ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಗುರು ಬಿಷ್ಟಪ್ಪಯ್ಯ ಮತ್ತು ಗೋಣಿಬಸಪ್ಪ ಇವರುಗಳು ಇತಿಹಾಸ ಪುರುಷರು ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಆಲೂರು ವೆಂಕಟರಾಯರು ಹೇಳಿದ್ದಾರೆಂದು ಸಾಹಿತಿ-ಸಂಶೋಧಕಿ ಬೆಂಗಳೂರಿನ ವಸುಂಧರಾ ದೇಸಾಯಿ ತಿಳಿಸಿದರು.
ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎ.ಹಾಲ್ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ೫೪ ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಜಯನಗರೋತ್ತರ ಕಾಲದ ಈರ್ವರು ಇತಿಹಾಸ ಪುರುಷರು ಗುರು ಬಿಷ್ಟಪ್ಪಯ್ಯ, ಗೋಣಿಬಸಪ್ಪ ಕುರಿತು ಉಪನ್ಯಾಸ ನೀಡಿದರು.
ಬಿಷ್ಟಪ್ಪಯ್ಯ ಕಟ್ಟಿರುವ ಗುಡಿಗಳನ್ನು ಅಧ್ಯಯನ ನಡೆಸಿದ್ದೇನೆ. ವಾಸ್ತುಶಿಲ್ಪ, ಶಿಲ್ಪಶಾಸ್ತ್ರ, ಆಧ್ಯಾತ್ಮದಲ್ಲಿ ಅವರ ಹೆಜ್ಜೆ ಗುರುತುಗಳನ್ನು ನೋಡಬಹುದು. ಈ ಇಬ್ಬರು ತಂತ್ರಶಾಸ್ತ್ರಜ್ಞರು ಸಂಪೂರ್ಣವಾಗಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡವರು. ಕಲ್ಯಾಣ ಚಾಲುಕ್ಯರ ಏಳೆಂಟು ಗುಡಿಗಳು ಎಲ್ಲಾ ಭಗ್ನವಾಗಿದ್ದವು. ತಂತ್ರಶಾಸ್ತ್ರದಲ್ಲಿ ನರಬಲಿಗೆ ಪ್ರಾಧಾನ್ಯತೆಯಿದೆ. ಆತ್ಮರೂಪವಾಗಿ ಬಂದು ಕುಳಿತದ್ದನ್ನು ನಂಬುವುದು, ಬಿಡುವುದು ಅವರವರ ವಿಚಾರಕ್ಕೆ ಬಿಟ್ಟಿದ್ದು, ಬೇರೆ ಬೇರೆ ದೇವತೆಗಳ ಜೊತೆ ನವೀಕರಿಸಿಕೊಂಡರು. ಕಾರ್ತಿಕೇಯ ಅವರ ಆರಾಧ್ಯ ದೈವ. ಹನಸಿ ಗುಡಿಯಲ್ಲಿ ನವಿಲುಗಳ ಚಿತ್ರವನ್ನು ನೋಡಬಹುದು. ಧರ್ಮ ರಕ್ಷಿಸಲು ಕೈಯಲ್ಲಿ ಆಯುಧ ಹಿಡಿರುವುದು ನನ್ನ ಸಂಶೋಧನೆಯಲ್ಲಿ ಕಂಡು ಬಂದಿತು ಎಂದು ಹೇಳಿದರು.
ಪ್ರತಿಯೊಂದು ಒಂದಕ್ಕೊಂದು ಪುರಾವೆಯಿದೆ. ಅವರ ಎಲ್ಲಾ ನಿರ್ಮಾಣಗಳು ಇಂಡೊ-ಇಸ್ಲಾಮಿಕ್ ಶೈಲಿಯಲ್ಲಿವೆ. ಇತಿಹಾಸ ತಜ್ಞರು ಮೌಖಿಕ ಪರಂಪರೆಯನ್ನು ಗಮನಿಸಬೇಕು. ಸಂಶೋಧನೆಯಲ್ಲಿ ಕ್ಷೇತ್ರ ಕಾರ್ಯ ಮುಖ್ಯ. ಸಾಮ್ರಾಜ್ಯ ಪತನ ನಂತರ ಯಾವ್ಯಾವ ಕೆಲಸ ಆಗಿವೆ ಎನ್ನುವುದನ್ನು ಸಂಶೋಧಕರುಗಳು ಹೇಳಿದ್ದಾರೆ. ಬಿಷ್ಟಪ್ಪಯ್ಯ ಹಾಗೂ ಗೋಣಿಬಸಪ್ಪ ಇವರುಗಳಿಗೆ ಸಂಬಂಧಿಸಿದ ಬಹಳಷ್ಟು ಶಿಲ್ಪಗಳು ಸಿಗುತ್ತವೆ.
ಗೋಣಿಸ್ವಾಮಿ ಹುಲಿ ಸವಾರಿ ಮಾಡಿಕೊಂಡು ಬರುತ್ತಿದ್ದರು ಎನ್ನುವುದನ್ನು ವಾಸ್ತುಶಿಲ್ಪ, ಶಿಲ್ಪಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಬೇಕಿದೆ. ಬಿಷ್ಟಪ್ಪಯ್ಯ ಗೋಪುರ ಕಟ್ಟಿದರು ಆಗ ಅವರ ಹೆಂಡತಿ ತುಂಬು ಗರ್ಭಿಣಿ ಬಲಿಯಾದರು ಎನ್ನಲಾಗುತ್ತದೆ. ಬಿಷ್ಟಪ್ಪಯ್ಯ ಯಾವ ಸನ್ಮಾನವನ್ನು ಸ್ವೀಕರಿಸುತ್ತಿರಲಿಲ್ಲ. ಹೋಮಕುಂಡದ ಹತ್ತಿರವೇ ಇರುತ್ತಿದ್ದರು. ವಾಸಿಸಲು ಮನೆ ಕಟ್ಟಿಕೊಳ್ಳಲಿಲ್ಲ. ಪುರಾತತ್ವದ ನೆಲೆಯಲ್ಲಿ ಶಿಲ್ಪಗಳು ಆಧಾರ ಹೇಳಿಕೆಗಳನ್ನು ವಸ್ತುನಿಷ್ಟ ಅಧ್ಯಯನ ನಡೆಸಿದ್ದೇನೆ. ಆದರೂ ಗೊಂದಲವಿದೆ. ತಾರ್ಕಿಕ ಅಂತ್ಯ ಕಂಡಿಲ್ಲವೆಂದು ಬೇಸರದಿಂದ ನುಡಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಇತಿಹಾಸ ನಿಂತ ನೀರಲ್ಲ. ಹರಿಯುವ ನೀರಿದ್ದಂತೆ. ಬದಲಾಗುವ ಚರಿತ್ರೆಯನ್ನು ವಸ್ತುನಿಷ್ಟ ನೆಲೆಯಿಂದ ನೋಡಿದಾಗ ಸಂಶೋಧಕರು ಒಪ್ಪಿಕೊಳ್ಳಬೇಕು. ಎಲೆಮರೆಯಲ್ಲಿರುವ ಪ್ರತಿಭೆಗಳನ್ನು ಹುಡುಕಿ ಬೆಳಕಿಗೆ ತಂದು ವೇದಿಕೆ ನೀಡುವುದು ಚಿತ್ರದುರ್ಗ ಇತಿಹಾಸ ಕೂಟದ ಉದ್ದೇಶ. ಹೊಸದನ್ನು ಕಂಡುಕೊಂಡಾಗ ಧೈರ್ಯವಾಗಿ ಹೇಳುವ ಎದೆಗಾರಿಕೆ ಸಂಶೋಧಕನಿಗಿರಬೇಕೆಂದರು.
ಸಾಹಿತಿ ಬಿ.ಎಲ್.ವೇಣು, ಡಿ.ಗೋಪಾಲಸ್ವಾಮಿ ನಾಯಕ, ಮಲ್ಲಿಕಾರ್ಜುನಯ್ಯ, ಮೃತ್ಯುಂಜಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ರಾಜಾಮದಕರಿ ಜಯಚಂದ್ರನಾಯಕ, ಬಿ.ಆರ್.ಶಿವಕುಮಾರ್, ರಂಗಸ್ವಾಮಿ, ಸುಬ್ರಮಣ್ಯ, ಸಿದ್ದಪ್ಪ, ತಿಪ್ಪೇಸ್ವಾಮಿ, ಉಚ್ಚಯ್ಯ, ದೇವರಾಜ್, ಗುರುಪ್ರಸಾದ್, ಡಾ.ಆರ್.ಎಸ್.ಉಮೇಶ್, ಚಿದಾನಂದಮೂರ್ತಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿದ್ದರು.

