ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಚಿತ್ರದುರ್ಗ, ದಾವಣಗೆರೆ, ತುಮಕೂರು ಚಿಕ್ಕಮಗಳೂರು ಜಿಲ್ಲೆಗಳ ರೈತರ ಆಶಾ ಕಿರಣ ಭದ್ರಾ ಮೇಲ್ದಂಡೆ ಯೋಜನೆ ಕುಂಟುತ್ತಾ ಸಾಗಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರ ೨೦೨೩-೨೪ ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಘೋಷಿಸಿದ ರೂ.೫೩೦೦ ಕೋಟಿ ಸಹಾಯಧನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ.ಕಾರಜೋಳ ಅವರು ಸಂಸತ್ನಲ್ಲಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ.
ಮಧ್ಯ ಕರ್ನಾಟಕ ರೈತರ ಬವಣೆಯನ್ನು ಎಳೆ ಎಳೆಯಾಗಿ ಬಿಡಿಸಿಡುವ ಮೂಲಕ ಕೂಡಲೇ ಘೋಷಣೆ ಮಾಡಿದ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಸಂಸದರು ಒತ್ತಾಯಿಸಿದರು.
ಭಾಷಣದ ಸಾರಾಂಶ :
ಮಧ್ಯ ಕರ್ನಾಟಕ ಭಾಗದ ಬರಪೀಡಿತ ಪ್ರದೇಶಗಳ ರೈತರುಗಳು ಕಳೆದ ೫ ದಶಕಗಳಿಗೂ ಹೆಚ್ಚು ಕಾಲ ನೀರಾವರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸತತ ೫ ದಶಕಗಳ ಹೋರಾಟದ ಬಳಿಕ ಭದ್ರಾ ಮೇಲ್ದಂಡೆ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯು ಕರ್ನಾಟಕದ ಮಧ್ಯಭಾಗದ ಬರಪೀಡಿತ ೨,೨೫,೦೦೦ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಪದ್ಧತಿಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವುದು ಮತ್ತು ಅಚ್ಚುಕಟ್ಟು ಪ್ರದೇಶದ ಸುಮಾರು ೩೬೭ ಕೆರೆಗಳನ್ನು ತುಂಬುವ ಉದ್ದೇಶವನ್ನು ಹೊಂದಿದೆ. ಯೋಜನೆಯ ಅಚ್ಚುಕಟ್ಟು ಪ್ರದೇಶವು ಮಧ್ಯ ಕರ್ನಾಟಕ ಭಾಗದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬರುತ್ತದೆ.
ಈ ಯೋಜನೆಯನ್ನು ೨೦೦೮ರಲ್ಲಿ ಪ್ರಾರಂಭಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕಾರಜೋಳ ಗಮನ ಸೆಳೆದರು. ಯೋಜನೆಗೆ ಕೇಂದ್ರ ಜಲ ಆಯೋಗದ ವಿವಿಧ ನಿರ್ದೇಶನಾಲಯಗಳಿಂದ ಅಗತ್ಯವಿರುವ ಎಲ್ಲಾ ತೀರುವಳಿಗಳನ್ನು ಪಡೆಯಲಾಗಿದ್ದು, ಯೋಜನೆಯು ತಾಂತ್ರಿಕ ಹಾಗೂ ಆರ್ಥಿಕವಾಗಿ ಕಾರ್ಯಸಾಧುವಾಗಿದೆ ಎಂದು ಕೇಂದ್ರ ಜಲಶಕ್ತಿ ಮಂತ್ರಾಲಯದ ಸಲಹಾ ಸಮಿತಿಯು ಅಂಗೀಕರಿಸಿರುತ್ತದೆ. ಇನವೆಸ್ಟ್ಮೆಂಟ್ ಕ್ಲಿಯರೆನ್ಸ್ ಕಮಿಟಿಯು ಯೋಜನೆಗೆ ತೀರುವಳಿಯನ್ನು ನೀಡಿದ್ದು; ಹೈ ಪವರ್ ಸ್ಟೀರಿಂಗ್ ಕಮಿಟಿಯು (HPSC) ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಡಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಿರುತ್ತದೆ ಮತ್ತು ಕೇಂದ್ರ ಹಣಕಾಸು ಮಂತ್ರಾಲಯದ ಪಬ್ಲಿಕ್
ಇನ್ವೆಸ್ಟ್ಮೆಂಟ್ ಬೋರ್ಡ್ವು (PIB) ಯೋಜನೆಗೆ ರೂ.೫೩೦೦ ಕೋಟಿಗಳ ಕೇಂದ್ರ ಸಹಾಯಧನಕ್ಕಾಗಿ ಶಿಫಾರಸು ಮಾಡಿರುತ್ತದೆ. ಹೀಗಾಗಿ, ೨೦೨೩-೨೪ನೇ ಸಾಲಿನ ಕೇಂದ್ರ ಅಯವ್ಯಯದಲ್ಲಿ, ಭದ್ರಾ ಯೋಜನೆಗೆ ರೂ.೫೩೦೦ ಕೋಟಿಗಳ ಮೊತ್ತವನ್ನು ಕೇಂದ್ರ ಧನಸಹಾಯವಾಗಿ ನೀಡಲಾಗುವುದೆಂದು ಘೋಷಿಸಲಾಗಿದೆ. ಯೋಜನೆಗೆ ಕೇಂದ್ರ ಸಹಾಯಧನ ರೂ.೫೩೦೦ ಕೋಟಿಗಳನ್ನು ಘೋಷಿಸಿದ್ದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾರಜೋಳ ಅವರು ತಿಳಿಸಿದ್ದಾರೆ.
ನಾನು ಪ್ರತಿನಿಧಿಸುವ ಚಿತ್ರದುರ್ಗ ಕ್ಷೇತ್ರವು ಕರ್ನಾಟಕದ ಮಧ್ಯ-ಭಾಗದಲ್ಲಿದ್ದು, ಹಿಂದುಳಿದ ಪ್ರದೇಶವಾಗಿದೆ. ಇದು ಬರಪೀಡಿತ ಪ್ರದೇಶ ಆಗಿದ್ದರೂ ಸಹ ಈ ಪ್ರದೇಶದ ಮಣ್ಣು ಫಲವತ್ತತೆಯ ಗುಣ-ಲಕ್ಷಣಗಳನ್ನು ಹೊಂದಿದೆ. ವಿರಳವಾದ ಮಳೆಯ ಕಾರಣದಿಂದಾಗಿ ಬೆಳೆಗಳು ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತವೆ. ಅಧಿಕವಾದ ಅಂತರ್ಜಲ ಬಳಕೆಯಿಂದಾಗಿ ಅಂತರ್ಜಲ ಮಟ್ಟವು ಕುಸಿಯುತ್ತಿದೆ. ವಿಶೇಷವಾಗಿ ತುಮಕೂರು ಜಿಲ್ಲೆ ಪಾವಗಡ ಮತ್ತು ಸಿರಾ ತಾಲೂಕುಗಳಲ್ಲಿ ಅಂತರ್ಜಲದಲ್ಲಿ ವಿಷಕಾರಿ ಫ್ಲೋರೈಡ್ ಪ್ರಮಾಣ ಅಧಿಕವಾಗಿದ್ದು ಇದು ಜನರ ಆರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಉಂಟು ಮಾಡುತ್ತಲಿದೆ. ಮಳೆಯ ಕೊರತೆಯಿಂದಾಗಿ ತಮ್ಮ ತಮ್ಮ ಜಮೀನುಗಳನ್ನು ಹಾಗೂ ಕೃಷಿ ಚಟುವಟಿಕೆಗಳನ್ನು ತೊರೆದು ರೈತಾಪಿ ಜನರು ಉದ್ಯೋಗ ಅರಸಿ ದೂರದ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಅವರು ಗಮನ ಸೆಳೆದರು.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದಿಂದ ಈ ಭಾಗದ ರೈತಾಪಿ ಜನರ ಜಮೀನುಗಳಿಗೆ ಕನಿಷ್ಟ ಮುಂಗಾರು ಹಂಗಾಮಿನಲ್ಲಿ ಖಚಿತವಾಗಿ ನೀರೊದಗಿಸಬಹುದಾಗಿದೆ. ಈ ಯೋಜನೆಯು ಕೆರೆಗಳಿಗೆ ನೀರು ತುಂಬಿಸುವುದನ್ನು ಒಳಗೊಂಡಿರುವುದರಿಂದ ಅಂತರ್ಜಲ ಮಟ್ಟವು ಸುಧಾರಣೆಗೊಂಡು ತನ್ಮೂಲಕ ಫ್ಲೋರೈಡ್ ಅಂಶವು ಕಡಿಮೆಯಾಗಿ ಕುಡಿಯುವ ನೀರಿನ ಬೇಡಿಕೆಗೆ ಅನುವಾಗಲಿದೆ. ಯೋಜನೆಯ ಅನುಷ್ಠಾನದಿಂದ ಕೃಷಿ ಉತ್ಪನ್ನಗಳ ಇಳುವರಿಯು ಸುಮಾರು ೩ ರಿಂದ ೪ ಪಟ್ಟು ಹೆಚ್ಚಳವಾಗಲಿದೆ ಎಂದು ಸಂಸದರು ತಿಳಿಸಿದರು.
ನಮ್ಮ ಸರ್ಕಾರದ ಮೇಲಿನ ದೃಢವಾದ ನಂಬಿಕೆ ಮತ್ತು ವಿಶ್ವಾಸಗಳನ್ನು ಹೊಂದಿರುವ ನನ್ನ ಕ್ಷೇತ್ರದ ಜನರು ನನ್ನನ್ನು ಸಂಸತ್ತಿಗೆ ಆಯ್ಕೆ ಮಾಡಿರುತ್ತಾರೆ. ಈ ಯೋಜನೆಯು ಅನುಷ್ಠಾನಗೊಂಡಲ್ಲಿ ನನ್ನ ಕ್ಷೇತ್ರದ ಹಾಗೂ ಮಧ್ಯ-ಕರ್ನಾಟಕ ಭಾಗದ ಜನರು ಎಂದೆಂದಿಗೂ ನಮ್ಮ ಸರ್ಕಾರಕ್ಕೆ ಚಿರಋಣಿಯಾಗಿರುತ್ತಾರೆ.
ಗೌರವಾನ್ವಿತ ಅಧ್ಯಕ್ಷರೇ, ಈ ಸದನದಲ್ಲಿ ನಾನು ತಮ್ಮ ಮೂಲಕ ಪ್ರಧಾನ ಮಂತ್ರಿಗಳಲ್ಲಿ ಹಾಗೂ ಜಲಶಕ್ತಿ ಸಚಿವರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ೨೦೨೩-೨೪ರ ಕೇಂದ್ರ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ರೂ.೫೩೦೦ ಕೋಟಿಗಳ ಸಹಾಯಧನವನ್ನು PMKSY-AIBP Scheme ಅಡಿಯಲ್ಲಿ ಬಿಡುಗಡೆಗೊಳಿಸಲು ಅದರಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ. ಇದರಿಂದಾಗಿ ನನ್ನ ಕ್ಷೇತ್ರದ ಜನರ ಆರ್ಥಿಕ ಸ್ಥಿತಿಯು ಉತ್ತಮಗೊಳ್ಳಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಅವರು ಮನವಿ ಮಾಡಿದ್ದಾರೆ.