ಮೇಕೆದಾಟು ತ್ವರಿತ ಚಾಲನೆಗೆ ತಾಂತ್ರಿಕ ತಂಡ ನೇಮಿಸಿದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಸುಪ್ರೀಂ ಕೋರ್ಟ್ ಆದೇಶದ ಮೇಕೆದಾಟು ಯೋಜನೆಯನ್ನು ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕೆಇಆರ್​​ಎಸ್ (ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ) ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಲಸಂಪನ್ಮೂಲ ಇಲಾಖೆಯ ಉಪ ಮುಖ್ಯ ಇಂಜಿನಿಯರ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಸರ್ಕಾರ ಆದೇಶಿಸಿದೆಯಲ್ಲದೆ, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕೆಲಸ ನಿರ್ವಹಿಸುವಂತೆ ತಿಳಿಸಿದೆ.

- Advertisement - 

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ದಿನಾಂಕ-18.11.2025 ರಂದು ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಒಂದು ಮುಖ್ಯ ಇಂಜಿನಿಯ‌ರ್ ಕಚೇರಿ ಹಾಗೂ ಒಂದು ಅಧೀಕ್ಷಕ ಇಂಜಿನಿಯರ್ ಕಚೇರಿ ಆರಂಭಿಸಲು ನಿರ್ಧರಿಸಲಾಗಿತ್ತು.

ಆದರೆ ಹೊಸದಾಗಿ ಕಚೇರಿ ಆರಂಭಿಸುವುದು ಹಾಗೂ ಹುದ್ದೆಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮತಿ ಅಗತ್ಯವಾಗಿತ್ತು. ಇದರಿಂದ ಬಹಳಷ್ಟು ಸಮಯಾವಕಾಶ ಬೇಕಾಗಲಿದೆ ಎನ್ನುವುದನ್ನ ಅರಿತ ಸರ್ಕಾರ ಮೇಕೆದಾಟು ಯೋಜನೆ ಜಾರಿಯ ಜವಾಬ್ದಾರಿಯನ್ನು ಕೆಇಆರ್​​ಎಸ್ ನಿರ್ದೇಶಕರಿಗೆ ವಹಿಸಿ ಆದೇಶಿಸಿದೆ.

- Advertisement - 

ಇಂಜಿನಿಯರ್ ಮತ್ತು ಸಿಬ್ಬಂದಿಗಳ ತಂಡ:
ಕೆಇಆರ್​ಎಸ್ ಸಂಸ್ಥೆ ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ನೌಕರರನ್ನು ಒಳಗೊಂಡ ತಂಡ ರಚಿಸಿ ಯೋಜನೆಯ ಜಾರಿಯ ಜವಾಬ್ದಾರಿ ನೀಡಿದೆ.

ಸರ್ಕಾರ ರಚಿಸಿರುವ ತಂಡದಲ್ಲಿ ಓರ್ವ ಕಾರ್ಯಪಾಲಕ ಇಂಜಿನಿಯರ್, ಮೂವರು ತಾಂತ್ರಿಕ ಸಹಾಯಕರು, ಆರು ಸಹಾಯಕ ಇಂಜಿನಿಯರ್, ಓರ್ವ ಸಹಾಯಕ ಆಡಳಿತಾಧಿಕಾರಿ, ಓರ್ವ ಲೆಕ್ಕಾಧೀಕ್ಷಕರು, ಅಧೀಕ್ಷಕರು, ಪ್ರಥಮ ದರ್ಜೆ ಲೆಕ್ಕ ಸಹಾಯಕರು, ಇಬ್ಬರು ಪ್ರಥಮ ದರ್ಜೆ ಸಹಾಯಕರು, ಓರ್ವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ನಾಲ್ವರು ದ್ವಿತೀಯ ದರ್ಜೆ ಸಹಾಯಕರು, ಓರ್ವ ಶೀಘ್ರಲಿಪಿಗಾರರು, ನಾಲ್ವರು ಬೆರಳಚ್ಚುಗಾರರು, ಓರ್ವ ವಾಹನ ಚಾಲಕರ, ಇಬ್ಬರು ಗ್ರೂಪ್ ಡಿ ಸಿಬ್ಬಂದಿ, ಓರ್ವ ಕಾವಲುಗಾರನನ್ನು ನೇಮಿಸಿ ಸರ್ಕಾರ ಆದೇಶ ಮಾಡಿದೆ.

ದಾಖಲೆಗಳ ಹಸ್ತಾಂತರ:
ಕಾವೇರಿ ನೀರಾವರಿ ನಿಗಮ(ಕೆಎನ್ಎನ್ಎಲ್)ವು ಮೇಕೆದಾಟು ಯೋಜನೆ ಕಚೇರಿಯ ಕಟ್ಟಡದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಿದೆ. ಈ ತಂಡವು ಕೆಎನ್ಎನ್ಎಲ್​ ವ್ಯವಸ್ಥಾಪಕ ನಿರ್ದೇಶಕರ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು
, ಕಚೇರಿಯ ನಿರ್ವಹಣೆ, ಮೂಲಭೂತ ಸೌಕರ್ಯ ಹಾಗೂ ಇತರೆ ವೆಚ್ಚವನ್ನು ಕೆಎನ್ಎನ್ಎಲ್ ಅನುದಾನದಿಂದ ಭರಿಸಲಾಗುವುದು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲ ಕಡತ, ಪತ್ರ ವ್ಯವಹಾರ ಹಾಗೂ ಇನ್ನಿತರೆ ದಾಖಲೆಗಳನ್ನು ಕೆಇಆರ್​​ಎಸ್ ನಿರ್ದೇಶಕರಿಗೆ ಹಸ್ತಾಂತರಿಸುವಂತೆ ಕೆಎನ್ಎನ್ಎಲ್​ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿ ಆದೇಶ ಮಾಡಲಾಗಿದೆ.

 

Share This Article
error: Content is protected !!
";