ಹರಕೆ ಕಥೆ ಭಾಗ-5   ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೂಡಣದ ಬೆಳಕಿಗೆ ಕತ್ತಲು ಸದ್ದಿಲ್ಲದೆ ಅಡಗಿ ನೆಲವೆಲ್ಲ ಎಳೆ ಬಿಸಿಲನ್ನ ಎರಚಿಕೊಂಡಿತ್ತು
, ಎಂದಿನಂತೆ ಹೊಸ್ತಿಲಿಗೆ ನೀರಾಕಿ ಊದಿನ ಕಡ್ಡಿ ಹಚ್ಚಿಟ್ಟ ಬರಮಿ,ಗೋಣಿ ತಾಟಿನಲ್ಲಿ ಬೆಚ್ಚಗೆ ಮುದುಡಿಕೊಂಡಿದ್ದ ತಮ್ಮ ತಂಗಿಯನ್ನು ಏಳಿಸಲು ಮುಂದಾಗಿದ್ಲು. ತಂಬಿಗೆ ತಗೊಂಡು ಹೋಗಿ ಬಂದಿದ್ದ ಸಿದಗಯ್ಯ ನೆರಿಕೆಗೆ ವರಗಿ ಬೀಡಿಯ ದಮ್ಮಿನೊಂದಿಗೆ ಎಲ್ಲಿಯೋ ತೇಲಿ ಹೋಗಿದ್ದ. ಶೆಟ್ಟರ ಅಂಗಡಿಯಿಂದ ಬೆಲ್ಲ ಟೀ ಪುಡಿ ತಂದಿದ್ದ ನಾಗವ್ವ,ಒಲೆಮ್ಯಾಲೆ ಪಾತ್ರೆ ಇಟ್ಟು ನೀರಾಕಿ,ಸಣ್ಣವ್ವ ಕೊಟ್ಟ ಮ್ಯಾಕೆ ಹಾಲಿಂದ ಟೀ ಮಾಡಾಕೆ ಉರಿ ಹಚ್ಚಿದ್ಲು. ಮಾತಿಗೆ ತುಟಿ ಬಿಚ್ಚಿದ್ದು ಸಿದಗಯ್ಯನೇ..ನಾಗಿ ಇವತ್ತು ಅಮಾವಾಸ್ಯೆ ಬರಮಿ ಹರಕೆ ತೀರ್ಸೋದು ಒಂದು ಆಗಿಬಿಡ್ಲಿ, ನಮ್ಮ ತೊಂದ್ರೆಗಳಿಗೆ ಅದನ್ನೇ ಮನಸ್ನಾಗಿಟ್ಟುಕೊಂಡು ಕೊರ್ಗೋದು ಬ್ಯಾಡ. ಒಲೆ ಮುಂದೆ ಕುಂತಿದ್ದ ನಾಗವ್ವ ಏರುದನಿಯಲ್ಲಿ, ಮಧ್ಯಾಹ್ನದ ಮುದ್ದಿಗೆ ಹಿಟ್ಟಿಲ್ಲ ಅಂದ್ರೆ ಹರಕೆ ತೀರ್ಸಾಕೆ ಹೊರಟಿ,ಈಗ ಪೂಜೆ ಅಂದ್ರೆ ಸುಮ್ನೇ ಆಗ್ತದೇನು? ಅಂದಳು. ಏನಾದ್ರೂ ಮಾಡೆ,ಇವತ್ತು ಪೂಜೆ ಮಾಡ್ಸು ಅಂತ ಆ ಪೂಜಾರಿ ಹೇಳವ್ನೆ, ಸಾಲದಾಗ ಸಾಲ ಆಗಿಹೋಗ್ಲಿ, ಶೆಟ್ರ ಅಂಗಡ್ಯಾಗ ಸಾಮಾನು ತಂದು ಬ್ಯಾಳೆ ಹಾಕು, ದುಡ್ದು ತೀರ್ಸನಂತೆ.

ಅವಳಿಗೆ ಹೊಸ ಬಟ್ಟೆ ಬೇಕಲ್ಲ,ನಾಗವ್ವ ಗುನುಗಿದ್ಲು

- Advertisement - 

ಯಾರತ್ತಾದ್ರು ಕಾಡಿ ಬೇಡಿ ಎಂತದ್ದಾನ ಒಂದು ತುಂಡು ತರ್ತೀನಿ,ಮಾಡಿ ಮುಗ್ಸಾನ.

ಅಪ್ಪ ಅವ್ವನ ಮಾತನ್ನ ಆಲಿಸಿಕೊಂಡಿದ್ದ ಬರಮಿ, ತಮ್ಮ ಓಬನ್ನ,ತಂಗಿ ಬೋರಿನ ಏಳಿಸುತ್ತಾ ಹೊಸಬಟ್ಟೆ ಹೋಳಿಗೆ ಸುದ್ದೀನ ಅವರ ಕಿವಿಯಾಗೆ ಉಸುರಿದ್ಲು. ನಿದ್ದೆಯಿಂದೆದ್ದ ಮಕ್ಕಳು ಬಂದವ್ರೆ ಅವ್ವನನ್ನ ತಬ್ಬಿ ಕೊಳ್ಳುತ್ತಾ,ಅವ್ವ ಅವ್ವಾ ನಮಗೂ ಹೊಸ ಬಟ್ಟೆ ಕೊಡಸವ್ವ,ಅಕ್ಕಗ ಮಾತ್ರ ಹೊಸ ಬಟ್ಟೆ ನಮಗೆ ಇಲ್ವೇನು?..ಅಂತ ದುಂಬಾಲು ಬಿದ್ದಿದ್ವು,ಅದನ್ನು ಹೊರಗಿನಿಂದಲೇ ಕೇಳಿಸಿಕೊಂಡ ಸಿದಗಯ್ಯ,ಏ ಮುಂಡೆವ ಇವತ್ತು ಉಗಾದಿ ಹಬ್ಬ ಅನ್ಕೊಂಡ್ರೇನು, ನಿಮ್ಮಕ್ಕಂದು ಹರಕೆ ಐತೆ ಅವಳಿಗೆ ಹೊಸ ಬಟ್ಟೆ,ನಿಮ್ಮವ್ವ ಬ್ಯಾಳೆ ಹಾಕ್ತಾಳೆ,ಉಂಡ್ಕಂಡು ತೆಪ್ಪಗಿರಬೇಕು ಹಠ ಮಾಡಿದ್ರೆ ಒದೆ ತಿಂತೀರಿ ಅಷ್ಟೇ ಅಂದ,ಮಕ್ಕಳು ಒಬ್ಬರ ಮುಖ ಒಬ್ರು ನೋಡ್ಕೊಂಡು ಅಕ್ಕನ ಮುಖ ನೋಡಿದ್ವು,ಬರಮಿ ತಲೆ ನೇವರಿಸುತ್ತಲೇ ದುಡ್ಡಿಲ್ಲದ ಹೊತ್ತನಾಗ ನನಗೆ ಯಾಕವ್ವ ಹೊಸ ಬಟ್ಟೆ ನಾನೊಬ್ಬಳು ಉಟ್ಕೊಂಡ್ರೆ ಇವರಿಬ್ಬರೂ ಅಳ್ತಾರೆ  ತರೋದಾದ್ರೆ ಮೂವರಿಗೂ ತರ್ಬೇಕು,ಇಲ್ಲಾ ಅಂದ್ರೆ ಯಾವುದಾದ್ರೂ ಹಬ್ಬದಾಗ ಪೂಜೆ ಮಾಡ್ಸಿದ್ರಾಯ್ತು. ಮಗಳ ಮಾತಿಗೆ ಅಡ್ಡವಾದ ನಾಗವ್ವ ಹರಕೆ ತೀರ್ದ ಹೊರ್ತು ನಮ್ಮ ಕಷ್ಟ ತೀರಾಕಿಲ್ಲ ಅಂತ ಪೂಜಾರಪ್ಪನೋರ ಅಪ್ಪಣೆ ಆಗೈತಂತೆ, ಅದ್ಕೆ ಅದೊಂದು ಶಾಸ್ತ್ರ ಮಾಡಿ ಮುಗಿಸಿಬಿಡ್ಲಿ ಬಿಡು, ಮುಂದೆ ಇದ್ದೇ ಐತೆ ನಮ್ಮ ಕಷ್ಟ, ಯಡ್ಲಿಯಾಗ ನೀರು ಕಾದಿದ್ರೆ ಮೈಮ್ಯಾಗ ಒಂದಿಷ್ಟು ಸುರುವ್ಕೊ,ನಿಮ್ಮಪ್ಪ ಪ್ಯಾಟಿಗೆ ಹೋಗಿ ಬರ್ತಾನ, ನಾನು ಗುಡಿತಾವ ಹೋಗಿ ಆ ಜೋಗವ್ವನ್ನ ಕಂಡು ಪೂಜೆ ಇಟ್ಕಳ್ಳಾಕೆ ಹೇಳಿ ಬರ್ತೀನಿ.. ಮಾತಾಡುತ್ತಲೇ ನಾಗವ್ವ ಟಿ ಸೊಸಿ ಕಪ್ಪಿಗೆ ಹಾಕಿ ಮಕ್ಕಳಿಗೆ ಕುಡಿಯಾಕೆ ಹೇಳ್ತ, ಒಂದು ಕಪ್ಪನ್ನ ಹೊರಗೆ ಕುಂತಿದ್ದ ಸಿದಗಯ್ಯನ ಕೈಗೆ ಇಟ್ಟವಳೇ.. ಜೋಗವ್ವನ ಮನೆ ಕಡೆ ನಡೆದ್ಲು,ಕಪ್ಪು ಹಿಡಿದು ಬೀಡಿಯೊದಿಗೆ ಗುಟುಕರಿಸುತ್ತಿದ್ದ ಸಿದಗಯ್ಯ ನಾಗವ್ವ ಹೋದ ಹೆಜ್ಜೆಗಳನ್ನೇ ದಿಟ್ಟಿಸಿದ್ದ.
ಲೇಖನ-ಕುಮಾರ ಬಡಪ್ಪ, ಚಿತ್ರದುರ್ಗ.            ನಾಳೆಗೆ….

- Advertisement - 

Share This Article
error: Content is protected !!
";