ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಸಂಬಂಧ ತನಿಖೆ ನಡೆಸಲು ಆರೋಪಿಗಳ ಗುರುತು ಪತ್ತೆ ಅಥವಾ ದೃಢೀಕರಣಕ್ಕಾಗಿ ಆಧಾರ್ ದತ್ತಾಂಶ ಪರಿಶೀಲನೆ ನಡೆಸುವುದಕ್ಕಾಗಿ ಜಾರಿ ನಿರ್ದೇಶನಾಲಯಕ್ಕೆ ಅವಕಾಶ ಕಲ್ಪಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅಕ್ರಮ ಹಣ ವರ್ಗವಣೆ ಆರೋಪ ಹೊತ್ತಿರುವ 21 ಮಂದಿ ಆರೋಪಿಗಳ ಮಾಹಿತಿಗೆ ಸಂಬಂಧಿಸಿದಂತೆ ಪರಿಶೀಲನೆಗೆ ಅವಕಾಶ ಕಲ್ಪಿಸಲು ಯುಐಡಿಎಐಗೆ ನಿರ್ದೇಶನ ನೀಡಿದೆ.
ಅಕ್ರಮ ಹಣ ವರ್ಗಾವಣೆ ಅಪರಾಧದ ಕುರಿತು ತನಿಖೆ ನಡೆಸುವುದು ಕಾನೂನುಬದ್ಧ ಸರ್ಕಾರದ ಹಿತಾಸಕ್ತಿಯಾಗಿದೆ. ಪಿಎಂಎಲ್ಎ ಅಡಿಯಲ್ಲಿನ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ನೀಡಲಾಗಿದ್ದು, ಈ ರೀತಿಯ ಅಪರಾಧ ಪ್ರಕರಣಗಳಲ್ಲಿ ಕೋರಲಾದವರ ನಿಜವಾದ ಗುರುತು ಪತ್ತೆಗೆ ಅನುಮತಿ ನೀಡಬಹುದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಆಧಾರ್ ಕಾಯಿದೆ ಸೆಕ್ಷನ್ 33ರ ಅಡಿಯಲ್ಲಿ ಗುರುತುಗಳನ್ನು ಬಹಿರಂಗಪಡಿಸುವ ಕುರಿತು ವಿವರಿಸಿದ್ದು, ಅಪರಾಧ ಕೃತ್ಯಗಳನ್ನು ತಡೆಗಟ್ಟುವಿಕೆ ಮತ್ತು ತನಿಖೆ ಸೇರಿದಂತೆ ಕಾನೂನುಬದ್ಧ ಉದ್ದೇಶಗಳಿಗೆ ದತ್ತಾಂಶ ಸಂಗ್ರಹಿಸುವುದು ಮತ್ತು ಬಹಿರಂಗಪಡಿಸಬಹುದು ಎಂಬುದಾಗಿ ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಅಪರಾಧಿಗಳಾಗಿರುವವರ ವಿಳಾಸ, ಫೋನ್ ಸಂಖ್ಯೆ ಸೇರಿದಂತೆ ಇತರೆ ವಿವರಗಳಲ್ಲಿ ಯಾವುದಾದರೂ ಬದಲಾವಣೆ ಆಗಿದೆಯೇ? ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ದತ್ತಾಂಶವನ್ನು ಪಡೆದುಕೊಳ್ಳಬಹುದು. ಆದರೆ, ಅಪರಾಧ ತನಿಖೆಗೆ ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕೂ ಆ ಮಾಹಿತಿ ಮತ್ತು ದಾಖಲೆಗಳನ್ನು ಬಳಸದಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶಿಸುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ: ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಗ್ರಾಮದಲ್ಲಿ ವಿವಿಧ ಸರ್ವೇ ನಂಬರ್ ಗಳ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ 3,32,43,438 ಮೊತ್ತದ ಹಣವನ್ನು ಪರಿಹಾರ ನೀಡಬೇಕಾಗಿತ್ತು. ಈ ಮೊತ್ತವನ್ನು ಭೂ ಮಾಲೀಕರಾದ ಸಂಜಯ್ ಎ.ದೇಸಾಯಿ ಎಂಬವರಿಗೆ ಪಾವತಿಸಲಾಗಿತ್ತು. ಬಳಿಕ ಈ ಭೂಮಿಗೆ ಹೆಚ್ಚುವರಿ ಪರಿಹಾರಕ್ಕಾಗಿ ಮನವಿ ಮಾಡಿಲ್ಲ ಎಂಬುದಾಗಿ ತಿಳಿಸಿದ್ದು, ಆರ್ಟಿಸಿಯಲ್ಲಿ ಕೆಐಎಡಿಬಿ ಎಂಬುದಾಗಿ ನಮೂದಿಸಲಾಗಿತ್ತು.
ಆದರೆ, ಕೆಐಎಡಿಬಿಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ವಿ.ಡಿ.ಸಜ್ಜನ್ ಅವರು ಇತರೆ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಎರಡನೇ ಬಾರಿಗೆ 3,17,85,000 ರೂ ಪರಿಹಾರ ಮಂಜೂರು ಮಾಡಿದ್ದರು. ಈ ಮೊತ್ತ ಹುಬ್ಬಳ್ಳಿಯ ಐಡಿಬಿಐ ಬ್ಯಾಂಕ್ನಲ್ಲಿ ಧಾರವಾಡದ ಶ್ರೀರಾಮ ನಗರದ ಸಂಜಯ್ ಅಬ್ಬಾಸಾಹೇಬ್ ದೇಸಾಯಿ ಅವರ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಖಾತೆದಾರರ ಆಧಾರ್ ಕಾರ್ಡ್ಗಳಲ್ಲಿರುವಂತೆ ವಿಳಾಸ ತಪ್ಪಾಗಿತ್ತು.
ಈ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿತ್ತು. ಹೀಗಾಗಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ತನಿಖೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಪತ್ತೆ ಹಚ್ಚಬೇಕಾಗಿದೆ. ಇದಕ್ಕಾಗಿ ಆಧಾರ್ ಕಾರ್ಡ್ಗಳ ವಿವರ ಪಡೆಯಲು ಅವಕಾಶ ನೀಡಬೇಕು ಎಂದು ಯುಐಡಿಎಐಗೆ ನಿರ್ದೇಶನ ನೀಡುವಂತೆ ಜಾರಿ ನಿರ್ದೇಶನಾಲಯ ಅರ್ಜಿಯಲ್ಲಿ ಕೋರಿದ್ದನ್ನು ಸ್ಮರಿಸಬಹುದಾಗಿದೆ.