ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಬೀದಿ ನಾಯಿಗಳ ಕಡಿತದಿಂದ ಜೀವ ಕಳೆದುಕೊಂಡವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಸಂಬಂಧಿಸಿದ ಸರ್ಕಾರವೇ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆಟವಾಡುವ ಮಕ್ಕಳು ಮತ್ತು ಓಡಾಡುವ ವಯೋವೃದ್ಧರು ಬೀದಿ ನಾಯಿಗಳ ಕಡಿತದಿಂದ ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಯಾರು ಹೊಣೆಗಾರರಾಗಬೇಕು ಎಂದು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿತು.
ಈ ಸಂದರ್ಭದಲ್ಲಿ ನ್ಯಾಯಪೀಠವು 9 ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿ, ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿ ನಾಯಿಗಳಿಂದ 9 ವರ್ಷದ ಮಗು ಸಾವನ್ನಪ್ಪಿದರೆ ಯಾರು ಹೊಣೆಗಾರರಾಗಬೇಕು ಎಂದು ನ್ಯಾಯಪೀಠ ಪ್ರಶ್ನಿಸಿತು. ನ್ಯಾಯಾಲಯವು ಕಣ್ಣು ಮುಚ್ಚಿ ಎಲ್ಲವೂ ನಡೆಯಲು ಬಿಡಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತು.
ಕೇವಲ ನಾಯಿಯ ಮೇಲಷ್ಟೇ ಕನಿಕರವೇಕೆ?, ಮಾನವನ ಮೇಲಿನ ದಾಳಿಗಳ ಮೇಲೆ ಏಕೆ ಸಂಘ ಸಂಸ್ಥೆಗಳು ಮಾತನಾಡುತ್ತಿಲ್ಲ. ಹೊಣೆಗಾರಿಕೆಗಾಗಿ ಕಠಿಣ ಚೌಕಟ್ಟನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಪೀಠ ಸೂಚಿಸಿದೆ.
ನಾಯಿ ಕಡಿತದಿಂದ ಉಂಟಾಗುವ ಸಾವುಗಳು ಮತ್ತು ಗಾಯಗಳಿಗೆ ಆಯಾಯ ರಾಜ್ಯಗಳು ಪರಿಹಾರ ಪಾವತಿಸಬೇಕು.
ನಾಯಿ ಮಾಲೀಕರು ಮತ್ತು ಅವುಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಮೇಲೆಯೂ ಜವಾಬ್ದಾರಿ ಇದ್ದು ಪರಿಹಾರ ನಿಗದಿಪಡಿಸಲಾಗುವುದು ಎಂದು ನ್ಯಾಯ ಪೀಠವು ಹೇಳಿದೆ.
ಬೀದಿ ನಾಯಿಗಳಿಗೆ ಜನರು ಆಹಾರ ನೀಡಲು ಅಥವಾ ಆರೈಕೆ ಮಾಡಲು ಬಯಸಿದರೆ, ಅವರು ಅದನ್ನು ತಮ್ಮ ಸ್ವಂತ ಆವರಣದಲ್ಲಿ ಮಾಡಬೇಕು ಅಥವಾ ತಮ್ಮ ಸ್ವಂತ ಮನೆಯಲ್ಲಿಯೇ ಸಾಕಬೇಕು ಮತ್ತು ತಮ್ಮ ಸ್ವಂತ ಮನೆಯಲ್ಲಿಯೇ ಆಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
ಬೀದಿ ನಾಯಿಗಳನ್ನು ಸುತ್ತಾಡಲು ಮತ್ತು ತೊಂದರೆ ಉಂಟುಮಾಡಲು ಏಕೆ ಬಿಡಬೇಕು ಎಂದು ನ್ಯಾಯಪೀಠದಿಂದ ಪ್ರಶ್ನಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಚಾರಣೆ ನಡೆಸುವಾಗ ಈ ವಿಷಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಹಿಂದಿನ ವಿಚಾರಣೆಯ ಸಮಯದಲ್ಲಿ, ನಾಯಿಗಳ ಮೇಲಿನ ಕ್ರೌರ್ಯವನ್ನು ಚಿತ್ರಿಸುವ ವೀಡಿಯೊಗಳನ್ನು ವೀಕ್ಷಿಸಲು ನಿರಾಕರಿಸಿದ್ದನ್ನು ನ್ಯಾಯಾಲಯ ನೆನಪಿಸಿಕೊಂಡಿತು, ಮಕ್ಕಳು ಮತ್ತು ವೃದ್ಧರ ಮೇಲೆ ನಾಯಿಗಳು ದಾಳಿ ಮಾಡುವ ವೀಡಿಯೊಗಳು ಸಹ ಇವೆ ಎಂಬುದನ್ನು ನ್ಯಾಯಪೀಠವು ಗಮನಿಸಿತು.

