ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಸ್ಥಿತಿಯ ದುರುಪಯೋಗ ಮಾಡಿಕೊಂಡು ಕಾಳಸಂತೆಯಲ್ಲಿ ಎಲ್ಪಿಜಿ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ಸಿಲಿಂಡರ್ ಅವ್ಯವಹಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈಗಾಗಲೇ ಡಿಜಿ ನಿರ್ದೇಶನ ಕೊಟ್ಟಿದ್ದಾರೆ. ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಕಾಳಸಂತೆಯಲ್ಲಿ ಎಲ್ಪಿಜಿ ಸಿಲಿಂಡರ್ ಮಾರಾಟ ಮಾಡುತ್ತಿದ್ದರೆ ಕ್ರಮ ವಹಿಸಲಾಗುವುದು. ನಗರ ಪೊಲೀಸ್ ಆಯುಕ್ತರು ತಂಡ ರಚಿಸಿದ್ದಾರೆ ಎಂದು ತಿಳಿಸಿದರು.
ಶಾಸಕರು ದೆಹಲಿಗೆ ತೆರಳುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ಸ್ಥಾನದ ಆಕಾಂಕ್ಷಿಗಳು ಬಹಳ ಶಾಸಕರಿದ್ದಾರೆ. ಪ್ರತಿಯೊಬ್ಬರಿಗೂ ಶಾಸಕನಾಗಬೇಕು, ಸಚಿವನಾಗಬೇಕು ಅಂತ ಆಸೆ ಇರುತ್ತದೆ. ಇಲ್ಲವಾದರೆ ರಾಜಕಾರಣಕ್ಕೆ ಯಾಕೆ ಬರುತ್ತಾರೆ?. ಹುದ್ದೆಗೆ ಸೇರಿದ್ರೂ ಪ್ರಮೋಷನ್ ಇರುತ್ತವೆ.
ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ ಆಗ್ತಾರೆ, ನಂತರ ಡಿವೈಎಸ್ಪಿ ಆಗುತ್ತಾರೆ. ನಂತರ ಎಸ್ಪಿಯಾಗುತ್ತಾರೆ. ರಾಜಕಾರಣದಲ್ಲೂ ಅದೇ ರೀತಿ ಆಗುತ್ತದೆ. ಶಾಸಕರಾದವರು ಮಂತ್ರಿ ಆಗಬೇಕೆಂಬ ಆಸೆ ಇರುತ್ತದೆ. ಅದನ್ನು ತಪ್ಪು ಅಂತ ಹೇಳೋಕೆ ಆಗಲ್ಲ. ಅವರು ಸಭೆ ಮಾಡುವುದು, ಕೇಳುವುದು ಇರುತ್ತದೆ. ಇದು ರಾಜಕೀಯ ವ್ಯವಸ್ಥೆಯ ಒಂದು ಭಾಗ ಎಂದು ಹೇಳಿದರು.
ಶಾಸಕ ಇಕ್ಬಾಲ್ ಹುಸೇನ್ ಅವರ ಕುರಿತು ನಮ್ಮ ಅಭಿಪ್ರಾಯ ತಿಳಿಸ್ತೇವೆ. ಅಭಿಪ್ರಾಯ ಹೇಳುವಾಗ ಇತಿಮಿತಿ ಇರಲ್ಲ. ಪಕ್ಷದ ಇತಿಮಿತಿಮೀರಿ ಹೇಳಿದರೆ ವರಿಷ್ಠರು ನೋಡ್ತಾರೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಮಾಡ್ತಾರೆ. ಮುಂದಿನ ದಿನಗಳಲ್ಲಿ ಟಿಕೆಟ್ ಕೊಡಬೇಕು. ಎಚ್ಚರಿಕೆಯಿಂದ ಅಭಿಪ್ರಾಯಗಳನ್ನು ಹೇಳಬೇಕಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.

