ಚಂದ್ರವಳ್ಳಿ ನ್ಯೂಸ್, ತುಮಕೂರು:
ನಗರದ ಮಹಾನಗರ ಪಾಲಿಕೆ ಆವರಣ ಟೌನ್ ಹಾಲ್ ಐತಿಹಾಸಿಕ ಕಟ್ಟಡದ ಮುಂಭಾಗ ಏಪ್ರಿಲ್ ೧೪ರಂದು ಡಾ: ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದೆಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಡಾಃ ಬಿ.ಆರ್. ಅಂಬೇಡ್ಕರ್ ಹಾಗೂ ಡಾಃ ಬಾಬು ಜಗಜೀವನರಾಮ್ ಜಯಂತಿ ಕುರಿತು ಅಧಿಕಾರಿ ಹಾಗೂ ದಲಿತ ಮುಖಂಡರೊಂದಿಗೆ ಪೂರ್ವ ಭಾವಿ ಸಭೆ ನಡೆಸಿ ಮಾತನಾಡಿದ ಅವರು ಡಾಃ ಬಿ.ಆರ್. ಅಂಬೇಡ್ಕರ್ ದಿನಾಚರಣೆಯಂದು ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯಿಂದ ಸುಮಾರು ೬೦ ವರ್ಷಗಳ ದಲಿತ ಸಮುದಾಯದವರ ಬೇಡಿಕೆ ಈಡೇರಿದಂತಾಗುತ್ತದೆ. ಪ್ರತಿಮೆಯು ೧೨ ಅಡಿ ಎತ್ತರ, ೧೦೦೦ ಕೆ.ಜಿ ತೂಕ ಹೊಂದಿದ್ದು, ತಯಾರಿಕೆಗೆ ೩೯ ಲಕ್ಷ ರೂ. ವೆಚ್ಚವಾಗಿದೆ. ಪ್ರತಿಮೆಯನ್ನು ಸಿದ್ಧಾರ್ಥ ಸಂಸ್ಥೆಯಿಂದ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಚುನವಾಣೆ ನೀತಿ ಸಂಹಿತೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ಡಾಃ ಬಿ.ಆರ್. ಅಂಬೇಡ್ಕರ್ ಹಾಗೂ ಡಾಃ ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ದಸರಾ ಹಬ್ಬದ ಮಾದರಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿಗಳನ್ನೊಳಗೊಂಡಂತೆ ಜಿಲ್ಲೆಯ ಶಕ್ತಿಯ ಸಂಕೇತವಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ದಸರಾ ಉತ್ಸವದಲ್ಲಿ ಪಾಲ್ಗೊಂಡಂತೆ ಅದೇ ಭಾವನೆ, ಉತ್ಸಾಹ, ಸಂಭ್ರಮದಲ್ಲಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಕೂಡ ಜರುಗಬೇಕು. ಇದು ಕೇವಲ ಕಾರ್ಯಕ್ರಮವಲ್ಲ, ಸಮಾಜಕ್ಕೆ ಅಂಬೇಡ್ಕರ್ ಅವರ ಚಿಂತನೆ ಮತ್ತು ಸಂವಿಧಾನಾತ್ಮಕ ಆದರ್ಶಗಳನ್ನು ನೆನಪಿಸುವ ಮಹತ್ವದ ಕ್ಷಣವಾಗಬೇಕು ಎಂದು ತಿಳಿಸಿದರು.
ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂಬೇಡ್ಕರ್ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಆದರೆ ತುಮಕೂರಿನಲ್ಲಿ ಕೈಗೂಡಿರಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಹಾಗೂ ಬಾಬು ಜಗಜೀವನ್ ರಾಮ್ ಪ್ರತಿಮೆ ಇಡಲು ಮುಂದಾದಾಗ ಕಾನೂನಾತ್ಮಕವಾಗಿ ಅನೇಕ ಅಡಚಣೆಗಳು ಬಂದಿವೆ. ಆದರೆ ಈಗ ಸಚಿವ ಸಂಪುಟದಿಂದ ಅನುಮೋದನೆ ದೊರೆತಿರುವುದರಿಂದ ಯಾರ ವಿರೋಧವೂ ಬರುವುದಿಲ್ಲವೆಂದು ತಿಳಿಸಿದರು.
ಡಾಃ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವು ರಾಜ್ಯದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಬೇಕು. ಅಂಬೇಡ್ಕರ್ ಅವರ ಕುರಿತು ಮುಂದಿನ ಪೀಳಿಗೆಯವರಿಗೂ ಸಂದೇಶಗಳನ್ನು ತಲುಪಿಸಬೇಕು. ಅಂಬೇಡ್ಕರ್ ಪ್ರತಿಮೆ ಬಳಿ ಸಂವಿಧಾನ ಪೀಠಿಕೆಯ ಶಿಲೆಯನ್ನು ಸ್ಥಾಪಿಸಲಾಗುವುದು ಎಂದರು.
ನೆನೆಗುದಿಗೆ ಬಿದ್ದಿರುವ ಬಾಬು ಜಗಜೀವನ್ ರಾಮ್ ಅವರ ಭವನ ನಿರ್ಮಾಣದ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈ ಬಗ್ಗೆ ಆದ? ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಬಾಬು ಜಗಜೀವನ್ ರಾಮ್ ಪ್ರತಿಮೆಯನ್ನೂ ಸಹ ಸಿದ್ಧಾರ್ಥ ಸಂಸ್ಥೆ ವತಿಯಿಂದಲೇ ನಿರ್ಮಿಸಿಕೊಡಲಾಗುವುದೆಂದು ತಿಳಿಸಿದರಲ್ಲದೆ ಮುಂದಿನ ದಿನಗಳಲ್ಲಿ ೩ ತಿಂಗಳಿಗೊಮ್ಮೆ ಪರಿಶಿ? ಸಮುದಾಯಗಳೊಂದಿಗೆ ಕುಂದು-ಕೊರತೆ ಸಭೆಯನ್ನು ನಾನೇ ಖುದ್ದಾಗಿ ನಡೆಸುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ನಾಡ ಹಬ್ಬದ ಮಾದರಿಯಲ್ಲಿ ಆಚರಿಸಬೇಕು. ದಲಿತ ಸಮುದಾಯದ ಕಲಾ ತಂಡಗಳೊಂದಿಗೆ ನಗರದಲ್ಲಿ ಮೆರವಣಿಗೆ ಹೊರಡಿಸಬೇಕು ಎಂದು ಸಲಹೆ ನೀಡಿದರು.
ಒಳ ಮೀಸಲಾತಿ ಜಾರಿ ಮಾಡಿಯೇ ತೀರುತ್ತೇವೆ-
ಅಧಿಕೃತವಾದ ಜನಸಂಖ್ಯೆಯ ಆಧಾರದ ಮೇಲೆ ಒಳಮೀಸಲಾತಿ ಜಾರಿ ಮಾಡಬೇಕು. ಆದರೆ ೨೦೧೧ರ ನಂತರ ಜನ ಗಣತಿ ನಡೆದಿಲ್ಲ. ಸದಾಶಿವ ಆಯೋಗದ ವರದಿ ಆಧರಿಸಿ ಒಳಮೀಸಲಾತಿ ಜಾರಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಹತ್ತಾರು ಬಾರಿ ಚರ್ಚಿಸಲಾಗಿದೆ ಎಂದರಲ್ಲದೆ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವುದು ಅಂತಿಮ ಹಂತಕ್ಕೆ ಬಂದಿದೆ. ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಯಾವುದೇ ರೀತಿಯ ಆತಂಕಪಡುವುದು ಬೇಡ ಎಂದು ತಿಳಿಸಿದರಲ್ಲದೆ ಒಳ ಮೀಸಲಾತಿ ಜಾರಿಗಾಗಿ ನಡೆಯುವ ಪ್ರತಿಭಟನೆ ವೇಳೆ ಯಾರ ಬಗ್ಗೆಯೂ ಲಘುವಾಗಿ ಮಾತನಾಡಬಾರದು ಎಂದು ಮನವಿ ಮುಖಂಡರಲ್ಲಿ ಸಚಿವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ದಲಿತ ಸಂಘಟನೆಯ ವಿವಿಧ ಮುಖಂಡರು ಸಭೆಯಲ್ಲಿ ಹಾಜರಿದ್ದರು.