ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹರಕೆ ಕತೆ ಭಾಗ-3 ಕುಮಾರ್ ಬಡಪ್ಪ
ಮೋಡಿ ಪೆನ್ನಯ್ಯ ಒಂದೇ ಸಮನೆ ಚಡಪಡಿಸುತ್ತಲೇ ಇದ್ದ, ಅತ್ತಿಂದಿತ್ತ ದಾರಿ ತುಳಿದಾಡುತ್ತ,ಕೆರೆ ದಂಡೆಯಾಗ ಬಂದು ಎಷ್ಟೊತ್ತಿಂದ ಕಾಯೋದು? ಹೇಳಿದ ಸಮಯಕ್ಕೆ ಎಂದೂ ಬರಲಿಲ್ಲ ಇವ್ನು.. ಎಂದು ಗುಣಗುತ್ತಿರುವಾಗಲೇ ದಟ್ಟವಾಗುತ್ತಿದ್ದ ಕತ್ತಲಲ್ಲಿ ತುಸು ದೂರದಾಗೆ ಹಾದಿಯಲ್ಲಿ ನಡೆದು ಬರುತ್ತಿದ್ದವನ ಕಡೆ ದೃಷ್ಟಿ ನೆಟ್ಟ.ನೋಡಿದರೆ ಅವನೋ ಬೇರೆಯೋ ಅನ್ನುವ ಅನುಮಾನವೂ ಸುಳಿದಾಡಿಕೊಂಡಿತ್ತು.
ದ್ಯಾಮಯ್ಯ ಯಾಕ ಹಿಂಗ ಸತಾಯಿಸ್ತಿ,ಸಿಕ್ತು ಅಂದ್ರೆ ನಾನೊಬ್ಬನೇ ತಿಂತೀನೇನು? ಅಲ್ಲೋ ಮಾರಾಯ ಗುಡಿ ಕೆಲಸ ಮುಗಿಸಿ ಬಾಗಿಲಾಕಿ ಬರೋದು ಅಂದ್ರೆ ಸುಮ್ನೆ ಆಗ್ತತೇನು.ಹಳ್ಳಿಯಿಂದ ಹೊರಾಗ ಬರಬೇಕೆಂದರೆ ಎದುರಾಗೋ ಜನಕ್ಕೆಲ್ಲ ಉತ್ತರ ಕೊಟ್ಟು ಬರಬೇಕು, ಆ ಈರಯ್ಯಗೌಡ ಬ್ಯಾರೆ ದಾರಿಯಾಗೆ ಸಿಕ್ಕ.
ಈಗ ಮಾತು ಬ್ಯಾಡ ವಿಷಯಕ್ಕೆ ಬಾ,ಅಮಾವಾಸ್ಯೆ ಇನ್ನು ನಾಲ್ಕು ದಿನ ಉಳೀತು,ನಿನ್ನ ತಯಾರಿ ಎಂಗ ನಡೆಸಿದ್ದಿ` ಪೆನ್ನಯ್ಯ ಚಡಪಡಿಕೆಯಲ್ಲೇ ನೇರ ಉತ್ತರಕ್ಕೆ ಚುರುಕಾದ.
ಸುತ್ತ ಕಣ್ಣಾಡಿಸಿದ ದ್ಯಾಮಯ್ಯ,ಯಾರು ಇಲ್ಲದ್ದು ಖಚಿತಪಡಿಸಿಕೊಂಡು,ಕೆಲಸ ಏನೋ ಪಕ್ಕ ಆಗೇತಿ,ಗುಡಿಯಾಗೆ ಅಪ್ಪಣೆ ಕೊಡ್ಸಿ ಅವನ್ನ ಒಪ್ಪಿಸಿಕೊಂಡೀವ್ನಿ,ನಾಳೆ ನಿನ್ತಾವ ಜೊತೆಯಾಗೆ ಬರ್ತೀನಿ, ರಂಗ ಹಾಕಿ ಇನ್ನೂ ವಸಿ ಪಕ್ಕ ಮಾಡು. ಅವನ ದೊಡ್ಡ ಮಗಳು ಬರ್ಮಿಗೆ 11 ವರ್ಷ,ನನಗೆ ನೆನಪಿರೋ ಹಂಗ,ಅವ್ಳು ಹುಟ್ಟಿದಾಗ ಕಾಳವ್ವಗೆ ಹರಕೆ ಬಿಟ್ಟು ಮುತ್ತು ಕಟ್ಟುಸ್ತೀನಿ ಅಂತ ಕೈ ಮುಕ್ಕೊಂಡಿದ್ದ. ಬಾಳ ಸಾರಿ ಪ್ರಸ್ತಾಪ ಮಾಡ್ತಾ ಬಂದವ್ನೆ, ಸರಕಾರದ ರೂಲ್ಸಿನಾಗ ಅವೆಲ್ಲ ನಡೆಯಾಕಿಲ್ಲ ಅಂತ ಎಷ್ಟೋ ಸಾರಿ ಸಮಾಧಾನ ಪಡಿಸಿ ಕಳಿಸಿವ್ನಿ,ಈಗ ಅದನ್ನೇ ಬಳಸ್ಕೊಂಡು ಅವ್ವಗೆ ಬಿಟ್ಟಿದ್ದು ಅವ್ವನ ಪಾಲೆ, ನಿಂನ್ದೇನೈತಿ ದೇವರ ಕೆಲಸಕ್ಕೆ ಯಂಗಾರ ಬಳಕೆ ಆಗ್ಲಿ ಅಂತ ಮನಸ್ಸು ಗಟ್ಟಿ ಮಾಡಿಸಿವ್ನಿ.
ಮೂರು ವರ್ಷದಿಂದ ಉಣ್ಣಾಕ ಕಾಳಿಲ್ಲ ನಿನ್ನ ಹರಿಕೆ ತೀರದ ಹೊರ್ತು ನಿನ್ನ ಸಂಸಾರ ಉಳಿಯಾಕಿಲ್ಲ ಅಂತ ಅಪ್ಪಣೆ ಕೊಡಿಸಿವ್ನಿ, ಸಿದಗಯ್ಯ ನಡುಗಿ ಹೋಗಿದಾನೆ -ನಾಳೆ ನಿನ್ನ ಕೆಲಸ, ಅವನ ಕೆಲಸವೂ ನೆರವೇರ್ತು ಅನ್ನಬೇಕು, ನಮ್ಮ ಕೆಲಸವೂ ಮುಗಿಬೇಕು, ನಿನ್ನ ಪೂಜೆ ಸಿದ್ಧತೆ ಮಾಡ್ಕೊ,ಆದರೆ ಒಂದು ಮಾತು ನೆನಪಿರಲಿ ನನ್ನ,ನಿನ್ನ,ಸಿದಗಯ್ಯನಿಗೆ ಬಿಟ್ಟರೆ ಇನ್ನೊಂದು ಕಡೆ ವಾಸನೆನೂ ಬರಬಾರದು, ಅಷ್ಟು ಸಲೀಸಾಗಿ ಮುಗಿಸಬೇಕು. ನಾಳೆ ನಿಧಿ ಜಾಗ ಗೊತ್ತುಮಾಡಿ ಪಕ್ಕ ಮಾಡ್ಕೊ, ಎಲ್ಲೂ ಎಡವಟ್ಟು ಆಗಬಾರದು.. ದ್ಯಾಮಯ್ಯ ಹೇಳುತ್ತಲೇ ಅವಸರವಾಗಿ ಹೊರಡಲು ಮುಂದಾದ, ಪೆನ್ನಯನಿಗೂ ಚರ್ಚೆ ಸಮಾಧಾನವೆನಿಸಿತ್ತು ಏನೋ ಜ್ಞಾಪಿಸಿಕೊಂಡವನಂತೆ ಪೆನ್ನಯ್ಯ`ದ್ಯಾಮಯ್ಯ ಹಿಂಗ ಮಾಡು,ನಾಳೆ ಬರುವಾಗ ಅವನು ಹೊಲಕ್ಕೆ ಬಿತ್ತೋ ಬೀಜನ ಜೊತೆಯಾಗೆ ತಗಂಡು ಬರಾಕೆ ಹೇಳು.
ಈ ಬಿತ್ತೋ ಬೀಜ ಯಾಕಯ್ಯ!
ನೀನು ಹೇಳಿದಷ್ಟು ಮಾಡು, ಮುಂದಿನದ್ದು ನನಗೆ ಬಿಡು. ದ್ಯಾಮಯ್ಯನಿಗೆ ಏನೂ ಹೊಳಿಯಲಿಲ್ಲ, ತಲೆ ಕೆರೆದುಕೊಳ್ಳುತ್ತಲೇ ಸರಿ ನಾ ಬರ್ತೀನಿ ಮತ್ತೆ.. ಎಂದ ಪೆನ್ನಯ್ಯನೂ ಸಹ ಹೊರಡಲು ಅನುಮತಿ ಕೊಟ್ಟಂತೆ ಕತ್ತಾಡಿಸಿದ.
ಕತ್ತಲು ಮತ್ತಷ್ಟು ಗಟ್ಟಿಯಾಗ ತೊಡಗಿತ್ತು ದ್ಯಾಮಯ್ಯ ಸರಿದದ್ದೇ ಗೊತ್ತಾಗಲಿಲ್ಲ,ಮುಂದಿನ ಮೂರನೇ ರಾತ್ರಿಗೆ ಬರುವ ಅಮಾವಾಸ್ಯೆಗೆ,ಪೆನ್ನಯ್ಯನ ಯೋಜನೆಗಳು ಕುಣಿಯತೊಡಗಿದವು ಪ್ರೇತಗಳಂತೆ
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ..

