ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ರಾಮ ನರ್ಸಿಂಗ್ ಕಾಲೇಜ್ ಸಹಯೋಗದಲ್ಲಿ 76 ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಗಣರಾಜ್ಯೋತ್ಸವದ ದಿನ ಸಂವಿಧಾನ ಶಿಲ್ಪಿ ಡಾ:ಬಿ ಆರ್ ಅಂಬೇಡ್ಕರ್ ರವರ ನೆನಪು ಮಾಡಿಕೊಳ್ಳದಿದ್ದರೆ ಈ ದಿನ ಅರ್ಥಪೂರ್ಣ ವಾಗಲಾರದು.
ಇಂದು ದೇಶಾದ್ಯಂತ ಗಡಿಗಳಲ್ಲಿ ಯೋಧರು ಸಂಭ್ರಮಿಸಿದರೆ ಎಲ್ಲಾ ಶಾಲಾ ಕಾಲೇಜು ಕಚೇರಿಗಳಲ್ಲಿ ಈ ದಿನವನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಾರೆ. ನಮ್ಮ ಸಂವಿಧಾನ ನವೆಂಬರ್ 26 1949 ರಲ್ಲಿ ಸಂಸತ್ ನಲ್ಲಿ ಅಂಗಿಕಾರಗೊಂಡು ಜನವರಿ 26 1950 ರಂದು ನಮ್ಮ ಸಂವಿಧಾನ ಜಾರಿಗೆ ಬಂದಾಗಿನಿಂದ ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರಪಂಚದಲ್ಲೇ ಅತಿ ದೊಡ್ಡದಾದ ಲಿಖಿತ ಸಂವಿಧಾನ ನಮ್ಮ ಭಾರತೀಯ ಸಂವಿಧಾನ ವಾಗಿದೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂದು ಹೇಳಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ ಕೃಷ್ಣಮೂರ್ತಿ ಮಾತನಾಡಿ ಭಾರತದಲ್ಲಿ ಎಲ್ಲಾ ಜಾತಿ ಧರ್ಮಗಳನ್ನು ಸಮಾನವಾಗಿ ಕಾಣುವ ಸಂವಿಧಾನ ನಮ್ಮದಾಗಿದೆ. ಅದುದರಿಂದ ವಿದ್ಯಾರ್ಥಿಗಳು 18 ವರ್ಷ ತುಂಬಿದ ನಂತರ ಮತದಾನದ ಹಕ್ಕು ಪಡೆಯುತ್ತಿರಿ.
ನೀವುಗಳು ತಮ್ಮ ಮತವನ್ನು ಆಸೆ ಆಮಿಷಗಳಿಗೆ ಮಾರಿಕೊಳ್ಳದೆ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ನಮ್ಮ ಸಂವಿಧಾನದ ಆಶಯಗಳನ್ನು ಈಡೇರಿಸಿದಂತಾಗುತ್ತದೆ. ಅದುದರಿಂದ ತಾವೆಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಮೂಲಕ ಅಂಬೇಡ್ಕರವರ ಕನಸು ನನಸಾಗುತ್ತದೆ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಪ್ರಸಿದ್ಧ ಡೆಂಟಲ್ ವೈದ್ಯರು, ಭರತನಾಟ್ಯ ಕಲಾವಿದರಾದ ಸುಚಿತ್ರಾ ರಾಜಶೇಖರ್, ವಿದ್ಯಾರ್ಥಿಗಳು ದೇಶದ ಬೆನ್ನೆಲುಬು. ನಿಮಗೆಲ್ಲ ಉತ್ತಮ ಭವಿಷ್ಯವಿದೆ. ಸಮಯ ವ್ಯರ್ಥಮಾಡದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದರೆ ಹೆಚ್ಚು ಶ್ರಮವಹಿಸಿದರೆ ನೀವು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಹೇಳಿದರು.
ವಕೀಲರ ಸಂಘದ ಖಜಾಂಚಿ ಎಂ ಮುನಿರಾಜು, ಪ್ರಾಂಶುಪಾಲ ಎಂ ಸಿ ಮಂಜುನಾಥ್, ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ರಾಮ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

