ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅವ್ಯವಹಾರಗಳಲ್ಲಿ ತೊಡಗಿರುವ ಕೆಲವು ಪಿ.ಡಿ.ಓ.ಗಳನ್ನು ರಕ್ಷಿಸುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಪ ಕಾರ್ಯದರ್ಶಿ ಹಾಗೂ ಮುಖ್ಯ ಲೆಕ್ಕಾಧಿಕಾರಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಲಂಬಾಣಿ ಬಂಜಾರ ಸಮಾಜದಿಂದ ಜಿಲ್ಲಾ ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಧಿಕ್ಕಾರಗಳನ್ನು ಕೂಗಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉತ್ತಮ ಹಾಗೂ ಪಾರದರ್ಶಕ ಆಡಳಿತ ನೀಡುತ್ತಾರೆಂಬ ನಿರೀಕ್ಷೆಯಲ್ಲಿದ್ದೇವೆ. ಪೂರ್ವಗ್ರಹ ಪೀಡಿತರಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸದೆ ಅಧಿಕಾರದ ದರ್ಪ ತೋರುತ್ತಿದ್ದಾರೆ.
ಕಚೇರಿಯಲ್ಲಿ ಸೌಜನ್ಯದಿಂದ ವರ್ತಿಸುತ್ತಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತ ಪ್ರಾಮಾಣಿಕರನ್ನು ರಕ್ಷಿಸುವ ಬದಲು ಭ್ರಷ್ಟ ಅಧಿಕಾರಿಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಉಪ ಕಾರ್ಯದರ್ಶಿ ಹಾಗೂ ಮುಖ್ಯ ಲೆಕ್ಕಾಧಿಕಾರಿ ಇವರುಗಳು ಜಿಲ್ಲೆಗೆ ಹಳಬರಾಗಿದ್ದು, ಭ್ರಷ್ಟ ಪಿ.ಡಿ.ಓ.ಗಳನ್ನು ಉಳಿಸುವಲ್ಲಿ ಇವರ ಪಾತ್ರ ದೊಡ್ಡದು ಎಂದು ಬಂಜಾರ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್ಕುಮಾರ್ ಸಂಸದ ಗೋವಿಂದ ಕಾರಜೋಳರವರಿಗೆ ದೂರಿದರು.
ಚಿತ್ರದುರ್ಗ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ಕೆಲವು ಪಿ.ಡಿ.ಓ.ಗಳು ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಗ್ರೇಡ್-೧ ಗ್ರೇಡ್-೨ ಕಾರ್ಯದರ್ಶಿಗಳು ಅವ್ಯವಹಾರದಲ್ಲಿ ತೊಡಗಿ ಮಾರ್ಗಸೂಚಿ ಉಲ್ಲಂಘಿಸಿ ಕೆಲಸ ಮಾಡುತ್ತಿದ್ದಾರೆ.
ನಗರ ವ್ಯಾಪ್ತಿಯ ಕೆಲವು ಪಂಚಾಯಿತಿಗಳಲ್ಲಿ ಪಿಡಿಓ.ಗಳು ಗೋಮಾಳದಲ್ಲಿ ಖಾತೆ ಮಾಡಿರುವುದು, ೧೪, ೧೫ ನೇ ಹಣಕಾಸು ಅನುದಾನದಲ್ಲಿ ಅವ್ಯವಹಾರವಾಗಿರುವುದನ್ನು ದಾಖಲೆ ಸಮೇತ ನೀಡಿದರು ಕ್ರಮ ಕೈಗೊಳ್ಳದೆ ಸಿಎಓ.ರವರಿಂದ ತನಿಖೆ ಮಾಡಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಎಂ.ಸತೀಶ್ಕುಮಾರ್ ಸಂಸದರು ಮತ್ತು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ಪ್ರವೀಣ್ನಾಯ್ಕ, ಕರಿಯನಾಯ್ಕ, ತಿಪ್ಪೇಸ್ವಾಮಿ ನಾಯ್ಕ, ಸೋಮೇನಹಳ್ಳಿ ಪ್ರಶಾಂತ್, ಪರಶುರಾಮ್, ಚಿನ್ಮಯ್, ಗೋವಿಂದಾಯ, ಕೊಟ್ರೇಶ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

