕಿ ಅಂಶಗಳ ಮಾಯಾಜಾಲದ ಬಜೆಟ್ ಆಗಿದೆ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ರಾಜ್ಯದ ಒಟ್ಟು ಸಾಲ ೮.೨೪ ಲಕ್ಷ ಕೋಟಿ ದಾಟುತ್ತಿರುವುದು ಆತಂಕಕಾರಿ. ಸಿದ್ದರಾಮಯ್ಯನವರ ಬಜೆಟ್ ರಾಜ್ಯದ ಜನರ ಆಶೋತ್ತರಗಳಿಗೆ ತಣ್ಣೀರು ಎರಚಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ಆರ್ಥಿಕ ಶಿಸ್ತನ್ನು ಕಾಪಾಡಲು ಮತ್ತು ಅನಗತ್ಯ ಸಾಲದ ಹೊರೆ ತಡೆಯಲು ಜಾರಿಗೆ ತಂದಿರುವ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ-೨೦೦೨ ರನ್ನು ಉಲ್ಲಂಘಿಸುವ ಅಂಚಿಗೆ ಸಿದ್ದರಾಮಯ್ಯ ಬಂದು ತಲುಪಿದ್ದಾರೆ.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಮೇಲೆ ಸಾಲದ ಮಿತಿ ರಾಜ್ಯದ ಆರ್ಥಿಕ ಹೊಣೆಗಾರಿಕೆ ನಿಯಮಗಳ ಪ್ರಕಾರ ಹಣಕಾಸಿನ ಕೊರತೆಯನ್ನು ರಾಜ್ಯದ ಒಟ್ಟು ಉತ್ಪನ್ನದ ಶೇಕಡ ೩ ರಷ್ಟು ಮಿತಿ ಕಾಯ್ದುಕೊಳ್ಳಬೇಕಾದ ಬಜೆಟ್ ಶೇ೨.೯೫ ರಷ್ಟಿದೆ. ರಾಜಸ್ವ ಕೊರತೆ ಕಡಿಮೆ ಮಾಡಬೇಕಿದ್ದ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಸಾಲದ ಮೇಲೆ ಸಾಲ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಂಸದರು ಆರೋಪಿಸಿದ್ದಾರೆ.

