ಗ್ರೇಟರ್​​​​ ಬೆಂಗಳೂರು ಟೌನ್​ಶಿಪ್​ ನಿರ್ಮಾಣ ಸರ್ವೇಗೆ ವಿಘ್ನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ರಾಮನಗರ:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕನಸಿನ ಗ್ರೇಟರ್​​​​ ಬೆಂಗಳೂರು ಟೌನ್​ಶಿಪ್​ ನಿರ್ಮಾಣಕ್ಕೆ ಸರ್ವೇ ಆರಂಭಿಸಲಾದ ದಿನವೇ ವಿಘ್ನ ಎದುರಾಗಿದೆ.

ಬಿಡದಿ ಬಳಿಯ ಕೆಲ ಹಳ್ಳಿಗಳ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು ಭೂಮಿ ಅಳತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ)ವು ಜಂಟಿ ಅಳತೆ ಕಾರ್ಯ ಶುರು ಮಾಡಿದೆ. ಆದರೆ ರೈತರು ಹಾಗೂ ಸ್ಥಳೀಯ ಗ್ರಾಮಸ್ಥರು ಸರ್ವೆ ಕಾರ್ಯ ವಿರೋಧಿಸಿದ್ದು ಸರ್ಕಾರ ನಿಗದಿ ಮಾಡಿರುವ ಪರಿಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement - 

ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗುರುತಿಸಿದ್ದ ಭೂಪ್ರದೇಶದ ಪೈಕಿ 8,493 ಎಕರೆ ಪ್ರದೇಶದಲ್ಲಿ ಸಮಗ್ರ ಉಪನಗರ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳುವ ಯೋಜನೆಗೆ ಈಗಾಗಲೇ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನ ಹಾಗೂ ಪರಿಹಾರ ನಿರ್ಧಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಂಟಿ ಅಳತೆ ಮೂಲಕ ಮೊಬೈಲ್​ ಆ್ಯಪ್‌ಆಧಾರಿತ ಸರ್ವೇ ಮಾಡಲು ಅಧಿಕಾರಿಗಳು ಮುಂದಾಗಿರುವುದನ್ನು ರೈತರು ಸಮಗ್ರವಾಗಿ ವಿರೋಧಿಸಿದ್ದಾರೆ.

ಉಪನಗರಕ್ಕೆ ಸೇರುವ ಗ್ರಾಮಗಳು?:
ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಭೈರಮಂಗಲ
, ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ತಾಯಪ್ಪನದೊಡ್ಡಿ, ಮಂಡಲಹಳ್ಳಿ ಹಾರೋಹಳ್ಳಿ ತಾಲೂಕು ವ್ಯಾಪ್ತಿಯ ವಡೇರಹಳ್ಳಿ ಸೇರಿದಂತೆ 9 ಗ್ರಾಮಗಳು ಉಪನಗರಕ್ಕೆ ಸೇರಲಿವೆ.

- Advertisement - 

ಈ ಎಲ್ಲ ಹಳ್ಳಿಗಳಲ್ಲಿ ಜಂಟಿ ಅಳತೆ ಸರ್ವೇ ಕಾರ್ಯದಲ್ಲಿ ಕಂದಾಯ, ಭೂಮಾಪನ, ಕೃಷಿ, ತೋಟಗಾರಿಕೆ, ರೇಷ್ಮೆ, ಲೋಕೋಪಯೋಗಿ, ನೀರಾವರಿ, ಬೆಸ್ಕಾಂ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ 12 ತಂಡಗಳು ಸರ್ವೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ಸರ್ವೇ ವೇಳೆ ರೈತರ ಜಮೀನು ಮತ್ತು ಬೆಳೆಗಳ ಸ್ವರೂಪ, ವಾಣಿಜ್ಯ, ತೋಟಗಾರಿಕೆ ಬೆಳೆಗಳು, ಜಾನುವಾರು, ಕೊಟ್ಟಿಗೆ, ಕೆರೆ-ಕಟ್ಟೆಗಳು, ಮರಗಳು, ರೇಷ್ಮೆ ಸಾಕಣೆ ಮನೆ, ಪಂಪ್‌ಸೆಟ್‌, ಪಂಪ್‌ಹೌಸ್‌, ಪಾಲಿಹೌಸ್‌ಸೇರಿದಂತೆ ಎಲ್ಲಾ ಬಗೆಯ ಆಸ್ತಿಪಾಸ್ತಿಯ ಮೌಲ್ಯಮಾಪನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ಕಂಚುಗಾರನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ತಾಯಪ್ಪನದೊಡ್ಡಿ ಗ್ರಾಮದ ಬಳಿ ಜಂಟಿ ಅಳತೆ ಪ್ರಮಾಣೀಕರಣ ತಂಡದವರು ತೆರಳಿದಾಗ ಕೆಲವು ರೈತರು ಹಾಗೂ ಮಹಿಳೆಯರು ಉಪನಗರ ಕಾರ್ಯಾಚರಣೆಗೆ ಅಡ್ಡಿ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಒಮ್ಮೆಯೂ ರೈತರ ಸಭೆ ಕರೆದು ಚರ್ಚಿಸದೆ ಏಕಾಏಕಿ ಸರ್ವೇಗೆ ಬಂದಿರುವುದು ಅನ್ಯಾಯ. ದಯವಿಟ್ಟು ಇಲ್ಲಿಂದ ತೆರಳಿ. ಭೂಸ್ವಾಧೀನ ಪ್ರಕ್ರಿಯೆ ಕೈಬಿಡಿ ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಕೂಡಾ ಮಾಡಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 5 ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳಿಗೆ ಆಯುಕ್ತರು, ವಿಶೇಷ ಆಯಕ್ತರುಗಳನ್ನು ನೇಮಿಸಿ ಈಗಾಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎನ್ನುವುದನ್ನ ಸ್ಮರಿಸಬಹುದಾಗಿದೆ.

 

Share This Article
error: Content is protected !!
";