ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧರ್ಮವೆಂದರೆ, ಭಾರತೀಯ ಸಂಸ್ಕೃತಿ, ಪರಂಪರೆ ಎಂದರೆ ಯಾಕಿಷ್ಟು ದ್ವೇಷ, ಅಸಡ್ಡೆ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ಮಾಡಿದ್ದಾರೆ.
ಸನ್ಮಾನ್ಯಮಲ್ಲಿಕಾರ್ಜುನ ಖರ್ಗೆ ಅವರೇ, 144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳದ ಈ ಪರಮ ಪವಿತ್ರ ಪರ್ವಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಒಮ್ಮೆ ಮಿಂದರೆ ಪಾಪಗಳೆಲ್ಲವೂ ಕಳೆಯುತ್ತದೆ, ಪುಣ್ಯ ಲಭಿಸುತ್ತದೆ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಾಕೀತು ಮಾಡಿದ್ದಾರೆ.
ಭಾರತೀಯತೆ, ಸನಾತನ ಧರ್ಮದ ಬಗ್ಗೆ ಕಣಕಣದಲ್ಲೂ ದ್ವೇಷ ತುಂಬಿಕೊಂಡಿರುವ ನಕಲಿ ಗಾಂಧಿ ಕುಟುಂಬವನ್ನ ಓಲೈಸುವ ಭರದಲ್ಲಿ, ಶತಕೋಟಿ ಹಿಂದೂಗಳ ನಂಬಿಕೆಯನ್ನು ಯಾಕೆ ಅಪಮಾನಿಸುತ್ತೀರಿ? ಎಂದು ಅವರು ಪ್ರಶ್ನಿಸಿದ್ದಾರೆ.
ಹಜ್ ಯಾತ್ರೆ ಬಗ್ಗೆಯೋ, ರಂಜಾನ್ ಉಪವಾಸದ ಬಗ್ಗೆಯೋ ಈ ರೀತಿ ಟೀಕೆ ಮಾಡುವ ಧೈರ್ಯ ತೋರಿ ನೋಡೋಣ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಎಲ್ಲರಿಗೂ ತಮ್ಮ ತಮ್ಮ ಮತ, ಧರ್ಮ, ನಂಬಿಕೆಗಳನ್ನ ಆಚರಣೆ ಮಾಡುವ ಹಕ್ಕಿದೆ, ಸ್ವಾತಂತ್ರ್ಯವಿದೆ. ಗಂಗೆಯಲ್ಲಿ ಮಿಂದೇಳುವ ಆಚರಣೆಯನ್ನ ಪ್ರಶ್ನೆ ಮಾಡೋದು, ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಸಂವಿಧಾನಕ್ಕೂ ಅಪಚಾರ ಮಾಡಿದಂತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.