ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಪಂ, ತಾಪಂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಸಜ್ಜಾಗುತ್ತಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರು, ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಇವರುಗಳ ಸೂಚನೆ ಮೇರೆಗೆ ಜಿಲ್ಲೆಯ ವಿವಿಧ ತಾಲೂಕು ಘಟಕಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.
ಇತ್ತೀಚೆಗೆ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಕೆ.ಮಂಜುನಾಥ್ ಆಯ್ಕೆ ಆಗಿದ್ದು ಅದರ ಬೆನ್ನಲ್ಲೇ ಹಿರಿಯೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ರಂಗೇನಹಳ್ಳಿ ಕೆ ಶಂಕರಮೂರ್ತಿ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಪ್ರದೇಶ ಜನತಾದಳ ಜಾತ್ಯತೀತದ ರಾಜ್ಯ ಚುನಾವಣಾಧಿಕಾರಿ ಕೆ ಎ ತಿಪ್ಪೇಸ್ವಾಮಿ ಮತ್ತು ಚಿತ್ರದುರ್ಗ ಜಿಲ್ಲಾ ಜನತಾದಳ ಜಾತ್ಯತೀತ ಚುನಾವಣಾಧಿಕಾರಿ ಪ್ರತಾಪ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಜಿಲ್ಲಾ ಜನತಾದಳ ಪಕ್ಷದ ಸಾಂಸ್ಥಿಕ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಕೆ ಮಂಜುನಾಥ್ ಆಯ್ಕೆಯಾಗಿರುತ್ತಾರೆ.

ಇವರ ಆಯ್ಕೆ ಬೆನ್ನಲ್ಲೇ ಹಿರಿಯೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಕೆ ಶಂಕರ್ ಮೂರ್ತಿ, ಚಿತ್ರದುರ್ಗ ತಾಲೂಕು ಅಧ್ಯಕ್ಷರಾಗಿ ಟಿ,ಸಣ್ಣತಿಮ್ಮಣ್ಣ, ಹೊಳಲ್ಕೆರೆ ತಾಲೂಕು ಅಧ್ಯಕ್ಷರಾಗಿ ಪರಮೇಶ್ವರಪ್ಪ, ಹೊಸದುರ್ಗ ತಾಲೂಕು ಅಧ್ಯಕ್ಷರಾಗಿ ಜಿ.ಕಿರಣ್, ಚಳ್ಳಕೆರೆ ಅಧ್ಯಕ್ಷರಾಗಿ ಪಿ.ತಿಪ್ಪೇಸ್ವಾಮಿ, ಮೊಳಕಾಲ್ಮೂರು ತಾಲೂಕು ಅಧ್ಯಕ್ಷರಾಗಿ ಡಿ.ಬಿ ಕರಿಬಸಪ್ಪ ಅವರನ್ನು ವರಿಷ್ಠರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ.
ಜಿಲ್ಲಾ ಸಮಿತಿ ನೀಡಿದ ಪಟ್ಟಿಯನ್ನು ರಾಜ್ಯ ಚುನಾವಣಾ ಅಧಿಕಾರಿಗಳು ಸ್ವೀಕರಿಸಿ ಮತ್ತು ಪರಿಶೀಲಿಸಿ ಅನುಮೋದಿಸಿರುತ್ತಾರೆ.
ಶಂಕರಮೂರ್ತಿ ಯಾರು?:
ಜೆಡಿಎಸ್ ಪಕ್ಷದ ಕಟ್ಟಾ ಅನುಯಾಯಿ, ನಿಷ್ಟಾವಂತ ಕಾರ್ಯಕರ್ತರು, ಮುಖಂಡರಾಗಿರುವ ರಂಗೇನಹಳ್ಳಿಯ ಕೆ.ಶಂಕರಮೂರ್ತಿ ಅವರು 1990ರ ದಶಕದಿಂದಲೇ ರಾಜಕೀಯ ಪ್ರವೇಶ ಮಾಡಿದವರು. ಜೆಡಿಎಸ್ ಸೋಲಲಿ, ಗೆಲ್ಲಲಿ ಎಂದೂ ಹಿಗ್ಗದೆ, ಕುಗ್ಗದೆ, ಪಕ್ಷ ವಿರೋಧಿ ಚಟುವಟಿಕೆ ಮಾಡದ ಶಂಕರಮೂರ್ತಿ ಅವರು ಸದಾ ಪಕ್ಷ ನಿಷ್ಠರಾಗಿದ್ದಾರೆ.
ಇವರ ಪಕ್ಷ ನಿಷ್ಠೆಗೆ ಮನಸೋತ ಅಂದಿನ ನಾಯಕರಾದ ಡಿ.ಮಂಜುನಾಥ್ ಅವರು 1995ರಲ್ಲಿ ಇವರಿಗೆ ತಾಲೂಕು ಪಂಚಾಯಿತಿ ಟಿಕೆಟ್ ನೀಡುತ್ತಾರೆ. ಮೊದಲ ಪ್ರಯತ್ನದಲ್ಲೇ ಆಯ್ಕೆಯಾದ ಇವರು 2000 ಇಸವಿ ತನಕ ತಾಪಂ ಸದಸ್ಯರಾಗಿ ಮತ್ತೇ 2016-2021ರವರೆಗೆ ತಾಪಂ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಿಷ್ಠೆಯಿಂದ ಕೆಲಸ ಮಾಡಿರುತ್ತಾರೆ.
ಹಾಲಿ 2025ರಿಂದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ ಶಂಕರಮೂರ್ತಿ ಅವರು ಆಯ್ಕೆಯಾಗಿದ್ದು ರೈತರ ಪರವಾಗಿ ಸೇವೆ ಸಲ್ಲಿಸುತ್ತಿರುವ ಸರಳ ಸಜ್ಜನಿಕೆಯ ಸಕಾರಮೂರ್ತಿಯಾಗಿ ತಾಲೂಕಿನ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ರಾಜ್ಯ, ಜಿಲ್ಲಾ ವರಿಷ್ಠರಿಗೆ ಅತ್ಯಂತ ನಿಷ್ಠರಾಗಿ ಪಕ್ಷದ ಸೇವೆ ಮಾಡುತ್ತಿದ್ದು ಅವರ ಆಯ್ಕೆಗೆ ಅಭಿನಂದನೆಗಳ ಸುರಿಮಳೆ ಆಗುತ್ತಿದೆ.

