ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆಗೊಬ್ಬರ, ಬೆಳೆ ಪರಿವರ್ತನೆ ಮತ್ತು ಅಕ್ಕಡಿ/ಅಂತರ ಬೆಳೆ ಬೆಳೆಯುವುದು ಅವಶ್ಯಕ ಎಂದು ಹೊಳಲ್ಕೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್ ಹೇಳಿದರು.
ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಬಂಡೆಬೊಮ್ಮೇನಹಳ್ಳಿ ಗ್ರಾಮದಲ್ಲಿ ಗುರುವಾರ ರೈತರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ತರಬೇತಿ ಹಾಗೂ ಚಿಕ್ಕಜಾಜೂರು ರೈತ ಸಂಪರ್ಕ ಕೇಂದ್ರ ವತಿಯಿಂದ ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಸ್ಥಿರ ಕೃಷಿ ಮತ್ತು ಗುಣಮಟ್ಟದ ಆಹಾರದ ಉತ್ಪಾದನೆಗೆ ರೈತರು ಕೃಷಿ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳುವುದರ ಜೊತೆಗೆ ಜಿಲ್ಲಾ ಕೃಷಿ ತರಬೇತಿಕೇಂದ್ರದಿಂದ ಆಯೋಜಿಸಲಾಗುವ ತಾಂತ್ರಿಕ ತರಬೇತಿಗಳ ಪ್ರಯೋಜನೆ ಪಡೆಯಬೇಕು ಎಂದು ರೈತರಿಗೆ ಮನವಿ ಮಾಡಿದರು.
ಜಿಲ್ಲಾ ಕೃಷಿ ತರಬೇತಿಕೇಂದ್ರ ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ಹಾಗೂ ಮುಖ್ಯಸ್ಥ ಆರ್.ರಜನೀಕಾಂತ ಮಾತನಾಡಿ, ಜಿಲ್ಲಾಕೃಷಿ ತರಬೇತಿಕೇಂದ್ರದ ವತಿಯಿಂದ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಕುರಿತು ಆಯೋಜಿಸಲಾಗುತ್ತಿರುವ ಸಾಂಸ್ಥಿಕ ತರಬೇತಿ, ಹೊರಾಂಗಣ ತರಬೇತಿ, ಆನ್ಲೈನ್ ತರಬೇತಿಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕೃಷಿಯಲ್ಲಿ ಗುಣಮಟ್ಟದ ಬಿತ್ತನೆ ಬೀಜದ ಮಹತ್ವ ಹಾಗೂ ಬೆಳೆಯ ಪ್ರಾರಂಭದ ಹಂತದಲ್ಲಿ ಬರುವಕೀಟ ಮತ್ತು ರೋಗಗಳ ನಿರ್ವಹಣೆಗೆ ಬೀಜೋಪಚಾರ ಅತ್ಯವಶ್ಯಕ ಎಂದು ತಿಳಿಸಿ ಅವರು, ಕಡಲೆ, ಹುರುಳಿ, ಅಲಸಂಧೆ ಬೆಳೆಗಳಲ್ಲಿ ಸೊರಗುರೋಗ ನಿರ್ವಹಣೆಗೆಕಾರ್ಬನ್ಡೈಜಿಮ್ @ 2 ಗ್ರಾಂ/ಕೆಜಿ ಬೀಜಕ್ಕೆಅಥವಾಟ್ರೈಕೋಡರ್ಮಾ @ 4-10 ಗ್ರಾಂ/ಪ್ರತಿಕೆಜಿ ಬೀಜಕ್ಕೆ ಹಾಕಿ ಬೀಜೋಪಚಾರ ಮಾಡುವುದು.
ಹಾಗೆ ಸೂಕ್ಷ್ಮಾಣುಜೀವಿಗಳನ್ನು ಬಳಸಿ ಏಕದಳ ಧಾನ್ಯಗಳಾದ ರಾಗಿ, ಗೋಧಿ, ಮುಸುಕಿನ ಜೋಳ ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ಸಾರಜನಕಸ್ಥೀರಿಕರಿಸುವ ಜೀವಾಣುಗಳಾದ ಅಜೋಸ್ಪರಿಲಂ, ಅಜೊಟೊಬ್ಯಾಕ್ಟರ್ರನ್ನು ಹಾಗೂ ಬೇಳೆಕಾಳು ಬೆಳೆಗಳಾದ ಹುರಳಿ, ಅಲಸಂದೆ, ಕಡಲೆ ಮುಂತಾದ ಬೆಳೆಗಳಲ್ಲಿ ರೈಜೋಬಿಯಂಅಣುಜೀವಿ ಗೊಬ್ಬರವನ್ನು ಬೀಜೋಪಚಾರಕ್ಕೆ ಬಳಸಬಹುದು. ರಂಜಕ ಕರಗಿಸುವ ಜೀವಾಣುಗಳನ್ನು (ಪಿ.ಎಸ್.ಬಿ) ಎಲ್ಲಾ ಬೆಳೆಗಳಿಗೂ ಬಳಸಬಹುದು ಎಂದು ತಿಳಿಸಿದರು.
ಯಾವುದೇ ಕೀಟನಾಶಕ ಬಳಸುವುದಕ್ಕೆ ಮುಂಚೆ ಜೊತೆಯಲ್ಲಿ ಕೊಟ್ಟಿರುವ ಚೀಟಿ (ಲೇಬಲ್) ಓದಬೇಕು. ಸಿಂಪರಣಾ ದ್ರಾವಣದಿಂದ ರಕ್ಷಿಸಿಕೊಳ್ಳಲು ಯಾವಾಗಲೂ ಸರಿಯಾದ ಬಟ್ಟೆಗಳನ್ನು ಧರಿಸಬೇಕು. (ಕನ್ನಡಕ, ಮುಖವಾಡ, ಕೈ ಹೊದಿಕೆ ಮುಂತಾದವುಗಳು).
ಸೋರುವಅಥವಾ ಹಾನಿಯಾಗಿರುವ ಸಿಂಪರಣಾ ಯಂತ್ರ (ಸೈಯರ್) ವನ್ನು ಉಪಯೋಗಿಸಬಾರದು. ಗಾಳಿ ಬೀಸುತ್ತಿರುವ ದಿಕ್ಕಿನಿಂದಲೇ ಕೀಟನಾಶಕ ದ್ರಾವಣ ಸಿಂಪಡಿಸಬೇಕು ಮತ್ತು ಗಾಳಿಗೆ ವಿರುದ್ಧವಾದ ದಿಕ್ಕಿನಲ್ಲಿಸಿಂಪಡಿಸಬಾರದು. ಕೀಟನಾಶಕ ಉಸಿರಿನೊಡನೆ ಒಳಗೆ ಹೋಗುವುದನ್ನುತಡೆಯಲುಯಾವಾಗಲೂ ಸೊಂಟದಿಂದ ಕೆಳಮಟ್ಟದಲ್ಲಿ ಸಿಂಪಡಿಸಬೇಕು ಎಂದರು.
ಸಿಂಪರಣೆಯ ನಂತರ ಸಾಬೂನಿನಿಂದ ಸ್ನಾನ ಮಾಡಿ ಬಟ್ಟೆಯನ್ನು ಬದಲಾಯಿಸಬೇಕು. ಆನಂತರ ಆಹಾರ ಮತ್ತು ನೀರನ್ನು ಸೇವಿಸಬೇಕು. ಹಾಗೂ ಸಿಂಪರಣಾ ಸಮಯದಲ್ಲಿ ಉಪಯೋಗಿಸಿದ ಬಟ್ಟೆಯನ್ನು ಸ್ವಚ್ಛಗೊಳಿಸಬೇಕು. ಸಿಂಪರಣಾ ಸಮಯದಲ್ಲಿ ಎಲೆ–ಅಡಿಕೆಜಗಿಯಬಾರದು ಮತ್ತುಧೂಮಪಾನ ಮಾಡಬಾರದು ಮತ್ತು ತೊಂದರೆ ಉಂಟಾದಲ್ಲಿ ಸಿಂಪಡಿಸುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು.
ಕೀಟನಾಶಕಗಳನ್ನು ಮಕ್ಕಳ ಕೈಗೆ ಸಿಗದಂತೆ ಪ್ರತ್ಯೇಕ ಸ್ಥಳದಲ್ಲಿಟ್ಟು ಬೀಗ ಹಾಕಬೇಕು. ಖಾಲಿಯಾದ ಕೀಟನಾಶಕದ ಡಬ್ಬಗಳನ್ನು ಆಹಾರ ಧಾನ್ಯ ಸಂಗ್ರಹಿಸಲು ಉಪಯೋಗಿಸಬಾರದು. ಖಾಲಿಯಾದಡಬ್ಬವನ್ನು ನಾಶಪಡಿಸಿ ಮತ್ತು ನೆಲದೊಳಗೆ ಅದನ್ನು ಹೂತು ಹಾಕಬೇಕು ಎಂದು ತಿಳಿಸಿದರು.
ಆರೋಗ್ಯಕರ ಸ್ವಾವಲಂಬನೆ ಜೀವನ ನಡೆಸಲು ರೈತರು ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಲು ಅನವಶ್ಯಕವಾಗಿ ರಸಾಯನಿಕಗೊಬ್ಬರ ಬಳಕೆ ಮಾಡದೆ ಸ್ಥಳೀಯವಾಗಿ ದೊರೆಯುವ ಕೃಷಿ ತ್ಯಾಜ್ಯಗಳಿಂದ ಕಾಂಪೋಷ್ಟ್ ಅಥವಾ ಎರೆಹುಳು ಗೊಬ್ಬರ ತಯಾರಿಸಿ ಬಳಸಬೇಕೆಂದರು.
ಆರೋಗ್ಯಕರಜೀವನ ನಡೆಸಲು ರೈತರು ಕುಟುಂಬಕ್ಕೆ ಬೇಕಾದ ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ತಮ್ಮ ಜಮೀನು ಅಥವಾ ಮನೆಯ ಹಿತ್ತಲಿನಲ್ಲಿ ಕನಿಷ್ಟ 1 ಅಥವಾ 2 ಗುಂಟೆ ಪ್ರದೇಶದಲ್ಲಿ ಪೌಷ್ಠಿಕ ಕೈತೋಟ ಮಾಡಿಕೊಳ್ಳುವುದು ಉತ್ತಮವೆಂದರು. ಅಲ್ಲದೆ ರೈತರು ಗಾಣದಎಣ್ಣೆ ಬಳಕೆ ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ ದಿನನಿತ್ಯದ ಆಹಾರ ಸೇವನೆಯಲ್ಲಿ ಅವುಗಳನ್ನು ಬಳಸುವುದು ಸೂಕ್ತ ಎಂದರು.
ತರಬೇತಿಯ ನಂತರ ಆಹಾರ ಮತ್ತು ಪೌಷ್ಟಿಕ ಯೋಜನೆಯಡಿ ಆಯೋಜಿಸಲಾದ ಪರಮೇಶ್ವರಪ್ಪರವರ ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತಬಾಂಧವರು ಪಾಲ್ಗೊಂಡರು.
ತರಬೇತಿ ಕಾರ್ಯಕ್ರಮದಲ್ಲಿ ರೈತ ಸಂಪರ್ಕಕೇಂದ್ರ, ಚಿಕ್ಕಜಾಜೂರಿನ ಕೃಷಿ ಆಧಿಕಾರಿ ಮಂಜುನಾಥ ಮೆಗಳಮನೆ, ಆಹಾರ ಮತ್ತು ಪೌಷ್ಟಿಕ ಯೋಜನೆಯ ತಾಂತ್ರಿಕ ಸಹಾಯಕ ಗೋಪಿ ಕೃಷ್ಣ ಹೆಚ್ ಕೆ., ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಸುರೇಶ್ ಎಂ.ಎಸ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರೂಪ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ, ರಾಜಪ್ಪ, ಪರಮೇಶ್ವರಪ್ಪ ಹಾಗೂ ರೈತರು ಇದ್ದರು.