ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು!? ಹೆಚ್ಚು ಮಳೆಯಾದರೆ ಮುಳುಗುತ್ತದೆ! ಕಡಿಮೆ ಸುರಿದರೆ ತೇಲುತ್ತದೆ! ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ರಸ್ತೆಗಳಲ್ಲಿಯೇ ಕೆರೆ, ಚರಂಡಿ! ಗುಂಡಿಗೆ ಹಿಡಿ ಮಣ್ಣಾಕುವುದಕ್ಕೂ ಬಿಡಿಗಾಸಿಲ್ಲ. ಸುರಂಗಕ್ಕೆ ಮಾತ್ರ ಸಾವಿರಾರು ಕೋಟಿ ಟೆಂಡರು! ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು! ಎಂದು ಕಾಂಗ್ರೆಸ್ ಸರ್ಕಾರವನ್ನು ಅವರು ಟೀಕಿಸಿದ್ದಾರೆ.
ವಾರಕ್ಕೊಮ್ಮೆ ತೆರಿಗೆ ಬರೆ, ದರ ಏರಿಕೆ! ಜನರೆಂದರೆ ಜೀವರಹಿತ ಕಲ್ಲು ಬಂಡೆಗಳೇ? ಮನಸೋಇಚ್ಛೆ ಒಡೆದು ಬಡಿದು ನುಂಗಲು!? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಾಡು ಎಂದರೆ ಕಲ್ಲು ಬಂಡೆಗಳಲ್ಲ, ನಾಡು ಎಂದರೆ ಮನುಷ್ಯರು. ಕೆರೆಯ ನೀರನು ಕೆರೆಗೆ ಚೆಲ್ಲುತ್ತಿಲ್ಲವೇಕೆ? ಕೆರೆ ನೀರಿಗೆ ಕಮೀಷನ್ ಕೋಡಿ ಬಿದ್ದಿದೆ! ತೆರಿಗೆ ಥೈಲಿ, ಬೆಲೆ ಸುಲಿಗೆ ಹಣವೆಲ್ಲಿ? ಜಾಹೀರಾತುಗಳಲ್ಲಿ ಬಣ್ಣಬಣ್ಣವಾಗಿ ಕಾಣುವ ಬೆಂಗಳೂರು, ನೈಜವಾಗಿ ನಿಟ್ಟುಸಿರು ಬಿಡುತ್ತಿದೆ. ಏಕೆ?
ಬರುತ್ತಿರುವ ಆದಾಯ ಎಲ್ಲಿ ಹೋಗುತ್ತಿದೆ? ನಗರ ಜನರ ಬೆವರಿನ ಹಣ ಏನೇನಾಗುತ್ತಿದೆ? ಕಲೆಕ್ಷನ್ ಎಷ್ಟು? ವೆಚ್ಚ ಎಷ್ಟು? ಸ್ವಾಹಾ ಎಷ್ಟು? ಗುಂಡಿ ಮುಚ್ಚಲು ಗತಿ ಇಲ್ಲ. ಚರಂಡಿ ಕಸ ಎತ್ತಲು ದಿಕ್ಕಿಲ್ಲ. ನಿತ್ಯವೂ ಗುದ್ದಲಿಪೂಜೆ, ಶಂಕುಸ್ಥಾಪನೆ!! ಹೊಸ ಶೀಶೆ, ಹಳೇ ಮದ್ಯ. ಹಳೇ ಕಾಮಗಾರಿ, ಹೊಸ ಹೊಸ ಬಿಲ್ಲು! ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್‘ಗಳ ಬೆಂಗಳೂರು! ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.