ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ರಾಜಘಟ್ಟ ಗ್ರಾಮದ ನಂದಿಕುಂಟೆ ಕೆರೆಯ ನಾಮಫಲಕ ಅನಾವರಣ ಕೆರೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ನಾಮಫಲಕ ಅನಾವರಣ ಮಾಡುವ ಶುಭ ಹಾರೈಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಲವಾರು ವರ್ಷಗಳಿಂದ ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡುತ್ತಾ ಧರ್ಮದ ಉಳಿವಿಗಾಗಿ ದೇವಾಲಯಗಳ ಉಳಿವಿಗೆ ಕೆರೆಗಳ ಉಳಿವಿಗೆ ಬದ್ಧವಾಗಿರುತ್ತದೆ. ಕೆರೆ ಕುಂಟೆ ಸಂರಕ್ಷಿಸಿದರೆ ರೈತರ ಬದುಕು ಹಸನಾಗುತ್ತದೆ. ಹಾಗಾಗಿ ನೀರಿನ ಮೂಲಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಎಲ್ಲಾ ಆಶಯಗಳನ್ನು ಇಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಪ್ರವೃತ್ತವಾಗಿದೆ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ರಮ ಯಶಸ್ವಿಯಾಗಿ ಆಗುತ್ತಿದ್ದು ದೊಡ್ಡಬಳ್ಳಾಪುರದಲ್ಲಿ ಇದುವರೆಗೆ 10 ಕೆರೆಗಳನ್ನು ಹೂಳೆತ್ತಲಾಗಿದೆ.
ನದಿ ಮೂಲಗಳು ನೀರಿನ ಸಂಪನ್ಮೂಲಗಳು ಇರದ ತಾಲೂಕು ಎಂದರೆ ದೊಡ್ಡಬಳ್ಳಾಪುರ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೂಲಕ ಕೆರೆಗಳನ್ನು ಹೂಳೆತ್ತುವ ಕಾರ್ಯಕ್ರಮಗಳ ಮೂಲಕ ಊರಿನಲ್ಲಿ ನೀರಾವರಿ ಸಮಸ್ಯೆ ಕಡಿಮೆಯಾಗುತ್ತಿದೆ. ದೊಡ್ಡಬಳ್ಳಾಪುರ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಮಾಜಿ ಸಚಿವರಾದ ರಾಣಿ ಸತೀಶ್ ಮಾತನಾಡಿ ರಾಜಘಟ್ಟ ಗ್ರಾಮ ಇತಿಹಾಸ ಪ್ರಸಿದ್ಧವಾದ ಗ್ರಾಮ ಈ ಗ್ರಾಮದಲ್ಲಿ ಕೆರೆ ಹೂಳೆತ್ತಿ ಇದರ ಹಸ್ತಾಂತರ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆಯವರು ಆಗಮಿಸಿರುವುದು ನಮ್ಮ ಗ್ರಾಮಕ್ಕೂ ಹಾಗೂ ತಾಲೂಕಿಗೂ ಹೆಮ್ಮೆಯ ವಿಚಾರ.
ಹೂಳೆತ್ತಿದಂತಹ ನಂದಿಕುಂಟೆ ಕೆರೆಯ ಉಳಿಸುವುದು ರಾಜಘಟ್ಟ ಗ್ರಾಮ ಪಂಚಾಯತ್ ಹಾಗೂ ಕೆರೆ ಸಮಿತಿ ಹಾಗೂ ಊರಿನವರ ಜವಾಬ್ದಾರಿಯಾಗಿರುತ್ತದೆ. ಇದನ್ನು ಉಳಿಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ ಅಮಿತ್ ,ಕೆರೆ ಸಮಿತಿಯ ಅಧ್ಯಕ್ಷರಾದ ಆನಂದ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಮುನಿರಾಜು, ಪ್ರಾದೇಶಿಕ ನಿರ್ದೇಶಕರಾದ ಶ್ರೀನಿವಾಸ್,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳು, ಮೇಲ್ವಿಚಾರಕರು,ಊರಿನ ಗಣ್ಯರು ಊರಿನ ಗ್ರಾಮಸ್ಥರು ಸಂಘ-ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

