ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ಬಾಲ್ಯದಲ್ಲಿ ವೀರ ಮಕ್ಕಳ ಕುಣಿತದಲ್ಲಿ ಭಾಗವಹಿಸುತ್ತಿದ್ದೆ. ಸಿದ್ದರಾಮೇಶ್ವರ ಪೂಜೆಗೆ ವೀರಮಕ್ಕಳ ಕುಣಿತದ ಜನಪದ ನೃತ್ಯ ಈಗಲೂ ಚಾಲ್ತಿಯಲ್ಲಿದೆ. ನಾನೂ ವೀರಮಕ್ಕಳ ಕುಣಿತ ಸೇರಿದ್ದೆ. ಆಮೇಲೆ ರಾಜಪ್ಪ ಮೇಸ್ಟ್ರು ನನ್ನನ್ನು ಕರೆದುಕೊಂಡು ಹೋಗಿ ಐದನೇ ತರಗತಿಗೆ ಸೇರಿಸಿದರು. ಹೀಗೆ ನನ್ನ ಶಿಕ್ಷಣ ಆರಂಭವಾಯಿತು. ಅಲ್ಲಿಂದ ನಾನು ಎಲ್ಲೂ ಫೇಲಾಗಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶ್ರೀರಂಗಪಟ್ಟಣದ ಅಲ್ಲಾಪಟ್ಟಣದ ಶ್ರೀ ಅನ್ನದಾನೇಶ್ವರ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ, ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಗೋಪುರ ಕುಂಭಾಭಿಷೇಕ ನೆರವೇರಿಸಿ ಶುಕ್ರವಾರ ಸಿಎಂ ಅವರು ಮಾತನಾಡಿದರು.
ಜನರ ಸೇವೆಯೇ ದೇವರ ಸೇವೆ ಎಂದು ನಂಬಿದವನು ನಾನು. ಬಸವಣ್ಣನವರು ಇದನ್ನೇ “ದೇಹವೇ ದೇಗುಲ” ಎಂದು ಹಾಡಿದರು. ದೇವರು ಮತ್ತು ಜನರ ನಡುವೆ ಮಧ್ಯವರ್ತಿ ಇರಬಾರದು ಎನ್ನುವುದು ಬಸವಣ್ಣನವರ ಮೌಲ್ಯವಾಗಿತ್ತು.ನಾವು ಮಾನವೀಯವಾಗಿ ಇದ್ದರಷ್ಟೆ ದೇವರ ಸಹಾಯ ಸಿಗುತ್ತದೆ. ಅಮಾನವೀಯತೆಯಿಂದ ನಡೆಯುವವರಿಗೆ ಯಾವ ದೇವರೂ ಸಹಾಯ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಅವರ ಸಂವಿಧಾನ, ಬಸವಾದಿ ಶರಣರ ಆಶಯದಂತೆ ಜಾತಿ ನಿರ್ಮೂಲನೆ ಮಾಡಬೇಕಿದೆ. ಜಾತಿಗೆ ಚಲನೆ ಇಲ್ಲ, ವರ್ಗಕ್ಕೆ ಚಲನೆ ಇದೆ. ನಿಂತ ನೀರಾಗಿರುವ ಜಾತಿಯನ್ನು ಅಳಿಸಬೇಕಾದರೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಒದಗಿಸಬೇಕು. ಆಗ ಮಾತ್ರ ಜಾತಿ ಅಳಿಸುವ ದಿಕ್ಕಿನಲ್ಲಿ ಸಾಗಬಹುದು ಎಂದು ತಿಳಿಸಿದರು.
ನಾನು ಉಪಮುಖ್ಯಮಂತ್ರಿಯಾಗಿ ಮೊದಲ ಬಜೆಟ್ ಮಂಡಿಸುವಾಗ “ನೂರು ಕುರಿ ಎಣಿಸಲು ಬರದವನು ಬಜೆಟ್ ಮಂಡಿಸ್ತಾನಾ” ಎಂದು ಅಣಕಿಸಿದ್ದರು. ಈಗ ನಾನು 16 ಬಜೆಟ್ ಮಂಡಿಸಿದ್ದೇನೆ. ಆದ್ದರಿಂದ ಅವಕಾಶ ಮುಖ್ಯ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆ ಹೊರಗೆ ಬರುತ್ತದೆ ಎಂದು ಸಿಎಂ ತಿಳಿಸಿದರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ ಎನ್ನುವ ಬಸವಣ್ಣನವರ ಸರಳ ಧರ್ಮದ ಸಾರವನ್ನು ಪಾಲಿಸಬೇಕು. ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿ, ನ್ಯಾಯದ ಹಾದಿಯಲ್ಲಿ ನಡೆಯಬೇಕು. ಮಾಡಬಾರದ ಪಾಪದ ಕೆಲಸಗಳನ್ನು ಮಾಡಿ ಒಳ್ಳೇದು ಮಾಡಪ್ಪಾ ಅಂದ್ರೆ ದೇವರು ಒಳ್ಳೇದು ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.