ವಾರ್ಡ್​ಗಳ ಹೆಸರು ಬದಲಾವಣೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್​​​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ವಾರ್ಡ್​ಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಅನುಸರಿಸುವ ಮಾನದಂಡಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಆದೇಶಿಸಿದೆ.

ಕೆಂಗೇರಿ ನಿವಾಸಿ ಹೆಚ್​.ಸಿ.ಬಸವರಾಜಪ್ಪ ಸೇರಿ ಹೆಮ್ಮಿಗೇಪುರ ಹಾಗೂ ಸುತ್ತಲಿನ ಪ್ರದೇಶಗಳ 15 ಮಂದಿ ನಿವಾಸಿಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಜಿಬಿಎ ವ್ಯಾಪ್ತಿಯ ಹೆಮ್ಮಿಗೇಪುರ ವಾರ್ಡ್​​ ಹೆಸರನ್ನು ಕೆಂಗೇರಿ ಕೋಟೆ ವಾರ್ಡ್​​​ ಎಂದು ಬದಲಿಸಿರುವುದನ್ನು ಪ್ರಶ್ನಿಸಿದ್ದರು.

- Advertisement - 

ಈ ಅರ್ಜಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಿಬಿಎ ಅಸ್ತಿತ್ವಕ್ಕೆ ಬಂದು ವಾರ್ಡ್​ಗಳ ಮರುವಿಂಗಡಣೆ ಪ್ರಕ್ರಿಯೆ ನಡೆಯಿತು. ಬಿಬಿಎಂಪಿ ರಚನೆ ಆದಾಗಿಂದಲೂ ಹೆಮ್ಮಿಗೇಪುರ ವಾರ್ಡ್ ಅಸ್ತಿತ್ವದಲ್ಲಿದೆ. ಜಿಬಿಎ ಕಾಯಿದೆ ಬಂದ ಬಳಿಕ 2025ರ ಸೆ.3ರಂದು ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ ಹೆಮ್ಮಿಗೇಪುರ ವಾರ್ಡ್​ ಎಂದೇ ಇತ್ತು. ಆಕ್ಷೇಪಣೆ ಆಲಿಸಿದ ಬಳಿಕ ನವೆಂಬರ್​ 19ರಂದು ಅಂತಿಮ ಅಧಿಸೂಚನೆ ಹೊರಡಿಸಿ ಹೆಮ್ಮಿಗೇಪುರ ವಾರ್ಡ್ ಎಂದು ಹೆಸರು ಅಂತಿಮಗೊಳಿಸಲಾಯಿತು.

- Advertisement - 

ಆದರೆ, ಡಿಸೆಂಬರ್-1ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿ ಯಾವುದೇ ಆಕ್ಷೇಪಣೆಗಳನ್ನೂ ಕೇಳದೆ ಹೆಸರನ್ನು ಹೆಮ್ಮಿಗೇಪುರ ವಾರ್ಡ್​ನಿಂದ ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಲಾಯಿತು.

ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ರಾಜಕೀಯ ಕಾರಣಗಳಿಗೆ ಸ್ಥಳೀಯ ಶಾಸಕರ ಅಣತಿಯಂತೆ ಹೆಸರು ಬದಲಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ನಿರ್ದಿಷ್ಟ ಭಾಗ ಮತ್ತು ಸಮುದಾಯದ ಮತಗಳನ್ನು ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರ್ಜಿದಾರ ಪರ ವಕೀಲರು ಆರೋಪಿಸಿದರು.

ಈ ವೇಳೆ ಸರ್ಕಾರದ ಪರ ವಕೀಲರು, ಹೆಸರು ಬದಲಿಸಲು ಜಿಬಿಎ ಕಾಯ್ದೆಯಲ್ಲಿ ಅವಕಾಶವಿದೆ. ಆದಾಗ್ಯೂ ಹೆಚ್ಚಿನ ಮಾಹಿತಿಯನ್ನು ಸರ್ಕಾರದಿಂದ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಪೀಠಕ್ಕೆ ಮಾಹಿತಿ ನೀಡಿದರು.

ಇದಕ್ಕೆ ಪೀಠ, ವಾರ್ಡ್ ಮರುವಿಂಗಡಣೆ, ಮೀಸಲಾತಿ ನಿಗದಿ ಇವೆಲ್ಲವೂ ಕಾನೂನು ಪ್ರಕ್ರಿಯೆಗಳು ಎಂಬುದೇನು ಸರಿ. ಆದರೆ, ವಾರ್ಡ್​ಗಳ ಹೆಸರು ಬದಲಿಸುವುದು ಏಕೆ? ಹಾಗಾಗಿ, ವಾರ್ಡ್​ಗಳ ಹೆಸರು ಬದಲಾವಣೆಗೆ ಅನುಸರಿಸುವ ಮಾನದಂಡಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿ ಆದೇಶಿಸಿತು.

 

Share This Article
error: Content is protected !!
";