ಸಿದ್ದರಾಮಯ್ಯನವಂತೆ ಸುಳ್ಳು ದಾಖಲೆ ಸೃಷ್ಟಿಸಿ ನಾನು ಸರ್ಕಾರಿ ಭೂಮಿ ಪಡೆದಿಲ್ಲ-ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ಸುಳ್ಳು ದಾಖಲೆ ಸೃಷ್ಟಿಸಿ ನಾನು ಸರ್ಕಾರಿ ಭೂಮಿ ಪಡೆದಿಲ್ಲ. ಅವರಿಗೆ ಅಧಿಕಾರ ಇದೆ
, ಏನು ಬೇಕಾದರೂ ಮಾಡುತ್ತಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ಕೇಂದ್ರ ಸಚಿವ ಹೆಚ್.ಡಿ‌.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ 40 ವರ್ಷಗಳ ಹಿಂದೆಯೇ ನಾನು ಖರೀದಿ ಮಾಡಿದ್ದೇನೆ. ಈ ಹಿಂದೆಯೇ ಹತ್ತಾರು ಬಾರಿ ಸರ್ವೇ, ತನಿಖೆ ಎಲ್ಲವೂ ನಡೆದಿದೆ. ಈಗ ಮತ್ತೆ ನಿನ್ನೆ ಸರ್ವೇ ಕಾರ್ಯ ನಡೆಸಿದ್ದಾರೆ. ತನಿಖೆ ಮಾಡುವುದಕ್ಕೆ ನಾನು ಮುಕ್ತ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಟಾರ್ಗೆಟ್ ಮಾಡುತ್ತಿದ್ದಾರೆ: ಟಾರ್ಗೆಟ್ ಮಾಡಿ ಸರ್ವೇ ಮಾಡಿಸುತ್ತಿದ್ದಾರೆ. ಇದರಲ್ಲಿ ಸಂಶಯವೇ ಬೇಡ. ಯಾವುದೇ ತನಿಖೆ ಮಾಡಲಿ, ಎಲ್ಲ ರೀತಿಯ ತನಿಖೆಗೂ ನಾನು ಮುಕ್ತವಾಗಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ಸರ್ಕಾರಿ ಜಮೀನು ಲೂಟಿ ಮಾಡಿಲ್ಲ. ಕೇತಗಾನಹಳ್ಳಿಯ ತಮ್ಮ ಜಮೀನಿಗೆ ಸಂಬಂಧಿಸಿದಂತೆ ನಿನ್ನೆ ಕಾಂಗ್ರೆಸ್‌ನ ಕೆಲ ಪುಡಾರಿಗಳು ದೂರುದಾರನನ್ನು ಕರೆಸಿ ಮಾತನಾಡಿಸಿದ್ದಾರೆ. 40 ವರ್ಷ ಇಲ್ಲದ ದೂರುದಾರರು ಈಗ ಹೇಗೆ ಉದ್ಭವವಾದರು ಎಂದು ಪ್ರಶ್ನಿಸಿದ ಅವರು, ತನಿಖೆ ನಡೆಸಲಿ, ನನ್ನದೇನೂ ತಕರಾರಿಲ್ಲ. ಸರ್ವೇ ನಡೆಸುವಂತೆ ಜಿಲ್ಲಾಧಿಕಾರಿಗಳಿಗೂ ಹೇಳಿದ್ದೇನೆ ಎಂದು ಅವರು ತಿಳಿಸಿದರು.

ನನ್ನನ್ನು ಗುರಿಯಾಗಿಸಿ ಕಳೆದ 40 ವರ್ಷಗಳಿಂದ ಈ ರೀತಿಯ ತನಿಖೆಗಳನ್ನು ನಡೆಸುತ್ತಿದ್ದಾರೆ. 1986-87ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ರಾಮಚಂದ್ರ ಎನ್ನುವವರು ಅಂದಿನ ಮುಖ್ಯಮಂತ್ರಿ, ಪ್ರಧಾನಿ, ಗೃಹ ಸಚಿವರಿಗೆ ದೂರು ನೀಡಿ ಕಾನೂನು ಬಾಹಿರ ಭೂಮಿ ಖರೀದಿ ಮಾಡಿದ್ದಾರೆ ಎಂದೆಲ್ಲಾ ಹೇಳಿದ್ದರು. ಎಲ್ಲಾ ದಾಖಲೆಗಳು ನನ್ನ ಬಳಿ ಇದೆ. ನನ್ನನ್ನು ಟಾರ್ಗೆಟ್ ಮಾಡಿ ಎಷ್ಟು ಬಾರಿ ತನಿಖೆ ನಡೆಸುತ್ತೀರಿ, 2023ರ ಮಾರ್ಚ್‌ನಲ್ಲಿ ಲೋಕಾಯುಕ್ತ ವರದಿ ಕೊಟ್ಟಿದೆ. ಸಿದ್ದರಾಮಯ್ಯ ಅವರು ಏನೇನು ಸಭೆ ಮಾಡಿಸಿದ್ದಾರೆ, ಯಾರನ್ನು ಕರೆಸಿಕೊಂಡು ಮೀಟಿಂಗ್ ಮಾಡಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದರು.

ನನ್ನ ಜಮೀನಿನ ತನಿಖೆಗೆ ಐದು ಜನರ ಎಸ್‌ಐಟಿ ತಂಡ ಮಾಡಿದ್ದಾರೆ. ಪೊಲೀಸ್ ಇಲಾಖೆ ಎಸ್‌ಐಟಿ ಆಯ್ತು, ಈಗ ಐಎಎಸ್ ಅಧಿಕಾರಿಗಳ ಎಸ್‌ಐಟಿ ತಂಡವನ್ನು ಸಿದ್ದರಾಮಯ್ಯ ರಚನೆ ಮಾಡಿದ್ದಾರೆ. ನಾನು ಎಲ್ಲದಕ್ಕೂ ಮುಕ್ತವಾಗಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿಯವರ ಚಿಯರ್​ ಲೀಡರ್ ಆಗುವುದು ಬೇಡ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ಸಿದ್ದರಾಮಯ್ಯನವರಿಂದ ದೇವೇಗೌಡರು ನೀರಾವರಿ ವಿಚಾರದಲ್ಲಿ ರಾಜ್ಯದ ಹಿತರಕ್ಷಣೆ ಮಾಡಲಿಕ್ಕೆ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ಸಿದ್ದರಾಮಯ್ಯನವರ ಕೊಡುಗೆ ಏನಿದೆ, ಎಂದಾದರೂ ಅವರು ನೀರಾವರಿ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದಾರಾ? ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.

ಮುಡಾ ಪ್ರಕರಣದ ಲೋಕಾಯುಕ್ತ ತನಿಖೆ ವರದಿಯನ್ನು ಯಾರಾದರೂ ತನಿಖೆ ಎನ್ನುತ್ತಾರಾ?, ಸಿದ್ದರಾಮಯ್ಯ ಅವರ ಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಮುಖ್ಯಮಂತ್ರಿಗಳ ವಿರುದ್ಧ ವರದಿ ಕೊಡುತ್ತಾರಾ?, ತನಿಖೆ ಹೇಗೆ ಆಗಿದೆ ಎಂಬುದು ಗೊತ್ತಿದೆ. ತನಿಖಾಧಿಕಾರಿ ವರದಿ ಸಲ್ಲಿಸುವ ಮೊದಲು ಮೇಲಾಧಿಕಾರಿಗಳಿಗೆ ವರದಿ ನೀಡಿ ಅವರಿಂದ ಅನುಮೋದನೆ ಪಡೆದು ಲೋಕಾಯುಕ್ತರಿಗೆ ವರದಿ ಕೊಡುತ್ತಾರಂತೆ. ಇದನ್ನು ಯಾರಾದರೂ ತನಿಖೆ ಎನ್ನುತ್ತಾರಾ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಲಘುವಾಗಿ ಮಾತನಾಡಿರುವುದನ್ನು ಗಮನಿಸಿದ್ದೇನೆ. ಡಿ.ಕೆ.ಶಿವಕುಮಾರ್ ಕೊಡುಗೆ ರಾಜ್ಯಕ್ಕೆ ಏನಿದೆ, ದುಡ್ಡು ಹೊಡೆದಿರುವುದೇ ಅವರ ಕೊಡುಗೆ. ಈ ಸರ್ಕಾರ ಏನೇನು ಮಾಡುತ್ತೆ ಕಾದು ನೋಡಿ ಎಲ್ಲದರ ಬಗ್ಗೆಯೂ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ, ರಾಜ್ಯದಲ್ಲಿ ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಚರ್ಚೆ ಮಾಡುತ್ತಿಲ್ಲ ಎಂದು ದೂರಿದರು.

Share This Article
error: Content is protected !!
";