ಕೆರೆಗಳಿಗೆ ನೀರು ಭರ್ತಿಗೆ ಆಗ್ರಹಿಸಿ ಹಿರಿಯೂರು ಬಂದ್ ಯಶಸ್ವಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ತಾಲೂಕಿನ ಜೆಜಿ ಹಳ್ಳಿಯ ಗಾಯಿತ್ರಿ ಜಲಾಶಯ ಸೇರಿದಂತೆ ಐಮಂಗಲ ಹಾಗೂ ಕಸಬಾ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಹಿರಿಯೂರು ಬಂದ್ ಬಹುತೇಕ ಯಶಸ್ವಿಯಾಯಿತು.

ಬೆಳಿಗ್ಗೆಯಿಂದಲೇ ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ತಾಲೂಕು ವರ್ತಕರ ಸಂಘದಿಂದ ರೈತರ ಬಂದ್ ಗೆ ಬೆಂಬಲ ವ್ಯಕ್ತಪಡಿಸಲಾಯಿತು.

ಪ್ರತಿಭಟನಾ ಮೆರವಣಿಗೆಯ ನಂತರ ನೆಹರೂ ಮಾರುಕಟ್ಟೆ ಬಳಿಯ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ಸಭೆ ನಡೆಸಿದರು.

ಸಭೆಯನ್ನು ಉದ್ದೇಶಿಸಿ ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ ಹಿರಿಯೂರು ರೈತರ ಚಳುವಳಿಯ ಬದ್ಧತೆ ಮೆಚ್ಚುವಂತಹದು. ಇಲ್ಲಿನವು ಧೀರ್ಘಕಾಲಿಕ ಹೋರಾಟಗಳು. ಸರ್ಕಾರದ ಕಾನೂನುಗಳು ಸರ್ಕಾರದ ವ್ಯವಸ್ಥೆಗಳು ಶ್ರೀ ಸಾಮಾನ್ಯನ ಪರವಾಗಿಲ್ಲ. ಕೇಂದ್ರ ಭದ್ರಾ ಯೋಜನೆಗೆ ನೀಡುತ್ತೇವೆ ಎಂದ ಹಣ ಬಿಡುಗಡೆ ಆಗಲಿಲ್ಲ. ಆದರೆ ಜನ ವಿಧಾನ ಸಭೆ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿದರು.

ರಾಜಕಾರಣಿಗಳಿಗೆ ಜನರ ಮತ ಬೇಕಷ್ಟೆ ಹೊರತು ಅಭಿವೃದ್ಧಿ ಬೇಕಿಲ್ಲ.ರೈತರನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಗಡೆಯ ದಾಳಗಳನ್ನಾಗಿಸಿಕೊಂಡಿವೆ.

ಇಡೀ ದೇಶಕ್ಕೆ ಅನ್ನ, ಬಟ್ಟೆ, ಹಾಲು, ಬೆಣ್ಣೆ,ತುಪ್ಪ, ಹಣ್ಣು ಹಂಪಲು ಹಂಚಿದ ರೈತರು ನೆಮ್ಮದಿಯಾಗಿ ಸುಖವಾಗಿ ಇರಬೇಕಿತ್ತು. ಆದರೆ ದುರಂತ ಎಂದರೆ ಇಂದು ರೈತರೇ ನೆಮ್ಮದಿಯಾಗಿಲ್ಲ.ಅಧಿಕಾರ ಇದ್ದಾಗ ಒಂದು ಅಧಿಕಾರ ಇಲ್ಲದಿದ್ದಾಗ ಒಂದು ಮಾತು ಆಡುವ ರಾಜಕಾರಣಿಗಳು ತುಂಬಿ ತುಳುಕುತ್ತಿದ್ದಾರೆ.ಇಂದು ಒಬ್ಬ ಡಿ ಗ್ರೂಪ್ ನೌಕರನಿಂದ ಹಿಡಿದು ಎಲ್ಲರ ಬದುಕಿಗೂ ಭದ್ರತೆ ಇದೆ.ಆದರೆ ರೈತರ ಬದುಕಿಗೆ ಭದ್ರತೆಯೇ ಇಲ್ಲದಂತಾಗಿದೆ.

ಅಗ್ಗದ ದರದಲ್ಲಿ ಆಹಾರ ಉತ್ಪನ್ನ ಕೊಟ್ಟು ಎಲ್ಲರನ್ನು ಸುಖವಾಗಿಟ್ಟಿರುವ ರೈತರು ಶೆಡ್ ಗಳಲ್ಲಿ, ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.ನೀರು ತೆಗೆದುಕೊಳ್ಳುವುದು ನಮ್ಮ ಹಕ್ಕು. ಆದರ ಜೊತೆಗೆ ನಾವೆಲ್ಲಾ ನಮ್ಮ ನಮ್ಮ ಬದುಕುಗಳನ್ನು ಕಟ್ಟಿಕೊಳ್ಳಬೇಕು.ಹಳ್ಳಿ ಹಳ್ಳಿಗಳಲ್ಲೂ ರೈತ ಸಂಘದ ಶಾಖೆ ಶುರುವಾಗಬೇಕು. ಮನೆ ಮನೆಗಳಲ್ಲೂ ರೈತರ ಬಗ್ಗೆ ಮಾತಾಡುವಂತಾಗಬೇಕು. ರೈತ ಸಂಘದ ಶಾಖೆಗಳಿಗೆ ಮಹಿಳೆಯರು ಹೆಚ್ಚಿನದಾಗಿ ಸೇರ್ಪಡೆಯಾಗಬೇಕು ಎಂದರು.

ಬಂದ್ ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಮಾತನಾಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕಳೆದ 215 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ರೈತರು ಬೀದಿಗೆ ಬಿದ್ದು ಚಳುವಳಿ ಶುರು ಮಾಡಿದ್ದಾರೆ. 2023 ರಲ್ಲಿ ಮಳೆಯಿಲ್ಲದೇ ಕಲುವಳ್ಳಿ ಭಾಗದಲ್ಲಿ ಕೆರೆಗಳೆಲ್ಲ ಬತ್ತಿ ಹೋಗಿವೆ. ನಮ್ಮ ಜಿಲ್ಲೆ ಮತ್ತು ತಾಲೂಕು ಅಂತರ್ಜಲ ಮಟ್ಟದಲ್ಲಿ ಭಾರಿ ಇಳಿಕೆ ಕಂಡಿದೆ. ನಮ್ಮ ಮಣ್ಣಿನ ಕೆರೆ ತುಂಬಿಸಿ ಎಂದು ಮಾಡಿದ ಹೋರಾಟವನ್ನು ಸರ್ಕಾರ ಗಮನಿಸುತ್ತಿಲ್ಲ.

ಜೆಜಿ ಹಳ್ಳಿ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು ಸಹ ಕುಡಿಯುವ ನೀರಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮನ್ನು ಆಳಿದ ಜನಪ್ರತಿನಿಧಿಗಳು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಿರಿಯೂರು ಬಂದ್ ವಿಷಯ ತಿಳಿದ ಸಿಎಂ ಹಾಗೂ ಇಲ್ಲಿನ ಸಚಿವರು ವಿಧಾನಸೌಧದಲ್ಲಿ ಸಭೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಇದು ಸ್ವಾಗತಾರ್ಹ. ಆದರೆ ನಾಳೆ ಬರುವಾಗ ಮುಖ್ಯಮಂತ್ರಿಗಳಿಂದ ಕೆರೆಗೆ ನೀರು ಹರಿಸುವ ಆದೇಶ ತರಬೇಕು. ಹನಿ ನೀರಾವರಿ ಮೂಲಕ ಜಮೀನುಗಳಿಗೆ ನೀರನ್ನು ಮಳೆಗಾಲದಲ್ಲಿ ಹರಿಸುತ್ತಾರಂತೆ.

ಮಳೆಗಾಲದಲ್ಲಿ ನೀರು ಯಾರಿಗೆ ಬೇಕು. ಈ ಅವೈಜ್ಞಾನಿಕ ಡ್ರಿಪ್ ಇರಿಗೇಶನ್ ಕಾಮಗಾರಿ ನಿಲ್ಲಿಸಬೇಕು. ಇಲ್ಲಿನ ರೈತರಿಗೆ ಮೈಸೂರು ಮಹಾರಾಜರು ಡ್ಯಾಂ ಕಟ್ಟಿಸಿದ್ದಾರೆ. ಆದರೆ ಕಾಲುವೆ ಸ್ವಚ್ಛಗೊಳಿಸುವ ಶಕ್ತಿಯೂ ಸಹ ಈಗಿನವರಿಗಿಲ್ಲ. ನಮ್ಮ ರೈತರಿಗೆ ಯಾವುದೇ ತೊಂದರೆಯಾದರೆ ಸಚಿವರೇ ಹೊಣೆಗಾರರಾಗುತ್ತಾರೆ. ನಾವು ಯಾರ ಆಸ್ತಿಯನ್ನು ಕೇಳಿಲ್ಲ. ನಮ್ಮ ಹಕ್ಕು ಕೇಳುತ್ತಿದ್ದೇವೆ.

ನಾವು ಯಾರಿಗೂ ಅಂಜುವ ಪ್ರಶ್ನೆಯೇ ಇಲ್ಲ. ಹಿರಿಯೂರಿನ ಪೊಲೀಸರು ನನ್ನ ಮೇಲೆ ಹಲವಾರು ಪ್ರಕರಣಗಳಿವೆ. ಅವರ ಹೋರಾಟಕ್ಕೆ ಯಾರು ಹೋಗಬಾರದು ಎಂದು ರೈತರಿಗೆ ದಾರಿ ತಪ್ಪಿಸುತ್ತಿದ್ದಾರೆ.ಹಾಗಾಗಿಯೇ ಇನ್ನಷ್ಟು ರೈತರು ಸೇರುವುದಕ್ಕೆ ಅಡ್ಡಗಾಲಾಗಿದ್ದಾರೆ. ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುವುದು  ಸಮಂಜಸವಲ್ಲ. ಇಂತಹ ಕೆಲಸಕ್ಕೆ ಪೊಲೀಸರು ಕೈ ಹಾಕಬಾರದು.ಅಪಪ್ರಚಾರ ಮಾಡಿ ಸಂಘಟನಾ ಶಕ್ತಿ ಕುಂದಿಸುತ್ತೇವೆ ಎಂದರೆ ಅದು ಅವರ ಭ್ರಮೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜೇಶ್ ಕುಮಾರ್, ರೈತ ಮುಖಂಡರಾದ ಮಲ್ಲಿಕಾರ್ಜುನ್, ಬಸವರಾಜ್, ರಾಜ್ಯ ಕಾರ್ಯದರ್ಶಿ ನಿಜಲಿಂಗಪ್ಪ, ಚಂದ್ರಣ್ಣ, ಮಂಜುನಾಥ್, ರಘುನಾಥ್, ಈಶ್ವರಪ್ಪ, ಎಂ.ಆರ್. ಈರಣ್ಣ, ಅಶ್ವತ್ಥಪ್ಪ,ಅರಳಿಕೆರೆ ತಿಪ್ಪೇಸ್ವಾಮಿ, ಗೋವಿಂದಪ್ಪಜಯರಾಮಣ್ಣ, ರಂಗಸ್ವಾಮಿಅಮೀದ್ ಹುಸೇನ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ರೈತರು ಆಗಮಿಸಿದ್ದರು.

(ಬಾಕ್ಸ್ ) ರೈತರ ಮನವಿ ಪತ್ರ ಸ್ವೀಕರಿಸಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಮಾತನಾಡಿ ನಾನು ಇದೇ ಜಿಲ್ಲೆಯವನಾಗಿದ್ದು ರೈತರು ಜೆಜಿ ಹಳ್ಳಿ ಹೋಬಳಿಯ ಕೆರೆಗೆ ನೀರು ಹರಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ನನಗೆ ತಿಳಿದಿದೆ. ಈ ಭಾಗದ ಜನರ ನೀರಿನ ಸಮಸ್ಯೆಯ ಅರಿವು ನನಗಿದೆ.

ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗುವುದು. ನಿಮ್ಮ ಹೋರಾಟಕ್ಕೆ ಪ್ರತಿಫಲ ಸಿಗುವ ನಿರೀಕ್ಷೆಯಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆ ಬಗ್ಗೆ ಸಿಎಂ  ಡಿಸಿಎಂ ಹಾಗೂ ಸಣ್ಣ ನೀರಾವರಿ ಸಚಿವರನ್ನು ಭೇಟಿ ಮಾಡಿ ಬಗ್ಗೆ ಚರ್ಚಿಸಿ ಮನವಿ ಮಾಡಿ ಅನುಧಾನ ನೀಡುವಂತೆ ಕೋರಿರುವ ವಿಚಾರ ನಿಮಗೆಲ್ಲ ತಿಳಿದಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ರೈತರ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸಿ ರೈತರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. 

- Advertisement -  - Advertisement -  - Advertisement - 
Share This Article
error: Content is protected !!
";